ಪತಿಯೊಂದಿಗೆ ಬರಲು ನಿರಾಕರಿಸಿದ ಮಹಿಳೆಯ ಮನವೊಲಿಸಿ ಸುಳ್ಯಕ್ಕೆ ಕರೆತಂದ ಪತಿ
ಅಸ್ಸಾಂ ಮೂಲದ ಮಹಿಳೆಯೊಬ್ಬರು ಜನವರಿ 25 ರಂದು ಬೆಳಿಗ್ಗೆ 11 ಗಂಟೆಗೆ ಪೈಚಾರು ಮನೆಯಿಂದ ಕಾಣೆಯಾಗಿ ಸಂಜೆಯಾದರೂ ಬಾರದ ಹಿನ್ನೆಲೆಯಲ್ಲಿ ಆಕೆಯ ಪತಿ ಅದೇ ದಿನ ಸಂಜೆ ಸುಳ್ಯ ಠಾಣೆಯಲ್ಲಿ ದೂರು ನೀಡಿದ್ದರು. ಕಳೆದ ನಾಲ್ಕು ತಿಂಗಳಿಂದ ಸುಳ್ಯದ ಪೈಚಾರು ಸಂಸ್ಥೆ ಯೊಂದರಲ್ಲಿ ತೆಂಗಿನಕಾಯಿ ಸುಲಿಯುವ ಕೆಲಸವನ್ನು ಮಾಡುತ್ತಿದ್ದ ಮಹಿಳೆ ಪತಿ ಹಾಗೂ ಎರಡು ಮಕ್ಕಳೊಂದಿಗೆ ಪೈಚಾರಿನಲ್ಲಿ ತಾನು ಕೆಲಸ ಮಾಡುತ್ತಿರುವ ಸಂಸ್ಥೆಯವರು ನೀಡಿದ ರೂಮೊಂದರಲ್ಲಿ ಜೀವನ ನಡೆಸುತ್ತಿದ್ದರು.
ಜನವರಿ ೨೫ರಂದು ಬೆಳಿಗ್ಗೆಯಿಂದ ಮನೆಯಿಂದ ಮಹಿಳೆ ಕಾಣೆಯಾಗಿದ್ದು ಆಕೆಯ ಪತಿ ಕೋಗನ್ ತಾತಿ ಎಂಬುವವರು ಜನವರಿ 25ರಂದು ಸಂಜೆ ಸುಳ್ಯ ಪೊಲೀಸ್ ಠಾಣೆಗೆ ಪತ್ನಿ ಕಾಣೆಯಾಗಿರುವ ದೂರನ್ನು ನೀಡಿದ್ದಾರೆ ಎನ್ನಲಾಗಿದೆ.
ದೂರನ್ನು ಸ್ವೀಕರಿಸಿದ ಪೊಲೀಸರು ಆಕೆಯನ್ನು ಹುಡುಕುವಲ್ಲಿ ತೊಡಗಿದಾಗ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ದಿಲೀಪ್ ರವರಿಗೆ ಮಹಿಳೆಯ ಬಳಿ ಇದ್ದ ಮೊಬೈಲ್ ಫೋನ್ ಲೊಕೇಶನ್ ಕುಂದಾಪುರದಲ್ಲಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಇದರ ಆಧಾರದ ಮೇಲೆ ಕುಂದಾಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಕುಂದಾಪುರ ಪೊಲೀಸರು ಮಹಿಳೆಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಅದಾಗಲೇ ವಿಷಯ ಬೆಳಕಿಗೆ ಬಂದಿದ್ದು ಮಹಿಳೆ ತನ್ನ ಪ್ರಿಯಕರ ಚಂದನ್ ಎಂಬ ವ್ಯಕ್ತಿಯೊಂದಿಗೆ ಮನೆ ಬಿಟ್ಟು ಬಂದಿದ್ದು ಆತನೊಂದಿಗೆ ಇರುವುದಾಗಿ ತೀರ್ಮಾನ ಕೈಗೊಂಡಿದ್ದರು ಎನ್ನಲಾಗಿದೆ.
ಆಕೆಯನ್ನು ಕುಂದಾಪುರದ ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂಬ ವಿಷಯ ತಿಳಿದ ಆಕೆಯ ಪತಿ ತನ್ನ ಒಬ್ಬ ಪರಿಚಯಸ್ಥರನ್ನು ಕರೆದುಕೊಂಡು ಕುಂದಾಪುರಕ್ಕೆ ಹೋಗಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಇದ್ದ ತನ್ನ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಕಂಡು ಪೊಲೀಸರೊಂದಿಗೆ ನನ್ನ ಪತ್ನಿಯನ್ನು ನನ್ನೊಂದಿಗೆ ಕಳಿಸಿಕೊಡುವಂತೆ ಕೇಳಿಕೊಂಡರು ಎನ್ನಲಾಗಿದೆ.
ಆಗ ಆ ಮಹಿಳೆ ತಾನು ಗಂಡನ ಬಳಿ ಹೋಗುವುದಿಲ್ಲ ತನ್ನ ಪ್ರೇಮಿ ಚಂದನ್ ರವರ ಜೊತೆ ಇರುತ್ತೇನೆ ಎಂದು ಪಟ್ಟು ಹಿಡಿದಿದ್ದಾರೆ. ಈ ವೇಳೆ ಆಕೆಗೆ ಬುದ್ಧಿವಾದ ಹೇಳಿದ ಕುಂದಾಪುರ ಪೊಲೀಸರು ಜನವರಿ ೨೬ರಂದು ರಾತ್ರಿ ಆಕೆಯ ಮನವೊಲಿಸಿ ಪತಿಯೊಂದಿಗೆ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ. ಜನವರಿ ೨೭ರಂದು ಬೆಳಿಗ್ಗೆ ಸುಳ್ಯ ಪೊಲೀಸರು ಆಕೆಯನ್ನು ಮತ್ತು ಆಕೆಯ ಪತಿಯನ್ನು ಸುಳ್ಯ ಠಾಣೆಗೆ ಕರೆಸಿ ಮಾತುಕತೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಈ ಮಹಿಳೆ ಎಂಟು ವರ್ಷದ ಪುತ್ರಿ ಹಾಗೂ ನಾಲ್ಕು ವರ್ಷದ ಪುತ್ರಿಯೊಂದಿಗೆ ತನ್ನ ಪತಿಯ ಜೊತೆ ಪೈಚಾರಿನಲ್ಲಿ ತಾನು ತೆಂಗಿನಕಾಯಿ ಸಿಪ್ಪೆ ಸುಲಿಯುವ ಸಂಸ್ಥೆಯವರು ನೀಡಿರುವ ಕ್ವಾರ್ಟರ್ಸ್ ನಲ್ಲಿ ವಾಸಿಸುತ್ತಿದ್ದರು. ಉಡುಪಿಯಲ್ಲಿ ಈಕೆಯೊಂದಿಗೆ ಸಿಕ್ಕಿದ್ದ ಚಂದನ್ ಎಂಬ ವ್ಯಕ್ತಿ ಅಸ್ಸಾಂ ಮೂಲದವರಾಗಿದ್ದು ಮಂಗಳೂರು ಹೋಟೆಲ್ ಒಂದರಲ್ಲಿ ಚೈನೀಸ್ ಫುಡ್ ಮೇಕರ್ ಆಗಿ ಕೆಲಸ ಮಾಡುತ್ತಿದ್ದು ಇದಕ್ಕೂ ಮುನ್ನ ಒಮ್ಮೆ ಇವರು ಕೆಲಸ ಮಾಡುತ್ತಿದ್ದ ಅಂಗಡಿಗೆ ಬಂದು ಹೋಗಿದ್ದ ಎನ್ನಲಾಗಿದೆ.