ಹಳೇ ಸ್ನೇಹಿತರೊಂದಿಗೆ ಹೊಸ ಸ್ನೇಹಿತರನ್ನು ಪಡೆದುಕೊಂಡು ನಮ್ಮ ನೋವು-ನಲಿವುಗಳನ್ನು ಹಂಚಿಕೊಳ್ಳಲು ಹೊಸ ವೇದಿಕೆಯೊಂದು ಸುಳ್ಯದ ಪರಿಸರದಲ್ಲಿ ಆರಂಭವಾಗಿದ್ದು, ಇದಕ್ಕೆ ಸಮಾನವಯಸ್ಕರು ಸೇರಿ ಈಗಾಗಲೇ “ಸ್ನೇಹ ಸಂಗಮ” ಹೆಸರಿನ ವಾಟ್ಸಪ್ ಗ್ರೂಪ್ ರಚಿಸಿಕೊಂಡಿದ್ದು, ಸ್ನೇಹಿತರ ಸಮಾಗಮಕ್ಕೆ ಮಾಡಿಕೊಂಡಿದ್ದಾರೆ. ಜತೆಗೆ ಮೇ 15 ರಂದು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಅಪರಾಹ್ನ 2 ರಿಂದ 5 ರ ವರೆಗೆ ಸ್ನೇಹ ಸಂಗಮ ಹೆಸರಿನ ಕಾರ್ಯಕ್ರಮ ವಿನೂತನ ರೀತಿಯಲ್ಲಿ ನಡೆಯಲಿದೆ ಎಂದು
ಸ್ನೇಹ ಸಂಗಮ ಕಾರ್ಯಕ್ರಮದ ಆಯೋಜಕ, ಉದ್ಯಮಿ ಆರ್. ಕೆ. ಭಟ್ ಸುಳ್ಯರವರು ತಿಳಿಸಿದರು.
ಅವರು ಮೇ.೫ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ತಮ್ಮ ಯೋಜನೆಯ ಕುರಿತು ಮಾಹಿತಿ ನೀಡಿದರು.
ವಿಜ್ಞಾನ- ತಂತ್ರಜ್ಞಾನ ಜಗತ್ತನ್ನು ಕಿರಿದಾಗಿಸಿದ್ದು ಹೌದಾದರೂ ಹತ್ತಿರ ತಂದಿಲ್ಲ. ಮಗ ಅಮೇರಿಕಾದಿಂದ ದಿನಾಲೂ ಫೋನ್ ಮಾಡಬಹುದು. ಆದರೆ ವರ್ಷಾನುಗಟ್ಟಲೆ ಬಾರದೆ ನೋಡಲು ಸಿಗದಿದ್ದರೆ ಮಾತಿನ ಸುಖಕ್ಕೆ ಮಿತಿ ಇರುತ್ತದೆ. ಹಾಗೆಯೇ ಗೆಳೆಯರ ಮಧ್ಯೆ ಕೂಡಾ. ಹತ್ತಿರ ಕುಳಿತು ಮಾಡುವ ಮುಕ್ತ ಮಾತುಕತೆಯ ಸುಖವೆಂಬುದು ಬೇರೆಯೇ, ಅದಕ್ಕಾಗಿ ಒಂದು ವೇದಿಕೆಯ ಅಗತ್ಯವಿದೆ. ಮಾತಿಗಾಗಿಯೇ ಸಮಯ ಮೀಸಲಿಟ್ಟುಕೊಂಡು ಬಂದರೆ ಇಲ್ಲಿ ಸಿಗುವ ಸಂತೋಷಕ್ಕೆ ಪಾರವಿರದು.
ಸುಖ ಸಂತೋಷಗಳನ್ನು ಹಂಚಿಕೊಳ್ಳುವ ಅವಕಾಶ ಬಂದಾಗ ಗೆಳೆಯರು ನೆನಪಾಗುತ್ತಾರೆ. ಕಷ್ಟ, ದುಃಖ ದ ಸಂದರ್ಭ ಬಂದಾಗ ಗೆಳೆಯರು ನೆನಪಾಗುತ್ತಾರೆ. ಆದರೆ ನಮ್ಮ ಸುಖ ದುಃಖಗಳನ್ನು ಸಮನಾಗಿ ಸ್ವೀಕರಿಸುವ ಸ್ನೇಹಿತರು ಆಪ್ತರಾಗುತ್ತಾರೆ.ಹಲವೊಮ್ಮೆ ಕಳೆದುಹೋದ ದಿನಗಳ ಸ್ನೇಹಿತರು ನೆನಪಾಗುತ್ತಾರೆ, ಆದರೆ ಅವರನ್ನು ಸಂಪರ್ಕಿಸುವ ಕೊಂಡಿಗಳಿರುವುದಿಲ್ಲ. ಸದಾ ಫೇಸ್ಟುಕ್, ವಾಟ್ಸಾಪ್ ಗಳಲ್ಲಿ ಸಂಪರ್ಕದಲ್ಲಿರುವವರನ್ನು ಮುಖತಾ ಭೇಟಿಯಾಗಬೇಕೆಂದು ಅನಿಸುತ್ತದೆ. ಹರಟೆ ಹೊಡೆಯುವ ಆಸಕ್ತಿ ಹುಟ್ಟಿದರೆ ಅದಕ್ಕೊಂದು ಸಂದರ್ಭ, ಸನ್ನಿವೇಶ ಬೇಕಲ್ಲವೇ ? ಹಾಗಾಗಿ ಸ್ನೇಹ ಸಂಗಮ ಕಾರ್ಯಕ್ರಮ ಆಯೋಜಿಸಿದ್ದೇವೆ. ಸ್ನೇಹ ಸಂಗಮ ಒಂದು ಕಾಸ್ಟ ಲೆಸ್, ಕ್ಲಾಸ್ ಲೆಸ್, ಕ್ಯಾಶ್ ಲೆಸ್ ಸೊಸೈಟಿ.ಇಲ್ಲಿ ಸದಸ್ಯ ಶುಲ್ಕವಿಲ್ಲ. ಇಲ್ಲಿ ಬಡವ – ಶ್ರೀಮಂತ, ಜಾತಿ, ಮತ, ಲಿಂಗ, ವಯಸ್ಸು, ಧರ್ಮಗಳ ಗೋಜಲುಗಳಿಲ್ಲ. ನಿತ್ಯದ ಜಂಜಾಟದಿಂದ ಹೊರಬರಲು ಸ್ನೇಹಿತರ ಭೇಟಿ ಅಥವಾ ಅವರೊಂದಿಗೆ ಮಾತುಕತೆ ಕೂಡ ಸಹಾಯ ಮಾಡುತ್ತದೆ. ಹಳೇ ಸ್ನೇಹಿತರೊಂದಿಗೆ ಹೊಸ ಸ್ನೇಹಿತರನ್ನು ನೋಡಿಕೊಂಡರೆ ಜೀವನ ನಿತ್ಯ ನೂತನ ಆಗಬಹುದು. ಸಮಾನ ಮನಸ್ಕರನ್ನು ಗುರುತಿಸಲು ” ಸ್ನೇಹ ಸಂಗಮ” ಅನುವು ಮಾಡಿಕೊಡುತ್ತದೆ. ಇದೇ ಮೇ ೧೫ ರಂದು ಭಾನುವಾರ ಅಪರಾಹ್ನ ೨ ರಿಂದ ೫ ರ ವರೆಗೆ ಪ್ರಾಯೋಗಿಕವಾಗಿ ಸುಳ್ಯದ ಸ್ನೇಹ ಶಾಲೆಯ ವಠಾರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದೀರ್ಘ ಭಾಷಣಗಳಿಲ್ಲದ ಸರಳ ಸಮಾರಂಭದಲ್ಲಿ ಪರಸ್ಪರ ಪರಿಚಯ ಮಾತುಕತೆಗಳೇ ಪ್ರಧಾನ. ಗುಂಪು ಗುಂಪಾಗಿ ಮಾತನಾಡಿಕೊಳ್ಳಲಂತೂ ಸುಳ್ಯದ ಸ್ನೇಹ ಶಾಲೆಯ ವಠಾರ ಹೇಳಿ ಮಾಡಿಸಿದಂತಿದೆ.ಪ್ರತೀ ತಿಂಗಳ ಮೊದಲ ಭಾನುವಾರ ಅಥವಾ ವರ್ಷಕ್ಕೆರಡು ಬಾರಿ ನಿಗದಿತವಾಗಿ ಬೇರೆ ಬೇರೆ ಊರುಗಳಲ್ಲಿ ಈ ಮಾದರಿಯ ಸ್ನೇಹ ಕೂಟಗಳನ್ನು ಆಸಕ್ತರು ಸಂಯೋಜಿಸಬಹುದು ಎಂದು ಮಾಹಿತಿ ಹಂಚಿಕೊಂಡರು.
ಸ್ನೇಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಚಂದ್ರಶೇಖರ್ ದಾಮ್ಲೆ ಮಾತನಾಡಿ, ಹತ್ತಿರ ಕುಳಿತು ಮಾತನಾಡಿದ ಆನಂದ, ಫೋನಿನಲ್ಲಿ ಸಿಗುವುದಿಲ್ಲ. ಇಬ್ಬರು ಮಿತ್ರರು ಪರಸ್ಪರ ಮಾತನಾಡಿಕೊಂಡರೆ, ಅದೇ ಬದುಕಿನ ಸಂಪತ್ತು. ಇಲ್ಲಿ ಯಾರು, ಯಾರಿಗೂ ಗೆಳೆಯರಾಗಬಹುದು ಎಂದರು.
ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ ಪಾಲ್ಗೊಂಡು, ಸಮಾಜದ ಆಗು-ಹೋಗುಗಳಲ್ಲಿ ಭಾಗವಹಿಸುವುದು, ಈಗಿನ ಕಾಲಕ್ಕೆ ಒಳ್ಳೆಯ ಔಷಧಿ. ಇಲ್ಲಿ ಏನು ಅಜೆಂಡಗಳಿಲ್ಲ. ಸುಮ್ಮನೆ ಕೂತು ಮನ ಬಿಚ್ಚಿ ಮಾತನಾಡುವುದರಿದ ಹೊಸ ಅನುಭವ ಸಿಗಲಿದೆ ಎಂದು ಹೇಳಿದರು.
ಉಪನ್ಯಾಸಕ ಸಂಜೀವ ಕುದ್ಪಾಜೆ ಮಾತನಾಡಿ, ವಯಸ್ಸಾದ ಮೇಲೆ ನೋವುಗಳೇ ಸ್ನೇಹಿತರು. ಆತ್ಮೀಯರಲ್ಲಿ ಹರಟೆ ಹೊಡೆಯುವುದರಿಂದ ಮಾನಸಿಕವಾಗಿ ಒತ್ತಡ ಕಡಿಮೆಯಾಗುತ್ತದೆ. ಹಾಗಾಗಿ’ ಸ್ನೇಹ ಸಂಗಮ ‘ ಸುಳ್ಯ ಪರಿಸರದಲ್ಲಿ ಯಶಸ್ವಿಯಾಗಲು ಎಲ್ಲರ ಸಹಕಾರಬೇಕೆಂದು ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ರವಿ ಉಪಸ್ಥಿತರಿದ್ದರು.