ಸಂಸದ ಬ್ರಿಜೇಶ್ ಚೌಟ, ಶಾಸಕಿ ಭಾಗೀರಥಿ ಮುರುಳ್ಯ ಭಾಗಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಕಲ್ಲು ಹಾಗೂ ಮರಳು ಸಮಸ್ಯೆಯನ್ನು ಶೀಘ್ರವಾಗಿ ಬಗೆ ಹರಿಸಬೇಕೆಂದು ಜಿಲ್ಲೆಯ ಬಿಜೆಪಿ ನಿಯೋಗ ಮುಖ್ಯಮಂತ್ರಿ ಬಳಿ ನಿಯೋಗ ತೆರಳಿ ಮನವಿ ಮಾಡಿದೆ.
ಸಂಸದ ಕ್ಯಾ.ಬ್ರಿಜೇಶ್ ಚೌಟ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸಹಿತ ಜಿಲ್ಲೆಯ ಶಾಸಕರು, ಬಿಜೆಪಿ ಪ್ರಮುಖರು ಈ ನಿಯೋಗದಲ್ಲಿದ್ದರು.















ಕರ್ನಾಟಕದ ಕರಾವಳಿ ಹಾಗು ಮಲೆನಾಡಿನ ಭಾಗಗಳಲ್ಲಿ ಭೂಮಿಯ ಮೇಲ್ಪದರದಲ್ಲಿ ಗಟ್ಟಿ ಮುರ ಇದ್ದು ಕೃಷಿ ಕಾರ್ಯಗಳನ್ನು ನಿರ್ವಹಿಸಲು ಕಷ್ಟಕರವಾಗಿರುವುದರಿಂದ ಬಹುಕಾಲದಿಂದಲೂ ಕಾರ್ಮಿಕರ ಸಹಾಯದಿಂದ ಅದನ್ನು ಜನಸಾಮಾನ್ಯರ ಉಪಯೋಗಕ್ಕೆ ಇಟ್ಟಿಗೆಯ ರೂಪದಲ್ಲಿ ಕತ್ತರಿಸಿ ತೆಗೆದು ಬಳಸುವುದು ಪ್ರತೀತಿ, ಕಾಲಕ್ರಮೇಣ ಕಾರ್ಮಿಕರ ಅಭಾವ ಉಂಟಾದಾಗ ಈ ಕಾರ್ಯವನ್ನು ಯಂತ್ರದ ಮೂಲಕ ನಿರ್ವಹಿಸಲು ಪ್ರಾರಂಭಿಸಲಾಯಿತು. ಇದೀಗ ರಾಜ್ಯ ಸರಕಾರದ ನಿಯಮಾವಳಿಗಳ ಕಾರಣದಿಂದ ಈ ಪ್ರಕ್ರಿಯೆಯು ಸಂಪೂರ್ಣ ಸ್ಥಗಿತಗೊಂಡಿದೆ. ಇಷ್ಟು ಮಾತ್ರ ವಲ್ಲದೆ ಸರಕಾರದ ಅಸಮರ್ಪಕ ಹಾಗು ಅವೈಜ್ಞಾನಿಕ ಮರಳು ನೀತಿಯಿಂದಾಗಿ ಜಿಲ್ಲೆಯಲ್ಲಿ ಮರಳಿನ ಪೂರೈಕೆಯೂ ಸಾಧ್ಯವಾಗುತಿಲ್ಲ. ಈ ಎಲ್ಲ ಅವಾಂತರಗಳಿಂದಾಗಿ ದಕ್ಷಿಣ ಕನ್ನಡದಲ್ಲಿ ಸಾಮಾನ್ಯ ಜನರ ಗೃಹ ನಿರ್ಮಾಣ ಕಾರಗಳಾಗಲಿ, ಕೃಷಿ ಸಂಬಂಧಿಸಿದ ಕಾಮಗಾರಿಗಳಾಗಲಿ ಅಥವಾ ಯಾವುದೇ ರೀತಿಯ ಕಟ್ಟಡ ಕಾಮಾಗಾರಿಗಳಾಲಿ ನಡೆಯುತಿಲ್ಲ. ಇದರಿಂದ ಜಿಲ್ಲೆಯ ಆರ್ಥಿಕತೆ ಸ್ಥಬ್ಧಗೊಂಡಿರುವುದಷ್ಟೇ ಅಲ್ಲದೇ, ಈ ಉದ್ಯೋಗವನ್ನುಹಾಗು ಈ ಸಂಬಂಧಿಸಿದ ಉದ್ಯೋಗಗಳನ್ನು ನಂಬಿರುವ ಸಾವಿರಾರು ಜನರ ಹಾಗು ಕಾರ್ಮಿಕರ ಬದುಕು ಇದೀಗ ಬೀದಿಗೆ ಬಿದ್ದಿದೆ. ಇದನ್ನು ಸರಿ ಪಡಿಸುವ ನಿಟ್ಟಿನಲ್ಲಿ ಈ ಕೆಳಗಿನ ಆಗ್ರಹಗಳನ್ನು ಮಾಡುವ ಅನಿವಾರತೆ ಎದುರಾಗಿದೆ.
ಕೆಂಪು ಮುರ ಕಲ್ಲುಕೋರೆಯನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ವ್ಯಾಪ್ತಿಗೆ ಸೇರಿಸಿ ಅನಗತ್ಯ ನಿಯಮಗಳ ಮೂಲಕ ಕೋರೆ ಮಾಲಕರಿಗೆ, ಜನಸಾಮಾನ್ಯರಿಗೆ ಹಾಗು ಕಾರ್ಮಿಕರಿಗೆ ಹೊರೆಯಾಗುವಂತೆ ಮಾಡಲಾಗುತ್ತಿದೆ. ಈ ಮೂಲಕ ಪರೋಕ್ಷವಾಗಿ ಪೋಲಿಸ್, ಕಂದಾಯ, ಗಣಿ ಇಲಾಖೆ ಅಧಿಕಾರಿಗಳು ಲಂಚಕ್ಕೆ ಪೀಡಿಸುವಂತಾಗಿದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಕೆಂಪು ಕಲ್ಲು ಕೋರೆ ಕಾರ್ಯವನ್ನು ಗಣಿ ಇಲಾಖೆ ವ್ಯಾಪ್ತಿಯಿಂದ ಹೊರಗಿರಿಸಿ ಸರಳೀಕೃತ ವ್ಯವಸ್ಥೆಯಲ್ಲಿ ಪರವಾನಿಗೆ ನೀಡುವಂತಾಗಬೇಕು.
ಕೇರಳದಲ್ಲಿ 1 ಟನ್ ಕಲ್ಲಿಗೆ ಕೇವಲ 32 ರೂಪಾಯಿಗಳಷ್ಟು ರಾಜಧನ ನಿಗದಿಯಾಗಿದ್ದರೆ ಅದೇ ಪ್ರಮಾಣದ ಕಲ್ಲಿಗೆ ಕರ್ನಾಟಕದಲ್ಲಿ 290 ರೂಪಾಯಿಗಳಷ್ಟು ರಾಜಧನವನ್ನು ಕರ್ನಾಟಕದ ಸರಕಾರ ನಿಗದಿಪಡಿಸಿರುವುದು ಅತ್ಯಂತ ಖೇದಕರ ವಿಷಯವಾಗಿದೆ. ಪರವಾನಿಗೆಯಲ್ಲಿ 1 ಟನ್ ಮುರ ಇಟ್ಟಿಗೆಗೆ ವಿಧಿಸಿರುವ ಮೊತ್ತವು ಶೇ. 96% ಆಗಿದ್ದು ಈ ಮೊತ್ತವನ್ನು ಪ್ರತಿ 1 ಟನ್ ಮುರ ಇಟ್ಟಿಗೆಗೆ ಶೇ. 10% ಗೆ ನಿಗಿದಿಗೊಳಿಸಿ ರಾಜ್ಯದಲ್ಲಿ ವಿಪರೀತ ಪ್ರಮಾಣದಲ್ಲಿ ಏರಿಸಲಾಗಿರುವ ರಾಜಧನವನ್ನು ಈ ಕೂಡಲೇ ಜಾರಿಗೆ ಬರುವಂತೆ ತಗ್ಗಿಸಬೇಕಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.










