ಬೆಳ್ಳಾರೆಯಲ್ಲಿ ನಡೆದಿದ್ದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂರನೇ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಚಿಕನ್ ಸೆಂಟರ್ ಹೊಂದಿದ್ದ ಸದ್ದಾಂ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ ಎಂಬ ಬಗ್ಗೆ ಮಾಹಿತಿಯಿದೆ.
ಪ್ರವೀಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗುರುವಾರ ಇಬ್ಬರನ್ನು ವಶಕ್ಕೆ ಪಡೆದಿದ್ದರು. ಬೆಳ್ಳಾರೆಯ ಶಫೀಕ್ (27) ಮತ್ತು ಸವಣೂರಿನ ಝಾಕೀರ್ (29) ಬಂಧಿತರು. ಈ ಆರೋಪಿಗಳಿಗೆ ನ್ಯಾಯಾಂಗ ಕಸ್ಟಡಿ ವಿಧಿಸಲಾಗಿದೆ.
ಪ್ರವೀಣ್ ಅವರ ನೈಜ ಹಂತಕರು ಕೇರಳಕ್ಕೆ ಪರಾರಿಯಾಗಿದ್ದಾರೆ ಎನ್ನಲಾಗುತ್ತಿದ್ದು, ಶೋಧ ಮುಂದುವರಿದಿದೆ. ಹತ್ಯೆಗೆ ಸಂಬಂಧಿಸಿ 27 ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಹಂತಕರು ಕೇರಳದವರು ಎಂಬ ಅನುಮಾನ ಇದ್ದು, ಅವರಿಗೆ ಮಾಹಿತಿದಾರ ರಾಗಿ ಸ್ಥಳೀಯರು ಸಹಕರಿಸಿದ್ದರೇ ಅಥವಾ ಕೃತ್ಯದಲ್ಲಿ ಸ್ಥಳೀಯರು ನೇರವಾಗಿ ಭಾಗಿಯಾಗಿದ್ದಾರೆಯೇ ಎಂಬುದು ತನಿಖೆಯಿಂದ ತಿಳಿಯಬೇಕಿದೆ.