ಕೇರಳ ಓಣಂ ಲಾಟರಿಯಲ್ಲಿ ಸುಳ್ಯದ ರಿಕ್ಷಾ ಚಾಲಕನಿಗೆ 1 ಕೋಟಿ ರೂ! – ಪೋಸ್ಟ್ ವೈರಲ್*

0

ನನಗೆ ಲಾಟರಿ ಡ್ರಾ ಆಗಿಲ್ಲ : ಅಣ್ಣಿ ಪೂಜಾರಿ ಸ್ಪಷ್ಟನೆ

ಕೇರಳ ಓಣಂ ಲಾಟರಿಯಲ್ಲಿ ಸುಳ್ಯದ ರಿಕ್ಷಾ ಚಾಲಕರೊಬ್ಬರಿಗೆ ತೃತೀಯ ಬಹುಮಾನ ರೂ.1 ಕೋಟಿ ಡ್ರಾ ಆಗಿದೆ ಎಂದು ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.‌

ಈ ಬಾರಿಯ ಕೇರಳ ಓಣಂ ಲಾಟರಿಯಲ್ಲಿ ಸುಳ್ಯ ಗಾಂಧೀನಗರ ರಿಕ್ಷಾ ಚಾಲಕ, ಆಲೆಟ್ಟಿಯ ಅಣ್ಣಿ ಪೂಜಾರಿಯವರಿಗೆ ರೂ.1 ಕೋಟಿ ಡ್ರಾ ಆಗಿದೆ ಎಂದು ಬರೆದು ಅಣ್ಣಿ ಪೂಜಾರಿಯವರು ರಿಕ್ಷಾದಲ್ಲಿ ಕುಳಿತುಕೊಂಡಿರುವ ಫೋಟೊ ಹಾಕಿ ಪೋಸ್ಟ್ ಒಂದನ್ನು ವೈರಲ್ ಮಾಡಲಾಗಿತ್ತು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ‌ ಬಗ್ಗೆ ಅಣ್ಣಿ ಪೂಜಾರಿ ಯವರನ್ನು ಸಂಪರ್ಕಿಸಿ ವಿಚಾರಿಸಿದಾಗ, “ನಾನು ಕೇರಳ ಓಣಂ ಲಾಟರಿ ಖರೀದಿಸಿರಲಿಲ್ಲ. ಮತ್ತೆ ನನಗೆ ಡ್ರಾ ಆಗೋದು ಹೇಗೆ?. ಫಲಿತಾಂಶ ಬಂದ ದಿನ ನಮ್ಮ ಸ್ನೇಹಿತರೊಬ್ಬರು ನನ್ನ ಫೋಟೊ ತೆಗೆದು ತಮಾಷೆಗೆಂದು ಬರೆದು ಗ್ರೂಪ್ ಗೆ ಹಾಕಿದರು.ಇದು ವೈರಲ್ ಆಗಿದೆ. ನನಗೆ ಅನೇಕರು ಫೋನ್ ಮಾಡಿ ಅಭಿನಂದನೆ ಹೇಳುತ್ತಿದ್ದಾರೆ. ಅವರೆಲ್ಲರಿಗೂ ನಾನು ನಡೆದ ಘಟನೆ ವಿವರಿಸಿದ್ದೇನೆ ” ಎಂದು ಅವರು ಸುದ್ದಿಗೆ ತಿಳಿಸಿದ್ದಾರೆ.