ಕಾನೂನು ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ ಪ್ರಕರಣ

0

ಆರೋಪಿ ನ್ಯಾಯವಾದಿಯ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ

ಮಂಗಳೂರಿನ ಕಾನೂನು ಕಾಲೇಜಿನ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಕೀಲ ಮೂಲತಃ ಸುಳ್ಯದವರಾದ ಕೆ.ಎಸ್.ಎನ್ ರಾಜೇಶ್ ಭಟ್ ವಿರುದ್ಧ ಮಂಗಳೂರಿನ ಜೆಎಂಎಫ್‌ಸಿ ೩ನೇ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದೆ.


೨೦೨೧ರ ಸೆಪ್ಟಂಬರ್ ೨೫ರಂದು ಮಧ್ಯಾಹ್ನ ರಾಜೇಶ್ ಭಟ್ ತನ್ನ ಮಂಗಳೂರಿನ ಕರಂಗಲ್ಪಾಡಿಯ ಕಚೇರಿಯಲ್ಲಿ ಇಂಟರ್‌ನ್‌ಶಿಪ್‌ಗೆಂದು ಬಂದಿದ್ದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಅತ್ಯಾಚಾರಕ್ಕೆ ಯತ್ನಿಸಿದಾಗ ಆಕೆ ತಪ್ಪಿಸಿಕೊಂಡು ಹೋಗಿದ್ದಳು. ಅಲ್ಲದೆ ಕೃತ್ಯದ ಬಗ್ಗೆ ದೂರಿನ ವಿಚಾರವನ್ನು ಮುಕ್ತಾಯಗೊಳಿಸುವಂತೆ ಮಂಗಳೂರಿನ ಬಾರ್ ಅಸೋಸಿಯೇಶನ್‌ನ ಅಧ್ಯಕ್ಷರಿಗೆ ಒತ್ತಾಯದಲ್ಲಿ ಪತ್ರವನ್ನು ಬರೆಸಿಕೊಂಡು ಸಹಿ ಪಡೆದುಕೊಂಡಿದ್ದರು. ಬಳಿಕ ಕೃತ್ಯವನ್ನು ಮರೆಮಾಚುವ ಉದ್ಧೇಶದಿಂದ ವಿದ್ಯಾರ್ಥಿನಿಯ ಗೆಳತಿಯಿಂದ ಒತ್ತಾಯದಲ್ಲಿ ಸಹಿ ಪಡೆದುಕೊಂಡಿದ್ದರು. ಕೃತ್ಯದ ಕುರಿತು ಆಡಿಯೋ ಪ್ರಸಾರ ಮಾಡಿರುವ ಬಗ್ಗೆಯೂ, ಕೃತ್ಯವನ್ನು ಮರೆಮಾಚುವ ಉದ್ಧೇಶದಿಂದ ಒತ್ತಾಯದಿಂದ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದರು ಎಂದೂ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿ ತನ್ನ ಕಚೇರಿಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾವನ್ನು ಮೊಬೈಲ್‌ಗೆ ಸಂಪರ್ಕಿಸಿಕೊಂಡಿದ್ದರು. ಅದರ ಮೂಲಕ ವಿದ್ಯಾರ್ಥಿನಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದುದನ್ನು ಕೂಡಾ ಲೈಂಗಿಕ ಉದ್ಧೇಶದಿಂದ ನೋಡುತ್ತಿದ್ದರು. ತಲೆ ಮರೆಸಿಕೊಂಡ ಆರೋಪಿಗೆ ಅನಂತ ಭಟ್ ಮತ್ತು ಅಚ್ಚುತ ಭಟ್ ನೆರವು, ಆಶ್ರಯ ಒದಗಿಸಿದ್ದರು ಎಂದೂ ದೋಷಾರೋಪಣಾ ಪಟ್ಟಿಯಲ್ಲಿ ತಿಳಿಸಲಾಗಿದೆ. ಒಟ್ಟು ೧೧೦ ಮಂದಿ ಸಾಕ್ಷಿದಾರರನ್ನಾಗಿ ಪರಿಗಣಿಸಲಾಗಿದೆ.
ಪ್ರಕರಣದ ಗಂಭೀರತೆ ಪರಿಗಣಿಸಿ ಪೊಲೀಸ್ ಆಯುಕ್ತ ಎಂ. ಶಶಿಕುಮಾರ್ ತನಿಖೆಯನ್ನು ಅಂದಿನ ಎಸಿಬಿ ರಂಜಿತ್ ಭಂಡಾರು ಅವರಿಗೆ ವಹಿಸಿದ್ದರು. ಅನಂತರ ಎಸಿಬಿ ದಿನಕರ ಶೆಟ್ಟಿ ತನಿಖೆ ಮುಂದುವರಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ.