ಸಹೋದರರಿಬ್ಬರ ಕಾಲು ಮುರಿತ ಮಂಗಳೂರಿನ ಆಸ್ಪತ್ರೆಗೆ ದಾಖಲು
ಲಾರಿ ಹಾಗೂ ಕಾರಿನ ಮಧ್ಯೆ ಮುಖಾಮುಖಿ ಢಿಕ್ಕಿ ಸಂಭವಿಸಿ, ಕಾರಿನಲ್ಲಿದ್ದ ಸಹೋದರರಿಬ್ಬರ ಕಾಲು ಮುರಿತಕ್ಕೊಳಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಎ.17ರಂದು ರಾತ್ರಿ ಸಂಭವಿಸಿದೆ.
ಜಾಲ್ಸೂರು ಗ್ರಾಮದ ಕುಂದ್ರುಕೋಡಿ ನಾರಾಯಣ ನಾಯ್ಕರ ಪುತ್ರ ಕಿರಣ ಅವರ ಕಾರಿನಲ್ಲಿ ಬಾಳಾಜೆಯ ಸುಂದರ ಗೌಡರ ಪುತ್ರರಾದ ದೀಪಕ್ ಹಾಗೂ ದೀಕ್ಷಿತ್ ಅವರು ಪುತ್ತೂರಿಗೆ ತೆರಳುತ್ತಿದ್ದ ವೇಳೆ ರಾತ್ರಿ 11.30ರ ವೇಳೆಗೆ ಮುಂಭಾಗದಿಂದ ಬಂದ ಲಾರಿ ಕಾರಿಗೆ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಪರಿಣಾಮ ಕಾರು ಚಲಾಯಿಸುತ್ತಿದ್ದ ದೀಪಕ್, ಹಾಗೂ ಚಾಲಕನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಅವರ ಸಹೋದರ ದೀಕ್ಷಿತ್ ಅವರ ಬಲಕಾಲು ತೀವ್ರ ಜಖಂಗೊಂಡಿತೆನ್ನಲಾಗಿದೆ. ಕಾರಿನಲ್ಲಿದ್ದ ಕಿರಣ ಹಾಗೂ ಇನ್ನಿಬ್ಬರಿಗೂ ಅಲ್ಪಸ್ವಲ್ಪ ಗಾಯಗಳಾಗಿದ್ದು, ಎಲ್ಲರನ್ನೂ ಸುಣ್ಣಮೂಲೆಯ ಹಸನ್ , ಜುನೈದ್ , ಅಶ್ರಫ್ ಮತ್ತಿತರ ಯುವಕರು ಸೇರಿ ಸುಳ್ಯದ ಸರಕಾರಿ ಆಸ್ಪತ್ರೆ ಹಾಗೂ ಕೆವಿಜಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿದರು.
ಕಾಲಿಗೆ ಗಂಭೀರ ಗಾಯಗೊಂಡಿದ್ದ ಚಾಲಕ ದೀಪಕ್ ಹಾಗೂ ಅವರ ಸಹೋದರ ದೀಕ್ಷಿತ್ ಅವರ ಬಲಕಾಲು ಮುರಿತಕ್ಕೊಳಗಾಗಿದ್ದರಿಂದ ಅವರಿಬ್ಬರನ್ನು ಅಂಬ್ಯುಲೆನ್ಸ್ ಮೂಲಕ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.