ಕೊಯನಾಡು – ದೇವರಕೊಲ್ಲಿ ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಪ್ರಮಾಣದ ಬಿರುಕು

0

 

ಘನ ವಾಹನಗಳ ಸಂಚಾರಕ್ಕೆ ನಿರ್ಬಂಧ

ಜೆಸಿಬಿ ಮೂಲಕ ಹಳೆಯ ರಸ್ತೆಯ ದುರಸ್ತಿಕಾರ್ಯ ಪ್ರಗತಿಯಲ್ಲಿ

ಕೊಯನಾಡು ಸೇತುವೆ ಬಳಿಯೂ ದಿನದಿಂದ ದಿನಕ್ಕೆ ಕುಸಿಯುತ್ತಿರುವ ಮಣ್ಣು

ಸುಳ್ಯ – ಮಡಿಕೇರಿ ಸಂಪರ್ಕ ರಸ್ತೆ ಕುಸಿತದ ಭೀತಿ

ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಪ್ರಮಾಣದ ಮಳೆಯ ಹಿನ್ನೆಲೆಯಲ್ಲಿ ಕೊಡಗು ಸಂಪಾಜೆ ಗ್ರಾಮದ ಕೊಯನಾಡು – ದೇವರಕೊಲ್ಲಿ ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಪ್ರಮಾಣದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಘನ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದ್ದು, ಪೊಲೀಸರು ರಸ್ತೆಯ ಎರಡೂ ಬದಿಗಳಲ್ಲಿ ನಿಂತು ಬ್ಯಾರಿಕೇಡ್ ಅಳವಡಿಸಿ , ಕಾರು, ಬಸ್ಸು ಸೇರಿದಂತೆ ವಾಹನ ಸಂಚಾರಕ್ಕೆ ಅನುವುಮಾಡಿಕೊಡುತ್ತಿದ್ದಾರೆ.

ಆ.2ರಂದು ರಾತ್ರಿ ಈ ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಈ ರಸ್ತೆಯ ಪಕ್ಕದಲ್ಲೇ ಇರುವ ಹಳೆಯ ರಸ್ತೆಯನ್ನು ಜೆಸಿಬಿ ಮೂಲಕ ದುರಸ್ತಿ ಪಡಿಸಲಾಗುತ್ತಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಗಡಿಪ್ರದೇಶದಲ್ಲಿ ಒಂದಲ್ಲ ಒಂದು ರೀತಿಯ ಅವಾಂತರಗಳು ಸೃಷ್ಟಿಯಾಗುತ್ತಿದ್ದು , ಕೊಯನಾಡಿನ ಗಣಪತಿ ದೇವಾಲಯದ ಬಳಿಯೂ ತಾತ್ಕಾಲಿಕವಾಗಿ ಮರಳು ಚೀಲವನ್ನು ಇರಿಸಲಾಗಿದೆ. ಸೇತುವೆಯ ಎರಡೂ ಬದಿಗಳಲ್ಲಿ ನೀರಿನ ಸೆಳೆತಕ್ಕೆ ಮಣ್ಣು ಕುಸಿದಿದ್ದು, ಇನ್ನೂ ಮಳೆಯ ಪ್ರಮಾಣ ಹೆಚ್ಚಾದರೆ ಸುಳ್ಯ – ಮಡಿಕೇರಿ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಡಿತಗೊಳ್ಳುವ ಭೀತಿ ಎದುರಾಗಿದೆ.