ಅತ್ಯಾಚಾರ ಆರೋಪದಡಿ ಬಂಧನಕ್ಕೊಳಗಾಗಿದ್ದ ಆರೋಪಿಗೆ ಜಾಮೀನು ನೀಡಿದೆ.
ಕಾಣಿಯೂರಿನ ಬಂಡಾಜೆ ಎಂಬಲ್ಲಿ 2022ರ ಫೆಬ್ರವರಿ 17 ರಂದು ಯುವತಿಯೋರ್ವಳನ್ನು ಗುಡ್ಡೆಗೆ ಕರೆದುಕೊಂಡು ಹೋಗಿ ಅವಳ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ಆರೋಪಿಸಿ ಚಂದ್ರಶೇಖರ ಎಂಬುವರನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದು, ಆರೋಪಿಯನ್ನು ಅತ್ಯಾಚಾರ ಆರೋಪದಡಿಯಲ್ಲಿ ಸುಳ್ಯ ನ್ಯಾಯಾಲಯಕ್ಕೆ ಹಾಜಾರು ಪಡಿಸಿದ್ದರು. ಆರೋಪಿಗೆ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿತ್ತು.
ಆರೋಪಿಯನ್ನು ಜಾಮೀನಿನಲ್ಲಿ ಬಿಡುಗಡೆ ಮಾಡಬೇಕೆಂದು ಕೋರಿ ೨೦೨೨ ಮಾರ್ಚ್ ೩೦ ರಂದು ಸಂಬಂಧಪಟ್ಟ ಮಂಗಳೂರು ಜಿಲ್ಲಾ ಸೆಶನ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ದಾಖಲಿಸಲಾಗಿತ್ತು. ಆದರೆ ಜಾಮೀನು ಅರ್ಜಿಯನ್ನು ನ್ಯಾಯಾಲಯವು ವಜಾ ಮಾಡಿತ್ತು. ಆರೋಪಿಯು ನ್ಯಾಯಾಂಗ ಬಂಧನದಲ್ಲಿದ್ದರು.
ಇದೀಗ ತನಿಖಾಧಿಕಾರಿಯು ಆರೋಪಿಯು ಜೈಲಿನಲ್ಲಿ ಇರುವುದರಿಂದ ೯೦ ದಿನಗಳಲ್ಲಿ ದೋಷರೋಪಣ ಪಟ್ಟಿಯನ್ನು ಸಲ್ಲಿಸದ ಕಾರಣ ವಿಶೇಷ ಅರ್ಜಿಯನ್ನು ಆರೋಪಿ ಪರವಾಗಿ ಸುಳ್ಯ ನ್ಯಾಯಾಲಯದಲ್ಲಿ ದಾಖಲಿಸಲಾಯಿತು.
ಸುಳ್ಯ ನ್ಯಾಯಲಯದ ಚಾರ್ಜ್ನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ನೀಡಿದುದರಿಂದ ಬೆಳ್ತಂಗಡಿ ನ್ಯಾಯಾಲಯದ ನ್ಯಾಯಾಧೀಶರು ಈ ಪ್ರಕರಣದಲ್ಲಿ ದೋಷರೋಪಣ ಪಟ್ಟಿಯನ್ನು ಕ್ಲಪ್ತ ಸಮಯದಲ್ಲಿ ತನಿಖಾಧಿಕಾರಿ ಸಲ್ಲಿಸಿಲ್ಲ ಎಂಬುದನ್ನು ಮನಗೊಂಡು ಆರೋಪಿಯ ಮೂಲಭೂತ ಹಕ್ಕನ್ನು ಕಡೆಗಣಿಸುವಂತಿಲ್ಲ ಎಂಬ ಕಾರಣವನ್ನು ನೀಡಿ ಆರೋಪಿಗೆ ಎರಡು ಜಾಮೀನುಗಳನ್ನು ನೀಡುವ ಶರ್ತದ ಮೇರೆಗೆ ಜಾಮೀನಿನಲ್ಲಿ ಬಿಡುಗಡೆಗೊಳಿಸಿ ಜೂನ್ ೭ರಂದು ಆದೇಶ ನೀಡಲಾಗಿದೆ.
ಆರೋಪಿಗಳ ಪರವಾಗಿ ಸುಳ್ಯದ ನ್ಯಾಯವಾದಿಗಳಾದ ಯಂ. ವೆಂಕಪ್ಪ ಗೌಡ, ಚಂಪಾ ವಿ. ಗೌಡ, ರಾಜೇಶ್ ಬಿ.ಜಿ.ಶ್ಯಾಮ್ ಪ್ರಸಾದ್ ಹಾಗೂ ಮನೋಜ್ ವಕಾಲತ್ತು ವಹಿಸಿದ್ದರು.