ಸಮಸ್ಯೆಗಳನ್ನು ಅಧಿಕಾರಿಗಳ ಬಳಿ ವಿವರಿಸಿ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿದ ಕೃಷಿಕರು
ಸುಳ್ಯ ತಾಲೂಕು ಕೃಷಿಕ ಸಮಾಜ ಹಾಗೂ ಭಾರತೀಯ ಕಿಸಾನ್ ಸಂಘ ಸುಳ್ಯ ಇದರ ವತಿಯಿಂದ ಕಾಡು ಪ್ರಾಣಿಗಳ ಉಪಟಳದ ಕುರಿತು ಪರಿಹಾರಕ್ಕಾಗಿ ಅರಣ್ಯ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ಜು. 3 ರಂದು ಸುಳ್ಯ ಸಿ ಎ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೃಷಿಕ ಸಮಾಜ ಸುಳ್ಯ ಸಮಿತಿಯ ಅಧ್ಯಕ್ಷ ಕೆ.ಟಿ ಕುಸುಮಾಧರ ರವರು ಪ್ರಾಸ್ತಾವಿಕ ಮಾತನಾಡಿ ‘ಇತ್ತೀಚಿನ ದಿನಗಳಲ್ಲಿ ಸುಳ್ಯ ತಾಲೂಕಿನಾದ್ಯಂತ ಕಾಡು ಪ್ರಾಣಿಗಳಿಂದಾಗಿ ಕೃಷಿಕರು ನಾನಾ ರೀತಿಯ ಸಮಸ್ಯೆಗಳನ್ನು ಮತ್ತು ಕಷ್ಟ ನಷ್ಟಗಳನ್ನು ಅನುಭವಿಸುತ್ತಿದ್ದಾರೆ.
ಆದರಿಂದ ಈ ಸಮಸ್ಯೆ ಗಳಿಂದಾಗಿ ನೊಂದಿರುವ ಕೃಷಿಕರಿಗೆ ಸಂಭಂದಪಟ್ಟ ಇಲಾಖೆಯಿಂದ ಸಿಗುವ ಪರಿಹಾರ ಮತ್ತು ರಕ್ಷಣೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಕೊಳ್ಳಲು ಈ ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿದೆ. ಅಲ್ಲದೆ ಕೃಷಿಕರ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಮಾತ್ರವಲ್ಲದೆ ಶಾಶ್ವತ ಪರಿಹಾರ ಒದಗಿಸಿ ಕೊಡುವ ಬಗ್ಗೆಯೂ ಮಾಹಿತಿ ನೀಡಬೇಕೆಂದು ವೇದಿಕೆಯಲ್ಲಿ ಉಪಸ್ಥಿತರಿದ್ದ ಅರಣ್ಯ ಅಧಿಕಾರಿ ಯವರಲ್ಲಿ ಕೇಳಿ ಕ್ಕೊಂಡರು.
ಬಳಿಕ ಸುಳ್ಯ ತಾಲೂಕಿನ ವಿವಿಧ ಗ್ರಾಮಗಳಿಂದ ಸಭೆಗೆ ಬಂದಿದ್ದ ಕೃಷಿಕರು ಕಾಡು ಪ್ರಾಣಿಗಳ ಉಪಟಳದಿಂದ ಅವರಿಗೆ ಉಂಟಾಗಿರುವ ಸಮಸ್ಯೆಗಳು ಮತ್ತು ಕಷ್ಟ ನಷ್ಟಗಳ ಬಗ್ಗೆ ಮಾತನಾಡಿ ಕೃಷಿ ತೋಟಗಳಲ್ಲಿ ಇತ್ತೀಚಿಗೆ ಹೆಚ್ಚಾಗಿರುವ ಆನೆ ದಾಳಿಗಳು,ಅದೇ ರೀತಿ ಮಂಗಗಳಿಂದ ಉಂಟಾಗುತ್ತಿರುವ ತೊಂದರೆಗಳು, ಕಾಡುಕೋಣ,ಕಾಡು ಹಂದಿ, ಕಡವೆ ಸೇರಿದಂತೆ ಇನ್ನಿತರ ಪ್ರಾಣಿಗಳಿಂದ ಕೃಷಿ ಹಾಗೂ ಮನುಷ್ಯರಿಗೆ ಉಂಟಾಗುತ್ತಿರುವ ಉಪಟಳಗಳನ್ನು ಅಧಿಕಾರಿಗಳಿಗೆ ವಿವರಿಸಿ,ಈ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಒದಗಿಸುವಂತೆ ಆಗ್ರಹ ವ್ಯಕ್ತ ಪಡಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಕೃಷಿಕರು ಮತ್ತು ನಿವೃತ್ತ ಶಿಕ್ಷಕರಾದ ಪುರುಷೋತ್ತಮ ಕಿರ್ಲಾಯ ರವರು ಅವರ ಸಮಸ್ಯೆಗಳ ಬಗ್ಗೆ ಮಾತನಾಡಿ ‘ಕಳೆದ ಹಲವಾರು ತಿಂಗಳುಗಳಿಂದ ನಮ್ಮ ಭಾಗದಲ್ಲಿ ಕಾಡಾನೆಗಳು ಮತ್ತು ಮಂಗ ಗಳಿಂದಾಗಿ ಕೃಷಿಗೆ ಬಹಳ ತೊಂದರೆ ಉಂಟಾಗುತ್ತಿದೆ.
ಬಾಳೆ ಗಿಡ, ತೆಂಗಿನ ಗಿಡ ಯಾವುದನ್ನು ಆನೆಗಳು ಬಿಡುತ್ತಿಲ್ಲ.ಕಿರ್ಲಾಯ ಭಾಗದಲ್ಲಿ ಆನೆಗಳು ಬೀಡು ಬಿಟ್ಟು ಕೃಷಿ ತೋಟಗಳನ್ನು ನಾಶ ಮಾಡುತ್ತಿದೆ. ಸೋಲಾರ್ ಬೇಲಿಗಳನ್ನು ಕಿತ್ತು ಹಾಕಿ ಆನೆಗಳು ಬುದ್ಧಿ ವಂತಿಕೆ ತೋರಿಸುತ್ತಿದೆ.
ಇನ್ನೊಂದೆಡೆ ಮಂಗಗಳು ಕೂಡ ತೊಂದರೆ ಕೊಡುತ್ತಿದ್ದು ಅದನ್ನು ಓಡಿಸಲು ತುಂಬಾ ಕಷ್ಟಕರ ವಾಗಿದೆ. ಕೈ ಯಲ್ಲಿ ಕೋವಿ ಇದ್ದರೆ ಮಾತ್ರ ಅದು ಭಯ ಪಡುವುದು. ಆದ್ದರಿಂದ ನಮ್ಮ ನಮ್ಮ ಕೃಷಿಯ ರಕ್ಷಣೆಗಾಗಿ ಈ ರೀತಿ ಸಮಸ್ಯೆಯನ್ನು ಎದುರಿಸುತ್ತಿರುವ ಪ್ರತಿಯೊಬ್ಬ ಕೃಷಿಕರ ಮನೆಗೂ ಕೂಡ ಅರಣ್ಯ ಇಲಾಖೆ ವತಿಯಿಂದ ಬಂದೂಕು ಪರವಾನಿಗೆಯನ್ನು ಕೊಡಿಸುವಂತೆ ಕೇಳಿಕೊಂಡರು.ಅದು ಭೇಟೆ ಯಾಡಲು ಅಲ್ಲ. ಕೇವಲ ಪ್ರಾಣಿಗಳನ್ನು ಭಯ ಪಡಿಸಲು ಎಂದು ಹೇಳಿದರು.
ಸುದರ್ಶನ್ ಪಾತಿಕಲ್ಲು ರವರು ಈ ಸಂದರ್ಭದಲ್ಲಿ ಮಾತನಾಡಿ ನಮ್ಮಲ್ಲಿಯೂ ಕೂಡ ಆನೆಗಳು ಮತ್ತು ಮಂಗಗಳಿಂದಾಗಿ ಭಾರಿ ತೊಂದರೆಗಳು ಉಂಟಾಗುತ್ತಿದ್ದೆ. ಕಾಡು ಪ್ರಾಣಿಗಳು ಸಿಡಿಮದ್ದಿನ ಶಬ್ದದಿಂದ ಹೆದರಿ ಓ ಓಡುವುದರಿಂದ ಕೃಷಿಕರಿಗೆ ಗಾಳಿಯಲ್ಲಿ ಗುಂಡು ಹಾರಿಸಿ ಓಡಿಸಲು ಅದಕ್ಕೆ ಬೇಕಾದ ಸಿಡಿ ಮದ್ದುಗಳನ್ನು ನೀಡುವಂತೆ ಕೇಳಿ ಕೊಂಡರು.
ಬಾಲಚಂದ್ರ ಕಲ್ಚರ್ಪೆ ರವರು ಮಾತನಾಡಿ ಪೆರಾಜೆ,ಕಲ್ಚರ್ಪೆ ಭಾಗದಲ್ಲಿಯೂ ಕೂಡ ಆನೆಗಳ ಆವಳಿ ಹೆಚ್ಚಾಗುತ್ತಿದ್ದು ಆ ಭಾಗದಲ್ಲಿ ಆನೆಗಳು ಬರದ ಹಾಗೆ ಕಂದಕವನ್ನು ನಿರ್ಮಾಣ ಮಾಡ ಬೇಕೆಂದು ಕೇಳಿಕೊಂಡರು. ಶ್ರೀಮತಿ ಪುಷ್ಪಾವತಿ ಮೇದಪ್ಪ ರವರು ಮಾತನಾಡಿ ಕಾಡು ಪ್ರಾಣಿಗಳಿಂದ ಉಂಟಾಗುತ್ತಿರುವ ಸಮಸ್ಯೆಗಳಿಗೆ ಮತ್ತು ತೊಂದರೆಗಳಿಗೆ ಅರಣ್ಯ ಇಲಾಖೆ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡು ಜನರ ಮತ್ತು ಬೆಳೆಗಳಿಗೆ ರಕ್ಷಣೆ ನೀಡಬೇಕೆಂದು ಕೇಳಿ ಕೊಂಡರು.















ಇದೇ ವೇಳೆ ಜಗನ್ನಾಥ್ ಜಿ ರವರು ಕೂಡ ತಮ್ಮ ಭಾಗದ ಸಮಸ್ಯೆಗಳನ್ನು ಹೇಳಿ ಕೊಂಡು ಐದಂಗೂರು ಭಾಗದಲ್ಲಿ ಆನೆಗಳ ಸಮಸ್ಯೆ ಹೆಚ್ಚಾಗುತ್ತಿದೆ. ಅಲ್ಲದೇ ಈ ಭಾಗದಲ್ಲಿ ರಸ್ತೆಗಳು ಕಾಡು ಪ್ರದೇಶ ಗಳಿಂದ ಆವರಿಸಿದ್ದು ರಾತ್ರಿ ವೇಳೆ ರಸ್ತೆಗಳು ಕೂಡ ಸರಿಯಾಗಿ ಕಾಣುತ್ತಿಲ್ಲ.
ಆದ್ದರಿಂದ ಈ ಭಾಗದಲ್ಲಿ ದಾರಿ ದೀಪಗಳನ್ನು ಮತ್ತು ಸೋಲಾರ್ ದೀಪಗಳನ್ನು ಅಳವಡಿಸಿ ಕೊಡುವ ಮೂಲಕ ಪರಿಸರ ಬೆಳಗುವಂತೆ ಮಾಡಬೇಕು ಎಂದು ಹೇಳಿದರು.
ಚೇತನ್ ಅಡ್ತಲೆ ರವರು ಮಾತನಾಡಿ ನಮ್ಮಲ್ಲಿ ಆನೆ ಉಪದ್ರ ಮಾತ್ರವಲ್ಲದೆ ಕಡವೆ, ಕಾಡುಕೋಣ ಮುಂತಾದ ಪ್ರಾಣಿಗಳಿಂದಲೂ ತುಂಬಾ ಸಮಸ್ಯೆ ಇದೆ.
ನಮ್ಮಲ್ಲಿ ಇರುವಂತಹ ಕೊಕ್ಕೋ ಗಿಡಗಳನ್ನು ಬೆಳೆಯಲು ಬಿಡುತ್ತಿಲ್ಲ. ಈ ಪ್ರಾಣಿಗಳು ಕೋಕೋ ಗಿಡಗಳನ್ನೇ ತಿಂದು ನಾಶ ಮಾಡುತ್ತಿದೆ ಎಂದರು.
ಅದೇ ರೀತಿ ಸಭೆಯಲ್ಲಿ ಉಪಸ್ಥಿತರಿದ್ದ ಗುಣವತಿ ಕೊಲ್ಲಂತಡ್ಕ, ಲೀಲಾವತಿ ಅರಂಬೂರು, ಶ್ರೀಹರಿ ಮಂಡೆಕ್ಕೋಲು, ಶಿವಾನಂದ ಕುಕ್ಕುಂಬಳ್ಳ, ಕಿಶೋರ್ ಕುಮಾರ್, ವಿನಯ್ ಕುಮಾರ್ ಕಂದಡ್ಕ ಇನ್ನೂ ಹಲವಾರು ಕೃಷಿಕರುಗಳು ತಮ್ಮ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಸುಳ್ಯ ವಲಯ ಅರಣ್ಯಾಧಿಕಾರಿ ಮಂಜುನಾಥ್ ರವರು ಕೃಷಿಕರು ಹೇಳಿರುವ ಎಲ್ಲಾ ಸಮಸ್ಯೆಗಳನ್ನು ಪುಸ್ತಕದಲ್ಲಿ ದಾಖಲಿಸಿ ಕ್ಕೊಂಡರು. ಬಳಿಕ ಮಾತನಾಡಿದ ಅವರು ‘ಇಂತಹ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಮೂಲಕ ಸಂಘಟಕರು ಉತ್ತಮ ಕಾರ್ಯ ಮಾಡಿದ್ದಾರೆ ಎಂದರು. ಸಮಸ್ಯೆಗೊಳಗಾಗಿರುವ ತಾಲೂಕಿನ ಎಲ್ಲಾ ಕೃಷಿಕರನ್ನು ಮತ್ತು ನಾವು ಅಧಿಕಾರಿಗಳನ್ನು ಒಂದುಗೂಡಿಸಿ ಪರಸ್ಪರ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಳ್ಳಲು ಮತ್ತು ಸಮಾಲೋಚನೆ ಮಾಡಿಕೊಳ್ಳಲು ಉತ್ತಮ ವೇದಿಕೆಯನ್ನು ನೀಡಿದ್ದೀರಿ ಅದಕ್ಕಾಗಿ ಸಂಘಟಕರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.ಬಳಿಕ ಮಾತನಾಡಿದ ಅವರು ಮೊದಲೆಲ್ಲಾ ನಮ್ಮ ಗ್ರಾಮ ಭಾಗದಲ್ಲಿ ಕಾಡು ಮತ್ತು ನಾಡಿನ ನಡುವೆ ಬಹಳ ಅಂತರವಿತ್ತು. ಮೊದಲಿನ ಕಾಲದಲ್ಲಿ ಊರು ಮತ್ತು ಕಾಡಿನ ನಡುವೆ ಇದ್ದ ಕುಮ್ಕಿ ಜಾಗ ಗಳು (ಬಫರ್ ಜೋನ್) ಇಂದು ಅದು ಬಹುತೇಕ ಈಗ ಕಂಡು ಬರುತ್ತಿಲ್ಲ.
ಈ ಕಾರಣದಿಂದಾಗಿ ಕಾಡುಪ್ರಾಣಿಗಳು ಏಕಾಏಕಿ ಊರುಗಳಿಗೆ ಲಗ್ಗೆ ಇಡುವಂತೆ ಆಗಿದೆ.ಕಾಡು ಪ್ರಾಣಿಗಳು ಅದರ ಜಾಗವನ್ನು ಮೀರಿ ಹೊರಗಡೆ ಬರುವುದಿಲ್ಲ. ಆನೆಗಳು ಅದರ ಜಾಗದಿಂದ ಕಾಡು ಪ್ರದೇಶದಿಂದ ಸುಮಾರು 500 ಮೀಟರ್ ನಷ್ಟು ಮಾತ್ರ ದೂರಕ್ಕೆ ಬರುತ್ತಿದ್ದು ಅದು ಈಗ ನಮಗೆ ಪೇಟೆಗೆ ಬಂದಾಗೆ ಅಥವಾ ನಮ್ಮ ಊರಿಗೆ ಬಂದಾಗ ಕಾಣುತ್ತದೆ. ಸಹಜವಾಗಿ ಕಾಡುಪ್ರಾಣಿಗಳು ಆಹಾರವನ್ನು ಅರಸಿ ಊರಿಗೆ ಬರುವುದು ಇದೆ. ಆದರೆ ಆ ಬಂದ ದಿನಗಳಲ್ಲಿ ಅದಕ್ಕೆ ಸ್ವಾದಿಷ್ಟವಾದ ಆಹಾರಗಳು ಸಿಕ್ಕಿದ್ದಾಗ ಮತ್ತೆ ದಿನಗಳ ಬಳಿಕ ಅಥವಾ ವರ್ಷಗಳ ಬಳಿಕ ಅದೇ ಜಾಗಕ್ಕೆ ಬರುವುದು ವಾಡಿಕೆ ಆಗಿರುತ್ತದೆ. ಆದ್ದರಿಂದ ನಮ್ಮ ನಮ್ಮ ಕೃಷಿ ಜಾಗಗಳನ್ನು ನಾವು ಬೇಲಿ ನಿರ್ಮಿಸುವ ಮೂಲಕ ರಕ್ಷಿಸಿ ಕೊಳ್ಳಬೇಕಾಗಿದೆ.ಅದಕ್ಕಾಗಿ ಸರ್ಕಾರದಿಂದ ಸೋಲಾರ್ ಬೇಲಿ ಅಳವಡಿಸಲು ಮತ್ತು ರಕ್ಷಣೆ ಪಡೆಯಲು ಯೋಜನೆಗಳು ಲಭ್ಯವಿದ್ದು ಕೃಷಿಕರು ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಹೇಳಿದರು. ಮನುಷ್ಯರಿಗೂ ಸಮಾಜದಲ್ಲಿ ಯಾವ ರೀತಿ ಜೀವಿಸುವ ಹಕ್ಕುಗಳು ಇದೆಯೋ ಅದೇ ರೀತಿ ಪ್ರಾಣಿಗಳು ಕೂಡ ಅದೇ ರೀತಿಯ ಹಕ್ಕನ್ನು ಕಾನೂನು ಕಾಯ್ದೆಯಲ್ಲಿ ನೀಡಲಾಗಿದೆ. ಆದ್ದರಿಂದ ಪ್ರಾಣಿಗಳು ಮತ್ತು ಮನುಷ್ಯರ ನಡುವೆ ದ್ವೇಷದ ಚಿಂತನೆ ಬಿಟ್ಟು ಅವರವರ ಹಕ್ಕಿನ ಅನುಗುಣವಾಗಿ ಇರ ಬೇಕಾಗುತ್ತದೆ. ಇಲಾಖೆಯಿಂದ ಜನರ ಮತ್ತು ಕೃಷಿ ರಕ್ಷಣೆಗೆ ಬೇಕಾದ ಎಲ್ಲಾ ಕೆಲಸ ಕಾರ್ಯಗಳನ್ನು ನಾವು ಮಾಡುತ್ತಿದ್ದೇವೆ ಇನ್ನೂ ಹೆಚ್ಚಿನದಾಗಿ ಯಾವ ರೀತಿಯಲ್ಲಿ ಮಾಡಬಹುದು ಮತ್ತು ಇದಕ್ಕೆ ಪರಿಹಾರ ಮಾರ್ಗವನ್ನು ಯಾವ ರೀತಿ ಕಂಡುಕೊಳ್ಳಬಹುದು ಎಂಬುದನ್ನು ಸಂಬಂಧಪಟ್ಟ ಕೃಷಿಕರು ಹಾಗೂ ಅಧಿಕಾರಿಗಳು ಪರಸ್ಪರ ಮಾಹಿತಿ ಮತ್ತು ವಿಷಯಗಳನ್ನು ಹಂಚಿಕೊಂಡು ಕೆಲಸಗಳನ್ನು ಮಾಡೋಣ ಎಂದು ಹೇಳಿದರು.
ವೇದಿಕೆಯಲ್ಲಿ ಕೃಷಿಕ ಸಮಾಜದ ಜಿಲ್ಲಾ ಅಧ್ಯಕ್ಷ ವಿಜಯ್ ಕುಮಾರ್, ದಕ್ಷಿಣ ಪ್ರಾಂತ್ಯ ಕಾರ್ಯಕಾರಿ ಸಮಿತಿ ಸದಸ್ಯ ಸುಬ್ರಾಯ, ಜಿಲ್ಲಾ ಸಂಘದ ಉಪಾಧ್ಯಕ್ಷ ಚಂದ್ರಾ ಕೋಲ್ಚರ್, ಜಿಲ್ಲಾ ಸಂಘದ ಜೊತೆ ಕಾರ್ಯದರ್ಶಿ ರಾಮ್ ಪ್ರಸಾದ್, ಹಾಗೂ ಪುತ್ತೂರು ವಲಯ ಅರಣ್ಯ ಅಧಿಕಾರಿ ಕಿರಣ್ ಬಿ ಎಂ ರವರು ಉಪಸ್ಥಿತರಿದ್ದರು.
ತಾಲೂಕಿನ ವಿವಿಧ ಭಾಗಗಳಿಂದ ಬಂದಂತಹ ಸುಮಾರು 50ಕ್ಕೂ ಹೆಚ್ಚು ಕೃಷಿಕರು ಸಭೆಯಲ್ಲಿ ಭಾಗವಹಿಸಿದ್ದರು.










