ಸುಳ್ಯದಲ್ಲಿ ವಿಜೃಂಭಿಸಿದ 9 ನೇ ವರ್ಷದ ಮೊಸರು ಕುಡಿಕೆ ಉತ್ಸವ

0

 

ಕೇಸರಿ ಪಡೆಯ ಯುವಕರಿಂದ ಅಲ್ಲಲ್ಲಿ ಸಾಹಸಮಯ ಅಟ್ಟಿ ಮಡಿಕೆ ಒಡೆಯುವ ಸ್ಪರ್ಧೆ

ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ಪ್ರಖಂಡದ ಆಯೋಜನೆ

ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ಪ್ರಖಂಡ ಇದರ ಆಶ್ರಯದಲ್ಲಿ 9 ನೇ ವರ್ಷದ ಮೊಸರು ಕುಡಿಕೆ ಉತ್ಸವವು ಆ.29 ರಂದು ಸುಳ್ಯದಲ್ಲಿ ನಡೆಯಿತು.
ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಅಪರಾಹ್ನ ಮೊಸರು ಕುಡಿಕೆ ಉತ್ಸವಕ್ಕೆ ದೇವಸ್ಥಾನದ ಅನುವಂಶಿಕ ಮೊಕ್ತೇಸರರ ಡಾ.ಹರಪ್ರಸಾದ್ ತುದಿಯಡ್ಕ ರವರು ತೆಂಗಿನಕಾಯಿ ಒಡೆದು ಚಾಲನೆ ನೀಡಿದರು. ಮೀನುಗಾರಿಕೆ ಬಂದರು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ರವರು ಶೋಭಾಯಾತ್ರೆಗೆ ಕೇಸರಿ ಧ್ವಜ ಹಾರಿಸಿ ಚಾಲನೆ ನೀಡಿದರು.


ವೀರ ಕೇಸರಿ ಯುವಕರ ಅಟ್ಟಿ ಮಡಿಕೆ ಒಡೆಯುವ ಶೋಭಾಯಾತ್ರೆಯು ದೇವಸ್ಥಾನದಿಂದ ಹೊರಟು ಎ.ಪಿ.ಯಂ.ಸಿ ಚೆನ್ನಕೇಶವ ವೃತ್ತದ ಮೂಲಕ ಕುರುಂಜಿಭಾಗ್, ಅಂಬಟೆಡ್ಕ, ವಿವೇಕಾನಂದ ಸರ್ಕಲ್, ಜೂನಿಯರ್ ಕಾಲೇಜ್ ರಸ್ತೆಯಾಗಿ ಮುಳಿಯ ಮೈದಾನ, ಶಾಸ್ತ್ರಿ ವೃತ್ತ, ವಿಶ್ವ ಸೆಂಟ್ರಲ್ ಶ್ರೀ ರಾಂ ಪೇಟೆ , ಶ್ರೀ ಹರಿ ಕಾಂಪ್ಲೆಕ್ಸ್, ರಾಜಶ್ರೀ ಕಾಂಪ್ಲೆಕ್ಸ್, ಪಂಚಾಯತ್ ಬಸ್ ನಿಲ್ದಾಣ, ನಾಯರ್ ಕಾಂಪ್ಲೆಕ್ಸ್ ಗಾಂಧಿನಗರದಲ್ಲಿ ಮಡಿಕೆ ಒಡೆದು ಮತ್ತೆ ಹಿಂತಿರುಗಿ ರಥಬೀದಿ ಐಡಿಯಲ್ ಅಟೋ ವರ್ಕ್ಸ್ ಬಳಿ ಹಾಗೂ ದೇವಸ್ಥಾನದ ಕೌಸ್ತುಭ ಆರ್ಕೇಡ್ ಮುಂದೆ ಹಾಕಿರುವ ಸಾಲು ಅಟ್ಟಿ ಮಡಿಕೆ ಒಡೆಯುವುದರೊಂದಿಗೆ ಶೋಭಾಯಾತ್ರೆಯು ಸಮಾಪನಗೊಂಡಿತು. ಸುಮಾರು 19 ತಂಡಗಳು ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಶೋಭಾಯಾತ್ರೆಯಲ್ಲಿ ಆಕರ್ಷಕ ಮಹಾಭಾರತದ ಶ್ರೀ ಕೃಷ್ಣ ಪರಮಾತ್ಮನ ರಥವನ್ನು ‌ಹೋಲುವ ಮಾದರಿಯ ರಥದಲ್ಲಿ ಶ್ರೀ ಕೃಷ್ಣ ವೇಷ ಧರಿಸಿದ ಬಾಲಗೋಪಾಲರು, ವೀರ ಯೋಧ ವಿನಾಯಕ ದಾಮೋದರ ಸಾವರ್ಕರ್ ಭಾವಚಿತ್ರವಿರುವ ಭಾರತ ಮಾತೆ ಹಾಗೂ ಸ್ವಾಮಿ ವಿವೇಕಾನಂದರ ಭಾವಚಿತ್ರದ ಟ್ಯಾಬ್ಲೋ, ಇತ್ತೀಚೆಗೆ ಮಡಿದ ಪ್ರವೀಣ್ ನೆಟ್ಟಾರು ರವರ ಭಾವಚಿತ್ರ, ಹರ್ಷ ರವರ ಭಾವಚಿತ್ರ ವಿರುವ ಟ್ಯಾಬ್ಲೋಗಳು ಮೆರವಣಿಗೆಯಲ್ಲಿ ಸಾಗಿ ಬಂತು. ಮೆರವಣಿಗೆಯಲ್ಲಿ ಕೇಸರಿ ಶಾಲು ಧರಿಸಿದ ಕುಣಿತದ ಯುವಕರ ದಂಡು, ಆಕರ್ಷಕ ಹುಲಿ ವೇಷಗಳು, ಅಟ್ಟಿ ಮಡಿಕೆ ಒಡೆಯುವ ಸಂದರ್ಭ ರಕ್ಷಕರಾಗಿ ಗಜ ಕೇಸರಿ ಪಡೆ, ರಸ್ತೆಯುದ್ದಕ್ಕೂ ಟ್ರಾಫಿಕ್ ವ್ಯವಸ್ಥೆಯನ್ನು ಪೋಲಿಸ್ ಸಿಬ್ಬಂದಿ ಗಳ ಜತೆ ಸಂಘಟನೆಯ ಕಾರ್ಯಕರ್ತರು ನಿಭಾಯಿಸಿದರು. ಆಗಮಿಸಿದ ಎಲ್ಲಾ ಕಾರ್ಯಕರ್ತರಿಗೆ ಮಧ್ಯಾಹ್ನ ಭೋಜನದ ವ್ಯವಸ್ಥೆ ಗಿರಿದರ್ಶಿನಿ ಸಭಾಭವನದಲ್ಲಿ ವ್ಯವಸ್ಥೆ ಮಾಡಲಾಗಿತ್ತು.

ಅಲ್ಲಲ್ಲಿ ಪಾನಕದ ವ್ಯವಸ್ಥೆಯನ್ನು ಸಾರ್ವಜನಿಕರು ವ್ಯವಸ್ಥೆ ಮಾಡಿದ್ದರು. ಸಂಜೆ ವೇಳೆಗೆ ಶ್ರೀ ರಾಂಪೇಟೆಗೆ ಶೋಭಾಯಾತ್ರೆಯು ತಲುಪುತ್ತಿದ್ದಂತೆ ಲಘು ಉಪಾಹಾರ ದ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಡೆದ ಧಾರ್ಮಿಕ ಸಭೆಯ ಸಂದರ್ಭ ಎಲ್ಲರಿಗೂ ಬನ್ ವಿತರಿಸಲಾಯಿತು. ಸಭೆ ಮುಗಿದ ಬಳಿಕ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.


ರಾತ್ರಿ ಸಭೆ ಮುಗಿದ ನಂತರ ದೇವಸ್ಥಾನದ ಮುಂಭಾಗದಲ್ಲಿ ಅಳವಡಿಸಿದ ಸುಮಾರು 150 ಮಿಕ್ಕಿ ಅಟ್ಟಿ ಮಡಿಕೆಗಳನ್ನು ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ತಡರಾತ್ರಿ ವರೆಗೆ ಯುವಕರು ಒಡೆಯುವ ಕಾಯಕದಲ್ಲಿ ಪಾಲ್ಗೊಂಡರು. ಶೋಭಾಯಾತ್ರೆಯು ಸಾಗಿ ಬರುವ ಸಂದರ್ಭದಲ್ಲಿ ನಗರದ ಎಲ್ಲಾ ಕಡೆಗಳಲ್ಲಿ ಮಹಿಳೆಯರು ಮಕ್ಕಳು ಸೇರಿದಂತೆ ಸಾವಿರಾರು ಮಂದಿ ಶೋಭಾಯಾತ್ರೆಯನ್ನು ವೀಕ್ಷಿಸಿದರು.