ತಾಲೂಕು ಕೇಂದ್ರದಲ್ಲಿ ಭವ್ಯ ಪತ್ರಿಕಾ ಭವನ ತಲೆಯೆತ್ತುವುದು ಅಭಿಮಾನದ ಸಂಗತಿ-ಕೆಯುಡಬ್ಲ್ಯುಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮೆಚ್ಚುಗೆ

0

 

ಶಿವಾನಂದ ತಗಡೂರು, ಮದನ್ ಗೌಡ ಸುಳ್ಯಕ್ಕೆ ಭೇಟಿ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹಾಗು ಭಾರತೀಯ ಪತ್ರಕರ್ತರ ಒಕ್ಕೂಟದ ಏಷ್ಯಾ ವಿಭಾಗದ ಸಂಚಾಲಕ ಮದನ್ ಗೌಡ ಅವರು ಸೆ.10ರಂದು ಸುಳ್ಯಕ್ಕೆ ಭೇಟಿ ನೀಡಿದರು.

ಸುಳ್ಯದ ಅಂಬೆಟಡ್ಕದಲ್ಲಿ ಒಂದೂವರೆ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸುಳ್ಯ ಪ್ರೆಸ್ ಕ್ಲಬ್ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿದ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಅವರು ತಾಲೂಕು ಕೇಂದ್ರದಲ್ಲಿ ಒಂದೂವರೆ ಕೋಟಿ ವೆಚ್ಚದಲ್ಲಿ ಈ ರೀತಿಯಲ್ಲಿ ಭವ್ಯವಾದ ಪತ್ರಕರ್ತರ ಭವನವನ್ನು ನಿರ್ಮಾಣ ಮಾಡುತ್ತಿರುವುದು‌ ಅತ್ಯಂತ ಖುಷಿಯ ಮತ್ತು ಅಭಿಮಾನದ ಸಂಗತಿ ಎಂದು ಹೇಳಿದರು. ಇಷ್ಟು ಸುಂದರವಾದ ಪತ್ರಿಕಾ ಭವನ ನಿರ್ಮಾಣ‌ ಮಾಡಲು ನೇತೃತ್ವ ವಹಿಸಿದ ಎಲ್ಲಾ ಪತ್ರಕರ್ತರನ್ನು ಅಭಿನಂದಿಸುವುದಾಗಿ ಹೇಳಿದ ಅವರು ಪ್ರೆಸ್ ಕ್ಲಬ್ ಕಟ್ಟಡ ನಿರ್ಮಾಣಕ್ಕೆ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಎಲ್ಲಾ ರೀತಿಯ ಸಹಾಯ ನೀಡುವುದಾಗಿ ತಿಳಿಸಿದರು.

ಮದನ್ ಗೌಡ ಅವರು ಶುಭ ಹಾರೈಸಿದರು.

ಪತ್ರಿಕಾ ಭವನ ನಿರ್ಮಾಣಕ್ಕೆ ಸಹಕಾರ ಕೋರಿ ಶಿವಾನಂದ ತಗಡೂರು ಹಾಗು ಮದನ್ ಗೌಡ ಅವರಿಗೆ ಪ್ರೆಸ್ ಕ್ಲಬ್ ವತಿಯಿಂದ ಮನವಿ ಸಲ್ಲಿಸಲಾಯಿತು.

ಸುಳ್ಯ ಪ್ರೆಸ್‌ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್, ಶಿವಾನಂದ ತಗಡೂರು ಹಾಗು ಮದನ್ ಗೌಡ ಅವರನ್ನು ಸ್ವಾಗತಿಸಿ ಸನ್ಮಾನಿಸಿದರು.


ಪ್ರೆಸ್ ಕ್ಲಬ್ ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ,
ಪ್ರೆಸ್ ಕ್ಲಬ್ ಕೋಶಾಧಿಕಾರಿ ಯಶ್ವಿತ್ ಕಾಳಮನೆ, ನಿರ್ದೇಶಕರುಗಳಾದ ಗಂಗಾಧರ ಮಟ್ಟಿ, ದುರ್ಗಾಕುಮಾರ್ ನಾಯರ್‌ಕೆರೆ,ಗಿರೀಶ್ ಅಡ್ಪಂಗಾಯ, ಕೃಷ್ಣ ಬೆಟ್ಟ ,
ಶಿವಪ್ರಸಾದ್ ಕೇರ್ಪಳ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.