ಪಿಎಫ್ಐ ನಿಷೇಧಕ್ಕೆ ಮಾಹಿತಿ ಕಲೆ ಹಾಕುವ ಕಾರ್ಯ ನಡೆಯುತ್ತಿದೆ
ಮಸೂದ್ ಕೊಲೆ ಷಡ್ಯಂತ್ರದ ಕೊಲೆಯಲ್ಲ
ನೆಟ್ಟಾರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ
ಪ್ರವೀಣ್ ನೆಟ್ಟಾರು ಎಲ್ಲರಿಗೂ ಬೇಕಾಗಿದ್ದ ಯುವಕ. ಪ್ರೀತಿ ಮತ್ತು ಆತ್ಮೀಯತೆಯಿಂದ ಬದುಕುತ್ತಿದ್ದ ಅಮಾಯಕ ಜೀವವೊಂದು ಬಲಿಯಾಗಿದೆ. ಎನ್ಐಎ ಇದರ ತನಿಖೆಯನ್ನು ಕೈಗೆತ್ತಿಕೊಂಡಿದ್ದು ಅತೀ ಶೀಘ್ರವಾಗಿ ನ್ಯಾಯ ಸಿಗುವ ನಿರೀಕ್ಷೆ ಇದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಹತ್ಯೆಯಾದ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಿಗೆ ಅಂಗಡಿಯಲ್ಲಿ ಕೆಲಸ ಕೊಟ್ಟಿದ್ದಾರೋ, ಯಾರಿಗೆ ಅಸೌಖ್ಯವಾದಾಗ ಆಸ್ಪತ್ರೆಗೆ ಕರೆದೊಯ್ದಿದ್ದರೋ, ಅಂತಹವರೇ ಪ್ರವೀಣನ ಚಲನ ವಲನಗಳನ್ನು ಹಂತಕರಿಗೆ ನೀಡಿದ್ದಾರೆ ಎಂದರೆ ಏನರ್ಥ? ಪ್ರವೀಣ್ನನ್ನು ಟಾರ್ಗೆಟ್ ಮಾಡಿ ಕೊಲ್ಲಲಾಗಿದೆ. ಕೇರಳ ಮಾದರಿಯಲ್ಲಿ ಈ ಹತ್ಯೆ ನಡೆದಿದೆ. ಪಿಎಫ್ಐನಂತಹ ಸಂಘಟನೆಗಳು ತರಬೇತಿ ಪಡೆದು ಕೊಲ್ಲುವ ರೀತಿ ಇದು. ಅಂದೇ ಈ ವಿಚಾರವನ್ನು ಗೃಹಮಂತ್ರಿಗಳ ಗಮನಕ್ಕೆ ತರಲಾಗಿದೆ ಎಂದರಲ್ಲದೆ, ನಿನ್ನೆಯಷ್ಟೇ ತಲಶ್ಯೇರಿಯಲ್ಲಿ ಪ್ರಕರಣಕ್ಕೆ ಸಂಬಂದಿಸಿ ಆರೋಪಿಯೊಬ್ಬನನ್ನು ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಇದೆ. ಮನೆಯವರಿಗೆ ನ್ಯಾಯ ಸಿಗಬೇಕಿದ್ದರೆ ನಿಜವಾದ ಆರೋಪಿಗಳ ಬಂಧನವಾಗಬೇಕು. ಎಂದು ಹೇಳಿದರು.
ಪಿಎಫ್ಐ ನಿಷೇಧದ ಕುರಿತಂತೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವೆ, ಈ ಹಿಂದೆ ಸಿಮಿ ಸಂಘಟನೆ ಇತ್ತು. ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿ ಅದರ ನಿಷೇಧ ಮಾಡಲಾಗಿದೆ. ಪಿಎಫ್ಐ ನಿಷೇಧ ಮಾಡಿದರೆ ಅದು ಕೋರ್ಟ್ನಲ್ಲಿ ನಿಲ್ಲಬೇಕು. ಅದಕ್ಕಾಗಿ ಮಾಹಿತಿ ಕಲೆ ಹಾಕುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.
ಇಂತಹ ಹತ್ಯೆಗಳಾದಾಗ ಆಕ್ರೋಶ ಬರುವುದು ಸಹಜ. ಅದರ ಹಿಂದೆ ನೋವಿದೆ. ನಮ್ಮ ಹುಡುಗರು ಸತ್ತಿದ್ದಾರೆ ಎಂಬ ಸಿಟ್ಟಿದೆ. ಕಾನೂನು ರೀತಿಯಲ್ಲೇ ಇದನ್ನು ಸರಿಮಾಡಬೇಕು. ಆ ಎಚ್ಚರಿಕೆಯನ್ನು ನಮ್ಮ ಕಾರ್ಯಕರ್ತರು ನೀಡಿದ್ದಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಮಸೂದ್ ಕೊಲೆ ಷಡ್ಯಂತ್ರದ ಕೊಲೆಯಲ್ಲ. ಸಹಜವಾಗಿ ಹೊಡೆದಾಟದ ಸಂದರ್ಭದಲ್ಲಿ ನಡೆದ ಕೊಲೆ. ಇದರ ಹಿಂದೆ ದೇಶದ್ರೋಹದ ಪಿತೂರಿ ಇಲ್ಲ. ಆದರೆ ಪ್ರವೀಣ್ ಹತ್ಯೆ ದೇಶದ್ರೋಹದ ಪಿತೂರಿಯಿದೆ. ಆದರೆ ಯಾವ ಸಾವು ಕೂಡಾ ಅವರ ತಾಯಿಗೆ ದುಃಖ ತರಿಸುವಂತದ್ದು. ಹಾಗಾಗಿ ಎರಡೂ ಕೊಲೆಗಳ ಬಗ್ಗೆ ತನಿಖೆಯಾಗಲಿ ಎಂದು ಶೋಭಾ ಕರಂದ್ಲಾಜೆ ಹೇಳಿದರು. ಬೆಳ್ಳಾರೆ ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯುವುದಾಗಿ ಶೋಭಾ ಕರಂದ್ಲಾಜೆ ಹೇಳಿದರು.