ಕರ್ನಾಟಕ ಸರ್ಕಾರದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ – 2025 ಬಗ್ಗೆ ಜಿಲ್ಲಾ ಮಟ್ಟದ ಮಾಹಿತಿ ಕಾರ್ಯಾಗಾರ

0

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಕರ್ನಾಟಕ ಸರ್ಕಾರದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ೨೦೨೫ರ ಬಗ್ಗೆ ಜಿಲ್ಲಾ ಮಟ್ಟದ ಮಾಹಿತಿ ಕಾರ್ಯಗಾರದ ಸಭೆಯು ಪುತ್ತೂರಿನ ಒಕ್ಕಲಿಗ ಸಭಾಭವನದ ಚುಂಚಶ್ರೀಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ.ರೇಣುಕಾ ಪ್ರಸಾದ್ ಕೆ.ವಿ.ಯವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಸಭಾ ಅಧ್ಯಕ್ಷತೆಯನ್ನು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ವಹಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ರೀ ಪಟ್ಟಡ ಶಿವಕುಮಾರ್ ವಿಷಯ ತಜ್ಞರು ಮ್ಯಸೂರು ಇವರು ಭಾಗವಹಿಸಿ, ಒಕ್ಕಲಿಗ ಸಮುದಾಯದ ಪ್ರತಿಯೊಬ್ಬರೂ ಸರಿಯಾದ ರೀತಿಯಲ್ಲಿ ಅಂಕಿ ಅಂಶಗಳನ್ನು ದಾಖಲಿಸಬೇಕು ನಮ್ಮ ಜನಾಂಗದವರ ಸಾಮಾಜಿಕ ಸ್ಥಿತಿ ಗತಿ ಶೈಕ್ಷಣಿಕ ಮಟ್ಟ ಮತ್ತು ಆರ್ಥಿಕ ಬೆಳವಣಿಗೆಯ ಬಗ್ಗೆ ಪ್ರಾಮಾಣಿಕವಾಗಿ ಮುಚ್ಚುಮರೆಯಲ್ಲದೆ ದಾಖಲಿಸಬೇಕು ಇದರಿಂದ ಮುಂದಿನ ಪೀಳಿಗೆಗೆ ಅನುಕೂಲವಾಗುತ್ತದೆ ಎಂಬುದಾಗಿ ಸಲಹೆ ನೀಡಿದರು. ಈ ಹಿಂದೆ ಮಾಡಿದ ಸಮೀಕ್ಷೆಗಳು ಸರಿಯಾದ ರೀತಿಯಲ್ಲಿ ನಡೆದಿರುವುದಿಲ್ಲ. ಈ ಸಲ ಹಾಗಾಗಬಾರದು ಎಂಬುದಾಗಿ ಮಾಹಿತಿ ನೀಡಿದರು.


ಈ ಸಭೆಯಲ್ಲಿ ಜಗದ್ಗುರು ಶ್ರೀ ಶ್ರೀ ಶ್ರೀ ನಿರ್ಮಾಲಾನಂದ ಸ್ವಾಮೀಜಿಗಳ ವಿಶೇಷ ಪ್ರತಿನಿಧಿಗಳಾಗಿ ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷರಾದ ಎಮ್.ನಾಗರಾಜುರವರು ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಕೋನಪ್ಪ ರೆಡ್ಡಿಯವರು ಉಪಸ್ಥಿತರಿದ್ದು, ಸರ್ಕಾರದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಒಂದು ಅವಕಾಶ ಸಿಕ್ಕಿದೆ. ನಮ್ಮೆಲ್ಲರ ಹೋರಾಟದ ಫಲವಾಗಿ ಈ ಸಮೀಕ್ಷೆಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಇದನ್ನು ನಾವೆಲ್ಲಾ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳದಿದ್ದರೆ ನಮ್ಮ ಸಮುದಾಯದ ಬೆಳವಣಿಗೆ ಕುಂಠಿತವಾಗುವುದರಲ್ಲಿ ಎರಡು ಮಾತಿಲ್ಲ ಹಾಗಾಗಿ ಮುಂದಿನ ದಿನಗಳಲ್ಲಿ ಸಮೀಕ್ಷೆಗೆ ಪ್ರತಿಯೊಬ್ಬರು ಸಹಕರಿಸುವುದು ಅಗತ್ಯವೆಂದು ತಿಳಿಸುತ್ತಾ,ನಮ್ಮ ರಾಜ್ಯ ಒಕ್ಕಲಿಗರ ಸಂಘದಲ್ಲಿ ನಿರ್ಣಯಿಸಿದಂತೆ ಒಕ್ಕಲಿಗ (ಗಿoಞಞಚಿಟigಚಿ ಉoತಿಜಚಿ)ಎಂಬುದಾಗಿ ಎಲ್ಲರೂ ನಮೂದಿಸಬೇಕೆಂದು ಸೂಚಿಸಿದರು.


ಈ ಕಾರ್ಯಕ್ರಮದಲ್ಲಿ ಒಕ್ಕಲಿಗ ಗೌಡ ಸಂಘ ಮಂಗಳೂರು ಇದರ ಮಾತೃ ಸಂಘದ ಅಧ್ಯಕ್ಷರಾದ ಶ್ರೀ ಲೋಕಯ್ಯಗೌಡ ಮಾತಾಡಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕಲಂನಲ್ಲಿ ಸೂಚಿಸಿರುವಂತೆ ಮೊದಲಿಗೆ ಜಾತಿ ಎಂಬುದರಲ್ಲಿ ಒಕ್ಕಲಿಗ ಎಂದು ಬರೆದು ಉಪಜಾತಿ ಸೂಚನೆಯಲ್ಲಿ ಗೌಡ ಎಂಬುದಾಗಿಯೂ, ಭಾಷೆ ಕಲಂನಲ್ಲಿ ಆಯಾ ಪ್ರಾದೇಶಿಕ ಭಾಷೆಗಳಾದ ಅರೆಭಾಷೆ, ತುಳು, ಕನ್ನಡ ಹೀಗೆ ಬರೆಯುವಂತೆ ಸೂಚಿಸಿದಲ್ಲದೆ ಪ್ರತಿಯೊಬ್ಬರೂ ಇದನ್ನು ಅನುಸರಿಸಬೇಕು ಎಂಬುದಾಗಿ ಅಭಿಪ್ರಾಯ ತಿಳಿಸಿದರು. ಇದಕ್ಕೆ ಪೂರಕವಾಗಿ ಪುತ್ತೂರು ಮಾಜಿ ಶಾಸಕರಾದ ಸಂಜೀವ ಮಠಂದೂರು, ಸರಕಾರದ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ಭರತ್ ಮುಂಡೋಡಿ, ನಿವೃತ್ತ ಪೊಲೀಸ್ ಅಧೀಕ್ಷರಾದ ರಾಮದಾಸ್ ಪುತ್ತೂರು ಮತ್ತು ಖ್ಯಾತ ಉದ್ಯಮಿ ಎಂ.ಬಿ.ಸದಾಶಿವ ಸುಳ್ಯ ಇವರು ಸಹಮತ ವ್ಯಕ್ತಪಡಿಸಿದರು. ಈ ತೀರ್ಮಾನಕ್ಕೆ ಸಭೆಯಲ್ಲಿ ಬೆಂಬಲ ಸೂಚಿಸಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.


ಕಾರ್ಯಕ್ರಮದ ವೇದಿಕೆಯಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರಾದ ಸಂಜೀವ ಮಠಂದೂರು, ಜಿಲ್ಲೆಯ ಎಲ್ಲಾ ತಾಲೂಕುಗಳ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷರುಗಳು, ಕಾರ್ಯದರ್ಶಿಗಳು ಉಪಸ್ಥಿತರಿದ್ದರು. ಸುಮಾರು ೧೫೦ಕ್ಕಿಂತಲೂ ಹೆಚ್ಚಿನ ಗಣ್ಯರು ಜಿಲ್ಲೆಯ ಆರು ತಾಲೂಕುಗಳಾದ ಮಂಗಳೂರು, ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಕಡಬ ಗಳಿಂದ ಆಗಮಿಸಿದ್ದರು. ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ಪ್ರಾಸ್ತವಿಕವಾಗಿ ಚಂದ್ರಶೇಖರ ಪೇರಾಲು ಮಾತನಾಡಿ ಶೈಕ್ಷಣಿಕ ಸಮೀಕ್ಷೆಗೆ ಎಲ್ಲರೂ ಸರಿಯಾಗಿ ಅರಿತು ಸಹಕರಿಸುವುದು ಮುಖ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಕಾರ್ಯಕ್ರಮಕ್ಕೆ ಉಪನ್ಯಾಸಕರಾಗಿ ಆಗಮಿಸಿದ ವಿಷಯ ತಜ್ಞ ಪಟ್ಟಡ ಶಿವಕುಮಾರ್ ರವರನ್ನು, ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷರಾದ ಎಮ್ ನಾಗರಾಜ ರವರನ್ನು ಮತ್ತು ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಕೋನಪ್ಪರೆಡ್ಡಿ ಯವರನ್ನು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ.ರೇಣುಕಾ ಪ್ರಸಾದ್ ಕೆ.ವಿ.ಯವರು ಶಾಲು ಹೊದಿಸಿ ಸನ್ಮಾನಿಸಿ ಶುಭ ಹಾರೈಸಿದರು.