*ಹಳದಿ ರೋಗ ಹರಡದಂತೆ ತಡೆಯುವುದು ಇಂದಿನ ಅನಿವಾರ್ಯ : ವಿಜ್ಞಾನಿ ಡಾ| ಭವಿಷ್ಯ*
ಮುಕ್ಕೂರು : ಅಡಿಕೆ ಹಳದಿ ಎಲೆ ರೋಗ ಹರಡದ ಹಾಗೆ ತಡೆಯುವುದು ಇಂದಿನ ಅನಿವಾರ್ಯತೆಯಾಗಿದೆ. ಔಷಧವೇ ಇಲ್ಲದ ಈ ರೋಗವು ಹರಡದಂತೆ ಪರಿಣಾಮಕಾರಿ ಮಾರ್ಗೋಪಾಯ ಅನುಸರಿಸುವ ಅಗತ್ಯತೆ ಇದೆ ಎಂದು ವಿಟ್ಲ ಕೇಂದ್ರೀಯ ಸಸ್ಯ ಬೆಳೆಗಳ ಸಂಶೋಧನಾ ಕೇಂದ್ರದ ತೋಟಗಾರಿಕಾ ವಿಜ್ಞಾನಿ ಡಾ|ಭವಿಷ್ಯ ಹೇಳಿದರು.
*ಮುಕ್ಕೂರು-ಕುಂಡಡ್ಕ ನೇಸರ ಯುವಕ ಮಂಡಲ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ವಿಟ್ಲ ಕೇಂದ್ರಿಯ ಸಸ್ಯ ಬೆಳೆಗಳ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ನೀರ್ಕಜೆ ಸುಬ್ರಾಯ ಭಟ್ ಅವರ ಕೃಷಿ ತೋಟದಲ್ಲಿ ಎ.16 ರಂದು ನಡೆದ ಹಳದಿ ಎಲೆ ರೋಗ ನಿರ್ವಹಣಾ ಮಾರ್ಗೋಪಾಯ ಬಗ್ಗೆ ಮಾಹಿತಿ ಕಾರ್ಯಕ್ರಮ ಹಾಗೂ ಕಾರ್ಬನ್ ಫೈಬರ್ ದೋಟಿ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾಹಿತಿ ನೀಡಿದರು.*
ಎಲೆ ಹಳದಿ ರೋಗವು ಯಾವುದೇ ಗಿಡಗಳ ಮೂಲಕ ಹರಡಬಲ್ಲುದು.ಪೈಟೋಪ್ಲಾಸ್ಮಾಕ್ಕೆ ಜೀವಂತ ಸೆಲ್ ಬೇಕು. ರೋಗ ವಾಹಕದಿಂದ ಹರಡುತ್ತದೆ ಎಂದ ಅವರು ಕೃಷಿಕರ ಜತೆ ಸಂವಾದ ನಡೆಸಿ ಅವರ ಪ್ರಶ್ನೆಗಳಿಗೆ ಉತ್ತರಿಸಿದರು. ಈ ತನಕ ಯಾವುದೇ ಸಮಸ್ಯೆ ಇಲ್ಲದೆ ಇರಬಹುದು. ಆದರೆ ಮುಂದಿನ ಪರಿಸ್ಥಿತಿ ಹೇಗೆ ಎನ್ನುವ ಬಗ್ಗೆ ಯೋಚಿಸಿ ಮುಂದಡಿ ಇಡುವ ಅಗತ್ಯತೆ ಇದೆ ಎಂದವರು ಉಲ್ಲೇಖಿಸಿದರು.
ಆರೋಗ್ಯವಂತ ಅಡಿಕೆ ಮರದಿಂದ ಅಡಿಕೆ ತಂದು ಗಿಡವನ್ನಾಗಿಸಿ ನಾಟಿ ಮಾಡುವುದು ಉತ್ತಮ. ಪೋಷಕಾಂಶಗಳ ಸೂಕ್ತ ನಿರ್ವಹಣೆಯ ಅಗತ್ಯ ಇದ್ದು ಈ ಬಗ್ಗೆಯು ಕೃಷಿಕರು ಗಮನ ಹರಿಸಬೇಕು. ಎಲೆ ಹಳದಿ ರೋಗ ಗುಣಪಡಿಸುವ ಔಷಧ ಇಲ್ಲ. ಮಾರುಕಟ್ಟೆಯಲ್ಲಿ ಔಷಧ ಮಾರಾಟ ಮಾಡಲಾಗುತ್ತಿದ್ದರೂ ಅದಕ್ಕೆ ಯಾವುದೇ ಆಧಾರ ಇಲ್ಲ ಎಂದವರು ಹೇಳಿದರು.
*ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ಮಾತನಾಡಿ,* ಹಳದಿ ಎಲೆ ರೋಗ ಹರಡುವಿಕೆ ವೇಗವಾಗಿ ಹಬ್ಬಿದ್ದು ಈ ಬಗ್ಗೆ ಪ್ರತಿಯೊಬ್ಬರು ಗಂಭೀರವಾಗಿ ಯೋಚಿಸಬೇಕಾದ ಕಾಲಘಟ್ಟದಲ್ಲಿ ಇದ್ದೇವೆ. ಹೀಗಾಗಿ ಕಾಲ ಕಾಲಕ್ಕೆ ಉತ್ತಮ ಪೋಷಕಾಂಶಗಳ ಮೂಲಕ ಗಿಡಗಳ ನಿರ್ವಹಣೆ ಸೇರಿದಂತೆ ಹಲವು ನಿರ್ವಹಣಾ ಮಾರ್ಗೋಪಾಯಗಳ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ಇಂದಿನ ಈ ಕಾರ್ಯಕ್ರಮ ಅತ್ಯುತ್ತಮ ಎಂದರು.
ಮಲೆನಾಡಿನ ತೋಟಗಳಲ್ಲಿ ಅಡಿಕೆ ಕೊಯಿಲು, ಔಷಧ ಸಿಂಪಡಣೆಗೆ ಪೈಬರ್ ದೋಟಿ ಬಳಕೆ ಹೆಚ್ಚಾಗಿದ್ದು ಕರಾವಳಿ ತೋಟಗಳಲ್ಲಿಯು ಇದರ ಬಳಕೆ ಪ್ರಾರಂಭಗೊಂಡಿದೆ. 25 ಕಡೆಗಳಲ್ಲಿ ತರಬೇತಿ ನಡೆದಿದ್ದು ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದರು.
*ಕಾರ್ಯಕ್ರಮವನ್ನು ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿದ ಪ್ರಗತಿಪರ ಕೃಷಿಕ ನೀರ್ಕಜೆ ಸುಬ್ರಾಯ ಭಟ್,* ಅಡಿಕೆಗೆ ಬಾಧಿಸಿರುವ ಹಳದಿ ರೋಗದ ಬಗ್ಗೆ ಕೃಷಿಕರಿಗೆ ಮಾಹಿತಿ ನೀಡುವ ಪ್ರಯತ್ನ ಉತ್ತಮವಾದದು. ಜತೆಗೆ ಕಾರ್ಬನ್ ಪೈಬರ್ ದೋಟಿಯ ಬಗ್ಗೆ ತಿಳಿದುಕೊಳ್ಳಲು ಈ ಕಾರ್ಯಕ್ರಮ ಅವಕಾಶ ನೀಡಿದ್ದು ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಬೇಕು ಎಂದರು.
*ಪೈಬೆರ್ ದೋಟಿ ಕುರಿತಂತೆ ಸಾಯ ಎಂಟರ್ಪ್ರೈಸಸ್ ಮಾರುಕಟ್ಟೆ ಅಧಿಕಾರಿ ಪದ್ಮನಾಭ ಮಾಹಿತಿ ನೀಡಿ,* ಪೈಬರ್ ದೋಟಿ ಬಳಕೆ ಭವಿಷ್ಯದಲ್ಲಿ ಅನಿವಾರ್ಯ ಸಾಧನವಾಗಬಹುದು. ಕೃಷಿ ಕೂಲಿ ಕಾರ್ಮಿಕರ ಸಂಖ್ಯೆ ಇಳಿಮುಖವಾಗುತ್ತಿರುವ ಹೊತ್ತಿನಲ್ಲಿ ಆಧುನಿಕ ಸಲಕರಣೆಗಳನ್ನು ಬಳಸಿಕೊಂಡು ಕೃಷಿ ಕಾರ್ಯ ನಿರತವಾಗುವ ಅಗತ್ಯತೆ ಇದೆ. ಪೈಬರ್ ದೋಟಿ ಈ ನಿಟ್ಟಿನಲ್ಲಿ ಉತ್ತಮ ಅವಕಾಶ ಎಂದು ಅದರ ಬಳಕೆಯ ವಿಧಾನದ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.
*ಸಭಾಧ್ಯಕ್ಷತೆ ವಹಿಸಿದ ನೇಸರ ಯುವಕ ಮಂಡಲದ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ,* ನೇಸರ ಯುವಕ ಮಂಡಲ ಮತ್ತು ಗಣೇಶೋತ್ಸವ ಸಮಿತಿಯು ಜನರಿಗೆ ಅನುಕೂಲಕರ ಕಾರ್ಯಕ್ರಮ ಅನುಷ್ಠಾನಿಸುತ್ತಿದ್ದು ಇದಕ್ಕೆ ಈ ಊರಿನಲ್ಲಿ ನೀರ್ಕಜೆ ಸುಬ್ರಾಯ ಭಟ್ ಅವರಂತಹ ಹಲವಾರು ಮಂದಿ ಸದಾ ಬೆಂಬಲ ನೀಡುತ್ತಿದ್ದಾರೆ. ಹಾಗಾಗಿ ಹತ್ತಾರು ಕಾರ್ಯಕ್ರಮ ಆಯೋಜನೆ ಸಾಧ್ಯವಾಗಿದ್ದು ಇದರ ಯಶಸ್ಸು ಪ್ರತಿಯೊಬ್ಬರಿಗೂ ಸಲ್ಲುತ್ತದೆ ಎಂದರು.
*ಪ್ರಗತಿಪರ ಕೃಷಿಕ ಮೋಹನ ಬೈಪಡಿತ್ತಾಯ ಮಾತನಾಡಿ,* ಆರು ತಿಂಗಳ ಕಾಲ ಕೃಷಿ ತೋಟವನ್ನು ಚೆನ್ನಾಗಿ ನಿರ್ವಹಿಸಿದರೆ ಮುಂದಿನ ಆರು ತಿಂಗಳ ಕಾಲ ಸುಖವಾಗಿ ಬಾಳಲು ಸಾಧ್ಯವಿದೆ. ಕೃಷಿ ವ್ಯವಸ್ಥೆಯಲ್ಲಿ ನಾವು ಒಂದಷ್ಟು ಎಡವಿದ ಕಾರಣ ಇಂದು ಸಮಸ್ಯೆ ಎದುರಾಗಿದ್ದು ಯುವ ಪೀಳಿಗೆಯನ್ನು ಕೃಷಿ ಆಸಕ್ತರನ್ನಾಗಿ ರೂಪಿಸುವ ಜವಬ್ದಾರಿ ನಮ್ಮೆಲ್ಲರದ್ದಾಗಿ ಎಂದರು.
*ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಮಾತನಾಡಿ,* ಸಮಾಜಕ್ಕೆ ಅನುಕೂಲ ಆಗುವ ಕಾರ್ಯಕ್ರಮ ಆಯೋಜನೆಗೆ ಈ ಊರಿನ ಜನರು ಪೂರ್ಣವಾಗಿ ಬೆಂಬಲ ನೀಡುತ್ತಾರೆ. ಇಂದಿನ ಕೃಷಿ ಪರ ಕಾರ್ಯ ಶ್ಲಾಘನೀಯ ಎಂದರು. *ಈ ಸಂಧರ್ಭದಲ್ಲಿ ಪ್ರಗತಿಪರ ಕೃಷಿಕ ಸುಬ್ರಾಯ ಭಟ್ ನೀರ್ಕಜೆ ಅವರನ್ನು ಗೌರವಿಸಲಾಯಿತು.*
ವೇದಿಕೆಯಲ್ಲಿ ಪ್ರಗತಿಪರ ಕೃಷಿಕರಾದ ಕೇಶವಮೂರ್ತಿ ಕಾವಿನಮೂಲೆ, ಗೋಪಾಲಕೃಷ್ಣ ಭಟ್ ಮನವಳಿಕೆ, ಮುಕ್ಕೂರು-ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಜಯಂತ ಕುಂಡಡ್ಕ, ವೀಣಾ ಸರಸ್ವತಿ ನೀರ್ಕಜೆ, ಶ್ಯಾಮ್ ಕಿಶೋರ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪ್ರೇಕ್ಷಿತಾ ಪ್ರಾರ್ಥಿಸಿದರು. ಶಶಿಕುಮಾರ್ ಬಿ.ಎನ್. ಅಭಿನಂದನಾ ನುಡಿಗಳನ್ನಾಡಿದರು. ಕೆನರಾ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಸಿಂಧೂ ಎನ್.ಎಸ್. ನಿರೂಪಿಸಿದರು.
*ಕಾರ್ಬನ್ ಪೈಬರ್*
*ದೋಟಿ ಪ್ರಾತ್ಯಕ್ಷಿಕೆ*
ಮಾಹಿತಿ ಕಾರ್ಯಕ್ರಮದ ಬಳಿಕ ಅಡಿಕೆ ತೋಟದಲ್ಲಿ ಪೈಬರ್ ದೋಟಿ ಬಳಕೆ ವಿಧಾನದ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಿತು. ಕೃಷಿಕರು ಹಾಗೂ ಮುಕ್ಕೂರು ಚಿಣ್ಣರ ಸಂಭ್ರಮದ ಬೇಸಗೆ ಶಿಬಿರಾರ್ಥಿಗಳು ಭಾಗವಹಿಸಿ ಮಾಹಿತಿ ಪಡೆದುಕೊಂಡರು. ಕಾರ್ಯಾಗಾರದಲ್ಲಿ ಯುವಕ ಮಂಡಲದ ಪೂವಪ್ಪ ನಾಯ್ಕ ಕೊಂಡೆಪ್ಪಾಡಿ, ರವಿ ಕುಂಡಡ್ಕ, ರಕ್ಷಿತ್ ಗೌಡ ಕಾನಾವು, ವೆಂಕಟರಮಣ, ರಾಮಚಂದ್ರ ಚೆನ್ನಾವರ ಮೊದಲಾದವರು ಸಹಕರಿಸಿದರು.