ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ, ಮೃತರ ಕುಟುಂಬಕ್ಕೆ 25 ಲಕ್ಷ ರೂಪಾಯಿಗಳ ಪರಿಹಾರ ನೀಡುವಂತೆ ಆಗ್ರಹ
ಸುಳ್ಯ ತಾಲೂಕಿನ ಕಳಂಜ ಗ್ರಾಮದಲ್ಲಿ ಮಸೂದ್ ಎಂಬ ಯುವಕನನ್ನು ಎಂಟು ಮಂದಿಯ ತಂಡ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಕಾರಣ ಯುವಕ ಮೃತಪಟ್ಟಿದ್ದು, ಘಟನೆಯನ್ನು ಸುಳ್ಯ ತಾಲೂಕು ಮುಸ್ಲಿಂ ಒಕ್ಕೂಟ ತೀವ್ರವಾಗಿ ಖಂಡಿಸಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಮುಸ್ಲಿಂ ಒಕ್ಕೂಟ ” ಘಟನೆಗೆ ಸಂಬಂಧಿಸಿದಂತೆ ಎಂಟು ಮಂದಿ ಆರೋಪಿಗಳನ್ನು ಬೆಳ್ಳಾರೆ ಪೊಲೀಸರು ತಕ್ಷಣವೇ ಬಂಧಿಸಿದ್ದು ಪೊಲೀಸ್ ಇಲಾಖೆಯ ಈ ಕಾರ್ಯವನ್ನು ಸಂಘಟನೆಯಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದೇವೆ. ಅದೇ ರೀತಿ ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯದಂತೆ ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸುವಲ್ಲಿ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ” ಎಂದು ಒಕ್ಕೂಟದ ಸಂಚಾಲಕ ಇಕ್ಬಾಲ್ ಎಲಿಮಲೆ, ತಾಲೂಕು ಮಸೀದಿ ಸಮನ್ವಯ ಸಮಿತಿ ಸಂಚಾಲಕರಾದ ಹಾಜಿ ಕೆ.ಎಂ. ಮುಸ್ತಫ, ಮುಸ್ಲಿಮ್ ಒಕ್ಕೂಟದ ಸಹ ಸಂಚಾಲಕರಾದ ಕೆ.ಎಸ್. ಉಮ್ಮರ್, ಒಕ್ಕೂಟದ ಮುಖಂಡರಾದ ಹಾಜಿ ಇಬ್ರಾಹಿಂ ಕತ್ತರ್ ಮಂಡೆಕೋಲು, ಕೆ.ಬಿ. ಅಬ್ದುಲ್ ಮಜೀದ್, ಮಸೀದಿ ಸಮನ್ವಯ ಸಮಿತಿ ಸದಸ್ಯರಾದ ಅಬ್ದುಲ್ ಗಫೂರ್ ಕಲ್ಮಡ್ಕ, ಇಸ್ಮಾಯಿಲ್ ಪಡ್ಪಿನಂಗಡಿ ಆಗ್ರಹಿಸಿದ್ದಾರೆ.
ಮೃತ ಮಸೂದ್ ಕುಟುಂಬಕ್ಕೆ ಸರಕಾರ 25 ಲಕ್ಷ ರೂಪಾಯಿಗಳ ಪರಿಹಾರ ಘೋಷಿಸುವಂತೆ ಅವರು ಅಗ್ರಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಮೃತಪಟ್ಟ ಯುವಕನ ಕುಟುಂಬದ ಕಾನೂನು ಹೋರಾಟಕ್ಕೆ ತಾಲೂಕು ಮುಸ್ಲಿಮ್ ಒಕ್ಕೂಟ ಪೂರ್ಣಪ್ರಮಾಣದ ಬೆಂಬಲವನ್ನು ಕೊಡಲಿದೆ. ಯುವಕನ ಅಗಲಿದ ಕುಟುಂಬಕ್ಕೆ ಮುಸ್ಲಿಮ್ ಒಕ್ಕೂಟ ಸಾಂತ್ವನ ತಿಳಿಸುತ್ತದೆ. ಮುಸ್ಲಿಂ ಸಮುದಾಯ ಭಾವೋದ್ರೇಕಕ್ಕೆ ಒಳಗಾಗದೆ ಶಾಂತಿಯನ್ನು ಕಾಪಾಡಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ ಎಂದು ಮುಸ್ಲಿಂ ಒಕ್ಕೂಟ ಹೇಳಿದೆ.