ಡಾ. ಪ್ರಭಾಕರ ಶಿಶಿಲರ ‘ಅಲಿಮಾಳ ಆಡು’ ಕಥಾ ಸಂಕಲನ ಬಿಡುಗಡೆ

0

 

ಕನ್ನಡದ ಮಹತ್ವದ ಕಾದಂಬರಿಕಾರ ಡಾ. ಪ್ರಭಾಕರ ಶಿಶಿಲ ಅವರ ಏಳನೆಯ ಕಥಾ ಸಂಕಲನ ಅಲಿಮಾಳ ಆಡು ಸೆಪ್ಟೆಂಬರ್ ೧೪ ರಂದು ನಿಂತಿಕಲ್ ಕೆ.ಎಸ್.ಗೌಡ ವಿದ್ಯಾಸಂಸ್ಥೆಯಲ್ಲಿ ಬಿಡುಗಡೆಗೊಂಡಿತು.
ಕೃತಿ ಬಿಡುಗಡೆ ಮಾಡಿದ ವಿದ್ಯಾಸಂಸ್ಥೆಯ ಸಂಚಾಲಕ ಕುಮಾರಸ್ವಾಮಿ ಮಾತನಾಡಿ ಇದು ಧರ್ಮ ಸಮನ್ವಯದ ಆಶಯವುಳ್ಳ ಅಪೂರ್ವ ಕಥಾ ಸಂಕಲನ. ಕೃತಿಕಾರ ಶಿಶಿಲರು ಸಮಾಜವನ್ನು ಚಿಕಿತ್ಸಕ ದೃಷ್ಟಿಯಿಂದ ನೋಡಿ ತಮ್ಮದೇ ನೆಲೆಯಲ್ಲಿ ಅಪಸತ್ಯಗಳಿಗೆ ಉತ್ತರ ನೀಡಿದ್ದಾರೆ ಎಂದರು.
ಕೃತಿಯ ಬಗ್ಗೆ ಮಾತನಾಡಿದ ವಾಗ್ಮಿ ಶಶಿಧರ ಪಳಂಗಾಯ ಶಿಶಿಲರು ಯಾವುದೇ ಕೃತಿ ರಚಿಸಿದರೂ ಸಮಾಜ ಪರ ಕಾಳಜಿ ಎದ್ದು ಕಾಣುತ್ತದೆ. ಸಮನ್ವಯ, ಸಮಾನತೆಯ ಹಂಬಲ, ಸ್ವಸ್ಥ ಸಮಾಜ ನಿರ್ಮಾಣದ ಕನಸು ಕಾಣುವ ಶಿಶಿಲರು ವ್ಯವಸ್ಥೆಯನ್ನು ಪ್ರಶ್ನಿಸುವ ಎದೆಗಾರಿಕೆಯನ್ನು ತೋರಿಸಿದ್ದಾರೆ. ಶೋಷಿತರ ಪರವಾಗಿ ಮಾತಾಡುವ ಇವರ ಕೃತಿ ಭರವಸೆಯ ಬೆಳಕನ್ನು ತೋರಿಸುತ್ತದೆ. ಕನ್ನಡಿಗರು ಇಂತಹ ಲೇಖಕರನ್ನು ಕೃತಿಕೊಂಡು ಓದುವ ಮೂಲಕ ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.
ಕೃತಿಕಾರ ಶಿಶಿಲರು ಕತೆಗಳ ಹಿಂದಿನ ಪ್ರೇರಣೆಗಳನ್ನು ನೆನೆದು ಪ್ರಜಾಪ್ರಭುತ್ವದ ಮೇಲಾಗುವ ಹಲ್ಲೆಗಳಿಂದ ತಲ್ಲಣಗೊಂಡು ಈ ಕತೆಗಳನ್ನು ಬರೆದಿzನೆ. ವಾಸ್ತವವಾದವೇ ಇವುಗಳ ನೆಲೆಗಟ್ಟು ಎಂದರು.
ಪಂಜ ಪಂಚಶ್ರೀ ಜೇಸಿಸ್‌ನ ಬೆಳ್ಳಿಹಬ್ಬ ಮಹೋತ್ಸವದ ಅಂಗವಾಗಿ ಜರಗಿದ ಕಾರ್ಯಕ್ರಮದಲ್ಲಿ ಜೇಸಿ ಅಧ್ಯಕ್ಷ ಶಿವಪ್ರಸಾದ ಹಾಲೆಮಜಲು ಸಭಾಧ್ಯಕ್ಷತೆ ವಹಿಸಿದ್ದರು. ಜೇಸಿ ಸಂಸ್ಥಾಪಕಾಧ್ಯಕ್ಷ ದೇವಿಪ್ರಸಾದ್ ಜಾಕೆ ಉಪಸ್ಥಿತರಿದ್ದರು. ಜೇಸಿ ಕೌಶಿಕ್ ಕುಳ ವಂದನಾರ್ಪಣೆಗೈದರು.
ವರದಿ: ದೇವಿಪ್ರಸಾದ್ ಜಾಕೆ