ಸುಳ್ಯ ರಂಗಮಯೂರಿ ಕಲಾ ಶಾಲೆಯಲ್ಲಿ ಶಾರದಾ ಪೂಜೆ ಮತ್ತು ಭಜನಾ ಕಾರ್ಯಕ್ರಮ

0

 

ಸುಳ್ಯದ ಶ್ರೀ ಹರಿ ಕಾಂಪ್ಲೆಕ್ಸ್ ನಲ್ಲಿರುವ ರಂಗಮಯೂರಿ ಕಲಾ ಶಾಲೆಯಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ವಿಶೇಷವಾಗಿ ಶ್ರೀ ಶಾರದಾ ದೇವಿಯ ಪೂಜೆಯು ಅ.3 ರಂದು ನೆರವೇರಿತು. ಬೆಳಗ್ಗೆ ಪುರೋಹಿತರ ನೇತೃತ್ವದಲ್ಲಿ ಗಣಪತಿ ಹವನವಾಗಿ ಬಳಿಕ ಕಲಾ ಶಾಲೆಯ ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.

ಶಾಸ್ತ್ರೀಯ ಸಂಗೀತ ಶಿಕ್ಷಕ ಮಹಾಬಲೇಶ್ವರ ಬೀರ್ಮಕಜೆ ಮತ್ತು ಸುಗಮ ಸಂಗೀತ ಶಿಕ್ಷಕಿ ಶ್ರೀಮತಿ ಸುಮನಾ ಪುತ್ತೂರು ಮತ್ತು ಪೋಷಕರು ದೀಪ ಪ್ರಜ್ವ ಲಿಸಿದರು. ಸುಳ್ಯ ತಾಲೂಕು ಭಜನಾ ಪರಿಷತ್ ಗೌರವಾಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ ಗಣಪತಿ ಸ್ತುತಿಯೊಂದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಧ್ಯಾಹ್ನ ಭಜನೆಯು ಮಹಾಮಂಗಳಾರತಿಯೊಂದಿಗೆ ಸಂಪನ್ನಗೊಂಡಿತು. ಆಗಮಿಸಿದ ಎಲ್ಲರಿಗೂ ಪ್ರಸಾದ ವಿತರಿಸಲಾಯಿತು. ಅತಿಥಿಗಳಾಗಿ ಉದ್ಯಮಿ ವಿಜಯ್ ಮಯೂರಿ, ಸುದ್ದಿ ಪ್ರದಾನ ವರದಿಗಾರ ಹರೀಶ್ ಬಂಟ್ವಾಳ್, ಸುದ್ದಿ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಂಮನೆ, ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ, ಸ್ವಾತಿ ಸೌಂಡ್ಸ್ ಮಾಲಕ ಜಯಪ್ರಕಾಶ್ ಸುಳ್ಯ, ಸುದ್ದಿ ಚಾನೆಲ್ ಎಡಿಟಿಂಗ್ ವಿಭಾಗದ ಮುಖ್ಯಸ್ಥ ಶ್ರೀಧಾಮ ಅಡ್ಕಾರ್ ಉಪಸ್ಥಿತರಿದ್ದರು.


ಕಲಾ ಶಾಲೆಯ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದರು. ಬಾಲಕೃಷ್ಣ ಮೇನಾಲ ತಬಲಾ ವಾದಕರಾಗಿ ಸಹಕರಿಸಿದರು. ಕಲಾ ಶಾಲೆಯ ಸಂಚಾಲಕ ಲೋಕೇಶ್ ಊರುಬೈಲು ಸ್ವಾಗತಿಸಿದರು. ಲಿಖಿತಾ ಲೋಕೇಶ್ ವಂದಿಸಿದರು. ನಂತರ ಕಲಾ ಶಾಲೆಯ ನೃತ್ಯ ತಂಡದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಂಡಿತು.