ಸುಳ್ಯ ರಾಮ ಭಜನಾ ಮಂದಿರದಲ್ಲಿ ಸಂಧ್ಯಾ ಕಾಲದ ಭಜನಾ ಕಾರ್ಯಕ್ರಮಕ್ಕೆ ಚಾಲನೆ

0

ವಿವಿಧ ಭಜನಾ ಮಂಡಳಿಯವರಿಂದ ಒಂದು ತಿಂಗಳ ಪರ್ಯಂತ ಭಜನಾ ಸಂಕೀರ್ತನೆ


ಇತಿಹಾಸ ಪ್ರಸಿದ್ಧ ಸುಳ್ಯದ ಶ್ರೀ ರಾಮ ಪೇಟೆಯ ಶ್ರೀ ರಾಮ ಭಜನಾ ಮಂದಿರದಲ್ಲಿ 80 ನೇ ವರ್ಷದ ಏಕಾಹ ಭಜನೆಯ ಪ್ರಯುಕ್ತ ಅ.5 ರಿಂದ ನ.3 ರ ತನಕ ಪ್ರತಿ ದಿನ ಸಂಜೆ ಸಂಧ್ಯಾ ಕಾಲದಲ್ಲಿ ತಾಲೂಕಿನ ವಿವಿಧ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು ಇದರ ಉದ್ಘಾಟನಾ ಸಮಾರಂಭವು ಅ.5 ರಂದು ನಡೆಯಿತು.


ಮಂದಿರದ ಆಡಳಿತ ಧರ್ಮದರ್ಶಿ ಕೆ.ಉಪೇಂದ್ರ ಪ್ರಭು ರವರು ಅಧ್ಯಕ್ಷತೆ ವಹಿಸಿದ್ದರು. ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದ ವ್ಯ.ಸ.ಅಧ್ಯಕ್ಷ ಉಮೇಶ್ ಪಿ.ಕೆ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರಾದ್ವಾಜ್ ಸುಳ್ಯ ರವರನ್ನು ಮಂದಿರದ ವತಿಯಿಂದ ಅಂಬಟೆಡ್ಕ ಶ್ರೀ ವೆಂಕಟರಮಣ ದೇವ ಮಂದಿರದ ಮೊಕ್ತೇಸರರು ಹಿರಿಯ ಉದ್ಯಮಿಗಳಾದ ಕೃಷ್ಣ ಕಾಮತ್ ಅರಂಬೂರು ಸನ್ಮಾನಿಸಿ‌ ಗೌರವಿಸಿದರು.
ಮುಖ್ಯ ಅತಿಥಿಗಳಾಗಿ ಶಾಂತಿನಗರ ದೀಪಾಂಜಲಿ ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಹರ್ಷ ಕರುಣಾಕರ ಸೇರ್ಕಜೆ, ಸುಳ್ಯ ತಾಲೂಕು ಭಜನಾ ಪರಿಷತ್ ಗೌರವಾಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು.ಅಂಜು ನಾಯರ್ ಪ್ರಾರ್ಥಿಸಿದರು. ಸಮಿತಿ ಸದಸ್ಯ ವಾಸುದೇವ ನಾಯಕ್ ಕೇರ್ಪಳ ಸ್ವಾಗತಿಸಿದರು. ಮಂಡಳಿ ಯ ಸದಸ್ಯ ಗೋಪಾಲ ನಡುಬೈಲು ವಂದಿಸಿದರು. ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಒಂದು ತಿಂಗಳ ಪರ್ಯಂತ ಸಂಜೆ ಗಂಟೆ 7.00 ರಿಂದ ವಿವಿಧ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆಯು ನಡೆಯಲಿದ್ದು ಮಂದಿರದ ಪ್ರಧಾನ ಅರ್ಚಕರು ದೀಪ ಪ್ರಜ್ವಲಿಸಿ ಭಜನೆಗೆ ಚಾಲನೆ ನೀಡಿದರು.

ಮೊದಲ ದಿನದ ಭಜನಾ ಸೇವೆಯನ್ನು ಶ್ರೀ ಧರ್ಮ ಶಾಸ್ತಾ ಭಜನಾ ಮಂದಿರ ಪಿಲಿಕಜೆ ಕುಕ್ಕುಜಡ್ಕದ ಸದಸ್ಯರು‌ ನೆರವೇರಿಸಿದರು. ಮಂದಿರದ ಆಡಳಿತ ಮಂಡಳಿಯ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಶ್ರೀ ರಾಮ ಸಾಂಸ್ಕೃತಿಕ ಸಮಿತಿ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು.