ಸ್ವಾತಂತ್ರ್ಯದ ದಿನ ಮನೆ ಮನೆಯಲ್ಲಿ ಹಬ್ಬವಾಗಲಿ ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರವಾಗಲಿ

0
  • 75ನೇ ವರ್ಷದ ಸ್ವಾತಂತ್ರ್ಯೋತ್ಸವ ಭ್ರಷ್ಟಾಚಾರದಲ್ಲಿ 85ನೇ ಸ್ಥಾನದ ಭಾರತವನ್ನು ಭ್ರಷ್ಟಾಚಾರ ರಹಿತ 1ನೇ ಸ್ಥಾನಕ್ಕೆ ತರಲಿ
  • ಸುಳ್ಯ, ಪುತ್ತೂರು, ಬೆಳ್ತಂಗಡಿ, ದ.ಕ. ಜಿಲ್ಲೆ, ರಾಜ್ಯ ದೇಶ ಭ್ರಷ್ಟಾಚಾರ ಮುಕ್ತವಾಗಲಿ

ಈ ಸಲದ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೇಶದ 20 ಕೋಟಿ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸುವ ‘ಹರ್ ಘರ್ ತಿರಂಗ’ ಆಂದೋಲನವನ್ನು ಬಿಜೆಪಿ ಮತ್ತು ಸರಕಾರ ಘೋಷಿಸಿದೆ. ಅದು ಸಂತೋಷದ ವಿಷಯ ಆದರೆ ನಾವು ಕಳೆದ ವರ್ಷದ ಸ್ವಾತಂತ್ರೋತ್ರ್ಯವದ ದಿನದಂದು ನಮ್ಮ ತಾಲೂಕಿನ ಎಲ್ಲಾ ಮನೆಗಳಲ್ಲಿ ಸ್ವಾತಂತ್ರ್ಯದ ಘೋಷಣೆ ಮೊಳಗಬೇಕು. ಊರಿನಲ್ಲಿ ಉತ್ತಮ ಸೇವೆ ಮಾಡುವವರನ್ನು ಗುರುತಿಸಿ ಸನ್ಮಾನಿಸಬೇಕು. ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರವಾಗಬೇಕು ಎಂದು ಕಳೆದ ವರ್ಷ ಜೂನ್ 12ನೇ ತಾರೀಕಿನಂದು ಸುದ್ದಿ ಜನಾಂದೋಲನವನ್ನು ಪ್ರಾರಂಭಿಸಿದ್ದೆವು. ಗ್ರಾಮ ಗ್ರಾಮಗಳಲ್ಲಿ ಸ್ವಾತಂತ್ರದ ಘೋಷಣೆಗಳೊಂದಿಗೆ ಮೆರವಣಿಗೆ, ಉತ್ತಮ ಸೇವೆ ಮಾಡುವವರನ್ನು ಗುರುತಿಸುವ ಕಾರ್ಯಕ್ಕೆ ಕರೆ ಕೊಟ್ಟಿದ್ದೆವು. ಜನರ ಓಟಿನ ಮೂಲಕ ತಾಲೂಕಿನ ಜನ ಮೆಚ್ಚಿದ ಅಧಿಕಾರಿಗಳನ್ನು ಗುರುತಿಸಿದ್ದೆವು. ಶಾಸಕರು ಮಾಡಿದ ಉತ್ತಮ ಕೆಲಸಗಳನ್ನು, ಜನರಿಗೆ ಆಗಬೇಕಾದ ಮುಖ್ಯ ಕೆಲಸಗಳನ್ನು ಜನರು ಗುರುತಿಸಿದ್ದರು. ಈ ಸಲವೂ ಪ್ರತಿ ಗ್ರಾಮದ ಪ್ರತಿ ಮನೆ-ಮನೆಯಲ್ಲಿ ಸ್ವಾತಂತ್ರ್ಯದ ಘೋಷಣೆ, ಊರಿನಲ್ಲಿ ಮೆರವಣಿಗೆ, ಉತ್ತಮ ಸೇವೆ ಮಾಡುವವರನ್ನು ಗುರುತಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ. ಆ ನಂತರ ಉತ್ತಮ ಸೇವೆ ಮಾಡಿದ ಅಧಿಕಾರಿಗಳನ್ನು ಮೆರವಣಿಗೆಯಲ್ಲಿ ಕರೆತಂದು ಸಾರ್ವಜನಿಕ ಸನ್ಮಾನ ಮಾಡಬೇಕೆಂದಿದ್ದೇವೆ

ಭ್ರಷ್ಟಾಚಾರದ ಪಟ್ಟಿಯಲ್ಲಿ 85ನೇ ಸ್ಥಾನದಲ್ಲಿರುವ ಭಾರತ ದೇಶ ಭ್ರಷ್ಟಾಚಾರ ರಹಿತ 1ನೇ ಸ್ಥಾನದ ದೇಶಗಳ ಪಟ್ಟಿಯಲ್ಲಿ ಬರಬೇಕು ಅದಕ್ಕಾಗಿ ದೇಶದಲ್ಲಿ ಭ್ರಷ್ಟಾಚಾರದ ವಿರುದ್ಧ ಆಂದೋಲನ ಆಗಬೇಕು. ಭ್ರಷ್ಟಾಚಾರ ದೇಶದ ಅಭಿವೃದ್ಧಿಗೆ ಮಾರಕ ಮತ್ತು ಬಡತನ, ಸಮಸ್ಯೆಗಳಿಗೆ ಕಾರಣ ಎಂದಿರುವುದರಿಂದ ಅದರ ನಿರ್ಮೂಲನೆಗೆ ಪ್ರತಿಯೊಬ್ಬರು ಪಣತೊಡಬೇಕು, ಪ್ರತಿಜ್ಞೆ ಸ್ವೀಕರಿಸಬೇಕು. ನಮ್ಮ ಊರನ್ನು, ತಾಲೂಕನ್ನು ಜಿಲ್ಲೆಯನ್ನು ಲಂಚ, ಭ್ರಷ್ಟಾಚಾರ ಮುಕ್ತ ಮಾಡಿ ಅಭಿವೃದ್ಧಿ ಪಥಕ್ಕೆ ಸೇರಿಸಲು ನಮ್ಮಿಂದ ಸಾಧ್ಯವಿದೆ. ಬನ್ನಿ ಕೈಜೋಡಿಸಿರಿ.