ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್ ಸುಳ್ಯ ತಾಲೂಕು ಭೇಟಿ ಕಾರ್ಯಕ್ರಮ ಎ.29 ರಂದು ನಡೆಯಿತು.
ಈ ಸಂದರ್ಭ ತಾಲೂಕಿನ ವಿವಿಧ ಗಣ್ಯರನ್ನು ಹಾಗೂ ಪಕ್ಷದ ಕಾರ್ಯಕರ್ತರನ್ನು ಭೇಟಿಯಾದರು.
ಈ ಸಂದರ್ಭ ಆದರ್ಶ ಗ್ರಾಮ ಬಳ್ಪಕ್ಕೆ ಭೇಟಿಯಾಗಿ ಬೋಗಾಯನಕೆರೆ ಅಭಿವೃದ್ಧಿ ಕಾಮಗಾರಿ ವೀಕ್ಷಣೆ ಮಾಡಿದರು. ಬಳಿಕ ಮಾತನಾಡಿದ ಸಂತೋಷ್ ಕಾಮತ್ ಅವರು ಬಳ್ಪವು ಆದರ್ಶ ಗ್ರಾಮದಲ್ಲಿ ನಂಬರ್ ವನ್ ಎಂದು ಗುರುತಿಸಿಕೊಂಡಿದೆ. ಇಲ್ಲಿನ ಇತಿಹಾಸ ಪ್ರಸಿದ್ಧ ಬೋಗಾಯನಕೆರೆ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಉತ್ತಮ ಯೋಜನೆ, ಆದರೆ ಇಲ್ಲಿನ ಕಾಮಗಾರಿ ಬಗ್ಗೆ ಅಸಮಾಧಾನವಿದೆ. ಅವೈಜ್ಞಾನಿಕವಾಗಿ ನಡೆಸಲಾಗುತ್ತಿದೆ. ಆದರ್ಶ ಗ್ರಾಮದ ಕೆಲಸಗಳು ಅಚ್ಚುಕಟ್ಟಾಗಿ ನಡೆಯಬೇಕಿತ್ತು. ಕಾಮಗಾರಿ ನಡೆಸುವಾಗ ಜನರ ತೆರಿಗೆ ಹಣ ದುಂದುವೆಚ್ಚ ಆಗಿರುವುದು ಕಂಡುಬರುತ್ತದೆ. ಪ್ಲಾನಿಂಗ್ ಇಲ್ಲದೆ ವಿನಿಯೋಗವಾಗುತ್ತಿದೆ. ಕಾಮಗಾರಿ ನಡೆದ ಕೆಲವು ಕಡೆ ಮತ್ತೆ ಕುಸಿತವಾಗಿದೆ. ಅವಶ್ಯಕತೆ ಇಲ್ಲದೆಯೇ ಖರ್ಚಾಗುತ್ತಿದೆಯೇ ಎಂದು ಭಾಸವಾಗುತ್ತಿದೆ. ಕಾಮಗಾರಿ ಗಮನಿಸಿದರೆ ಅಂಗಾರೆ ಮಲ್ತಿನ ಬೇಲೆ ಶುಕ್ರವಾರ ಮುಟ್ಟ (ಮಂಗಳವಾರ ಮಾಡಿದ ಕೆಲಸ ಶುಕ್ರವಾರದ ವರೆಗೆ) ಎಂಬ ಗಾದೆ ಮಾತಿನಂತೆ ಕೆಲಸ ಸಾಗಿದೆ ಎಂದರು. ಜಿಲ್ಲೆಯ ಹಲವು ಕಡೆ ಇಂತಹ ಕೆಲಸ ಇದೆ. ಸರ್ಕಾದ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಜನರು ಮಾತನಾಡುವ ಸ್ಥಿತಿಯಲ್ಲಿಲ್ಲ. ಭ್ರಷ್ಟಾಚಾರದ ಕಾಮಗಾರಿ ಎಎಪಿ ಸಹಿಸುವುದಿಲ್ಲ. ಜನರ ಜೊತೆ ನಿಂತು ಹೋರಾಟ ನಡೆಸಲಿದೆ ಎಂದು ಹೇಳಿದರು. ಬೋಗಾಯನಕೆರೆ ಸಹಿತ ದೊಡ್ಡ ಪ್ರಮಾಣದ ಕಾಮಗಾರಿಗಳು ನಡೆಯುವ ವೇಳೆ ಮಾಹಿತಿ ಫಲಕ ಅಳವಡಿಕೆ ಮಾಡಬೇಕು. ಬೋಗಾಯನಕೆರೆಯಲ್ಲೂ ಈ ಫಲಕ ಅಳವಡಿಕೆ ಮಾಡಬೇಕು ಎಂದು ಈ ಸಂದರ್ಭ ಒತ್ತಾಯಿಸಿದರು.
ಸುಳ್ಯ ತಾಲೂಕಿನಲ್ಲಿ ಪಕ್ಷ ಸಂಘಟನೆ ಹಾಗೂ ಜನರ ಜೊತೆ, ಸಮಾಜದ ಗಣ್ಯರ ಜೊತೆ ಮಾತುಕತೆ ನಡೆಸಿ ಪಕ್ಷ ಬೆಳೆಯಬೇಕಾದ ಹೆಜ್ಜೆಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡುತ್ತಿದ್ದೇವೆ. ದೇಶದ ಬಗ್ಗೆ ಕಾಳಜಿಯನ್ನು ಹೊಂದಿ ಕೆಲಸ ಮಾಡಲಾಗುತ್ತಿದೆ. ಗ್ರಾಮೀಣ ಭಾಗಗಳೂ ಬೆಳೆಯಬೇಕು, ಅಭಿವೃದ್ಧಿ ಹೊಂದಬೇಕು. ಜನರ ತೆರಿಗೆ ಹಣ ಸರಿಯಾಗಿ ವಿನಿಯೋಗವಾಗಬೇಕು. ಯಾರದೋ ಖಾಸಗಿ ಸ್ಥಳಗಳಿಗೆ, ಅನಗತ್ಯವಾಗಿರುವ ಕಡೆ ಬಳಕೆಯಾಗಬಾರದು ಎಂಬುದು ನಮ್ಮ ಗುರಿಯಾಗಿದೆ ಎಂದು ಸಂತೋಷ್ ಕಾಮತ್ ತಿಳಿಸಿದರು.
ಇದೇ ಸಂದರ್ಭ ಈಚೆಗೆ ಪಕ್ಷ ಸೇರ್ಪಡೆಯಾದ ಪ್ರಸನ್ನ ಎಣ್ಮೂರು ಅವರ ಮನೆಗೆ ಭೇಟಿ ನೀಡಿದರು. ವಿವಿಧ ಗಣ್ಯರನ್ನು ಭೇಟಿ ಮಾಡಿದರು. ಸುಳ್ಯದಲ್ಲಿ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದರು.
ಈ ಸಂದರ್ಭ ಎಎಪಿ ಉಡುಪಿ-ದಕ ಜಿಲ್ಲಾ ವೀಕ್ಷಕ ಅಶೋಕ್ ಎಡಮಲೆ, ಜಿಲ್ಲಾ ಮುಖಂಡರುಗಳಾದ ಅರವಿಂದ್ ಡಿಸೋಜಾ, ಜೆ ಪಿ ರಾವ್ , ವೇಣುಗೋಪಾಲ್, ಪ್ರಸನ್ನ ಭಟ್ ಎಣ್ಮೂರು ಹಾಗೂ ಎಎಪಿ ತಾಲೂಕು ಕಾರ್ಯದರ್ಶಿ ಗಣೇಶ್ ಪ್ರಸಾದ್ ಕಂದಡ್ಕ, ಪ್ರಮುಖರಾದ ಚೇತನ್ ದೇವಸ್ಯ, ಕಡಬ, ಮೋಹನ್ ದಾಸ ಎಣ್ಣೆಮಜಲು, ಕರುಣಾಕರ ಎಣ್ಣೆಮಜಲು ಉಪಸ್ಥಿತರಿದ್ದರು.