ಸುಳ್ಯ ಸಿ ಎ ಬ್ಯಾಂಕ್ ವಾರ್ಷಿಕ ಮಹಾಸಭೆ

0

 

ರೂ.75 ಲಕ್ಷ ವಾರ್ಷಿಕ ಲಾಭ – ಸದಸ್ಯರಿಗೆ ಶೇ.10 ಡಿವಿಡೆಂಡ್ ವಿತರಣೆ

ವಿದ್ಯಾರ್ಥಿಗಳಿಗೆ ಶತಾಭ್ಧಿ ವಿದ್ಯಾರ್ಥಿವೇತನ ವಿತರಣೆ – ಪೌರಕಾರ್ಮಿಕರಿಗೆ ಸನ್ಮಾನ

 

ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಸಿ.ಎ.ಬ್ಯಾಂಕ್ ) ದ ವಾರ್ಷಿಕ ಮಹಾಸಭೆಯು ಸೆ.10 ರಂದು ಸಂಘದ ಎ ಎಸ್ ವಿಜಯಕುಮಾರ್ ಸಭಾಭವನದಲ್ಲಿ ಜರಗಿತು.

 

ಸಂಘದ ಅಧ್ಯಕ್ಷ ಬಾಲಗೋಪಾಲ ಸೇರ್ಕಜೆ ಅಧ್ಯಕ್ಷತೆ ವಹಿಸಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಎಸ್ ಪಿ, ಉಪಾಧ್ಯಕ್ಷ ವೆಂಕಟ್ರಮಣ ಮುಳ್ಯ, ಆಡಳಿತ ಮಂಡಳಿಯ ನಿರ್ದೇಶಕರಾದ ಹರೀಶ್ ಬೂಡುಪನ್ನೆ, ಮನ್ಮಥ ಎಎಸ್, ನವೀನ್ ಕುಮಾರ್ ಕೆ ಎಂ, ವಾಸುದೇವ ನಾಯಕ್ ಪಿ, ಹೇಮಂತ ಕುಮಾರ್ ಕಂದಡ್ಕ, ಶ್ರೀಮತಿ ಸುಮತಿ ರೈ, ಶ್ರೀಮತಿ ಹರಿಣಿ ಸದಾನಂದ ಕೆ, ಅಬ್ದುಲ್ ಕುಂಞಿ ಎನ್, ಶೀನಪ್ಪ ಬಿ, ದಾಮೋದರ ಮಂಚಿ ಕೆ, ಜಯರಾಮ ಪಿ ಜಿ ಉಪಸ್ಥಿತರಿದ್ದರು.

 

ವಿದ್ಯಾರ್ಥಿ ವೇತನ ವಿತರಣೆ

ಎಸ್ಸೆಸ್ಸೆಲ್ಸಿ ವಿಭಾಗದ 10 ಮತ್ತು ಪಿಯುಸಿ ವಿಭಾಗದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ 8 ವಿದ್ಯಾರ್ಥಿಗಳಿಗೆ ಶತಾಬ್ಧಿ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.

ಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ಬಾಲಗೋಪಾಲ ಸೇರ್ಕಜೆಯವರು 2021-22 ನೇ ಸಾಲಿನಲ್ಲಿ ಸಂಘವು ರೂ 75,74,289 ರೂಪಾಯಿ ಲಾಭ ಗಳಿಸಿದ್ದು ಆಡಿಟ್ ನಲ್ಲಿ ‘ಏ’ ಶ್ರೇಣಿ ಪಡೆದುಕೊಂಡಿದೆ. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಕಡೆಯಿಂದ ಶೇಕಡಾ 10% ದರದಲ್ಲಿ ಡಿವಿಡೆಂಡ್ ಘೋಷಣೆ ಮಾಡುವುದಾಗಿ ತಿಳಿಸಿದರು.
ಸದಸ್ಯರಾದ ಎನ್ ಎ ರಾಮಚಂದ್ರ ಡಿವಿಡೆಂಡ್ ಕಡಿಮೆ ಮಾಡಿ ಸಿಬಂದಿಗಳಿಗೆ ಬೋನಸ್ ಹೆಚ್ಚು ಮಾಡಲು ಸಲಹೆ ನೀಡಿದರು. ವಿನಯಕುಮಾರ್ ಕಂದಡ್ಕ ಮಾತನಾಡಿ ವರ್ಷಕ್ಕೆ ಸುಮಾರು ತೊಂಬತ್ತು ಲಕ್ಷದಷ್ಟು ಮೊತ್ತ ಸಿಬ್ಬಂದಿ ವೇತನ ಪಾವತಿಗೆ ಅಗತ್ಯವಿರುವುದು ಲೆಕ್ಕಪತ್ರವನ್ನು ನೋಡುವಾಗ ಕಂಡುಬರುತ್ತಿದ್ದು ಈಗ ಆಡಳಿತ ಮಂಡಳಿ ಮಂಡಿಸಿರುವ ಲಾಭಾಂಶ ವಿಂಗಡನೆ ಸಮರ್ಪಕವಾಗಿದೆ ಹಾಗಾಗಿ ಅದನ್ನೇ ಮುಂದುವರಿಸಲು ಸಲಹೆ ನೀಡಿದರು. ಸುಭೋದ್ ಶೆಟ್ಟಿ ಮೇನಾಲ ದನಿಗೂಡಿಸಿದರು. ಸದಸ್ಯರಾದ ಶಾರೀಕ್ ಇವರು ಆಗಮಿಸಿರುವ ಸದಸ್ಯರಿಂದ ಮತ ಚಲಾಯಿಸಿ ಶೇ 50 ಮತಗಳಿಗಿಂತ ಹೆಚ್ಚು ಬೋನಸ್ ನೀಡುವ ಬಗ್ಗೆ ಬಂದಲ್ಲಿ ಅದರಂತೆ ಕ್ರಮವಿಡಲು ಸೂಚಿಸಿದರು. ಪರ ವಿರೋಧ ಚರ್ಚೆ ನಡೆದು ಅಂತಿಮವಾಗಿ ಶೇ.10 ಡಿವಿಡೆಂಡ್ ಪಾವತಿಸಲು ಮಹಾಸಭೆ ಮಂಜೂರಾತಿ ನೀಡಿತು.
ಮುಂದಿನ ವರ್ಷದ ಯೋಜನೆಯ ಸಲುವಾಗಿ ರೂ.1 ಲಕ್ಷದವರೆಗೆ ತುರ್ತು ಆಪತ್ ಸಾಲ, ಹಸು ಖರೀದಿ ಸಾಲ, ಅಡಿಕೆ ಒಣಗಿಸಲು ಸೋಲಾರ್ ಪಾಲಿತಿನ್ ಗೂಡು ರಚನೆ ಬಗ್ಗೆ ಸಾಲ ಸೌಲಭ್ಯ, ಸ್ವ ಉದ್ಯೋಗ ಅಥವಾ ವ್ಯವಹಾರ ಮಾಡುವ ಜಂಟಿ ಬಾಧ್ಯತಾ ಗುಂಪುಗಳಿಗೆ ರೂ.20 ಲಕ್ಷದವರೆಗೆ ಸಾಲ ಸೌಲಭ್ಯ, ಸರಕಾರದ ಪ್ರೋತ್ಸಾಹದೊಂದಿಗೆ ಕಾಮನ್ ಸರ್ವೀಸ್ ಸೆಂಟರ್ ಸ್ಥಾಪನೆ ಬಗ್ಗೆ ಯೋಜನೆ, ಸಂಘದಲ್ಲಿ ಕೃಷಿ ಉಪಕರಣಗಳ ಬಾಡಿಗೆ ನೆಲೆಯಲ್ಲಿ ಒದಗಿಸುವ ಬಗ್ಗೆ ಯೋಜನೆಗಳನ್ನು ರೂಪಿಸುವುದಾಗಿ ಘೋಷಿಸಿದರು.
ಸದಸ್ಯರಾದ ದೇರಣ್ಣ ಗೌಡ ಅಡ್ಡಂತಡ್ಕ ಇವರು ಸುಳ್ಯದಲ್ಲಿ ಸ್ಥಾಪನೆಯಾಗುವ ಯೋಧರ ಸ್ಮಾರಕಕ್ಕೆ ಸಹಾಯಧನ ನೀಡಲು ಕೋರಿದರು. ಅದೇ ರೀತಿ ನಿವೃತ್ತ ಯೋಧರಿಗೆ ಠೇವಣಾತಿಯಲ್ಲಿ ಹೆಚ್ಚು ಬಡ್ಡಿ ನೀಡುವ ಯೋಜನೆ ರೂಪಿಸಲು ಸಲಹೆ ನೀಡಿದರು. ಸದಸ್ಯರಾದ ವಿಕ್ರಂ ಅಡ್ಪಂಗಾಯ ಮಾತನಾಡಿ ಅಜ್ಜಾವರ ಶಾಖೆಯಲ್ಲಿ ಬೆಳೆಸಾಲ ನವೀಕರಣದ ಸಂದರ್ಭ ಸಿಬ್ಬಂದಿಗಳ ಕೊರತೆಯಾಗುತ್ತಿದ್ದು ಬೆಳೆಸಾಲ ವಿತರಣೆ ಹೆಚ್ಚಿರುವ ಮೇ ಜೂನ್ – ಜುಲೈ ತಿಂಗಳಿನಲ್ಲಿ ಒಬ್ಬರು ಹೆಚ್ಚುವರಿ ಸಿಬ್ಬಂದಿಯನ್ನು ಶಾಖೆಗೆ ಕಳಿಸಿಕೊಡಲು ಸೂಚಿಸಿದರು. ಅಧ್ಯಕ್ಷರು ಈ ಬಗ್ಗೆ ಕ್ರಮ ವಹಿಸುವುದಾಗಿ ತಿಳಿಸಿದರು. ಮಹಾ ಸಭೆಯ ಕೊನೆಯಲ್ಲಿ ಸುಳ್ಯ ನಗರದ ಸ್ವಚ್ಛತೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ನಗರದ 21 ಮಂದಿ ಪೌರಕಾರ್ಮಿಕರನ್ನು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸವಿನೆನಪಿನಲ್ಲಿ ಸಂಘದ ವತಿಯಿಂದ ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಯಿತು. ನಂತರ ಸಾವಯವ ಕೃಷಿಯೆಡೆಗೆ ಕೃಷಿಕರು ಮುನ್ನಡೆಯುವ ಅನಿವಾರ್ಯತೆಯ ಬಗ್ಗೆ ಪ್ರಗತಿಪರ ಕೃಷಿಕರಾದ ಶ್ರೀ ವಿಷ್ಣುಮೂರ್ತಿ ವಿರಾಜಪೇಟೆ ಇವರು ಮಾಹಿತಿ ನೀಡಿದರು.
ಮಾಜಿ ಅಧ್ಯಕ್ಷ ಹರೀಶ್ ಬೂಡುಪನ್ನೆ ಸ್ವಾಗತಿಸಿದರು. ನಿರ್ದೇಶಕ ಶೀನಪ್ಪ ಬಯಂಬು ವಂದಿಸಿದರು.