ಯಾವುದೇ ಕಮೀಷನ್ ವ್ಯವಹಾರ ನಡೆಯುತ್ತಿಲ್ಲ: ಮೋಹನ್ ರಾಮ್ ಸುಳ್ಳಿ
ಕಾಲೇಜುಗಳ ಸಂಚಾಲಕ ಹುದ್ದೆ ಗಿಟ್ಟಿಸಲು ಕಾರ್ಯನಿರ್ವಹಣಾಧಿಕಾರಿ ತಂತ್ರ: ಆರೋಪ
ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಬಗ್ಗೆ ,ಆಡಳಿತ ಮಂಡಳಿ ಮತ್ತು ನಮ್ಮ ಶಿಕ್ಷಣ ಸಂಸ್ಥೆಗಳ ಬಗ್ಗೆ ಕೆಟ್ಟ ಭಾವನೆಗಳಿಂದ ಸುದ್ದಿ ಹರಡಿಸುತ್ತಿರುವುದನ್ನು ತೀವ್ರವಾಗಿ ಖಂಡಿಸುತ್ತಿರುವುದಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಮ್ ಸುಳ್ಳಿ ಹೇಳಿದ್ದಾರೆ.
ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅಧ್ಯಕ್ಷರು, ಕೆಲವು ಅನಾಮಧೇಯ ವ್ಯಕ್ತಿಗಳು , ಕ್ಷುದ್ರ ಶಕ್ತಿಗಳು ಇಂತಹ ಹೇಡಿತನದ ಕೆಲಸ ಮಾಡುತ್ತಿರುವುದು ಖಂಡನೀಯ . ಈ ರೀತಿ ಮಾಡುವುದರಿಂದ ಕ್ಷೇತ್ರಕ್ಕೆ ನಿರ್ಮಲ ಮನಸ್ಸಿನಿಂದ ಬರುವ ಭಕ್ತಾದಿಗಳಿಗೆ ದಾರಿ ತಪ್ಪಿಸುವ ಕೆಲಸ ಮಾಡುತಿದ್ದಾರೆ ಎಂದರು.
ದೇವಳದಲ್ಲಿ ಮಾಸ್ಟರ್ ಪ್ಲಾನ್ನ ಮಾದರಿಯಲ್ಲಿಯೇ ಕೆಲಸ ಕಾರ್ಯಗಳು ನಡೆಯುತ್ತಿವೆ . ದೇವಳಕ್ಕೆ ಬರುವ ಭಕ್ತಾದಿಗಳಿಗಾಗಿ ಭೋಜನಶಾಲೆ , ಆಶ್ಲೇಷ ಮಂಟಪ , ರಥಬೀದಿಯಲ್ಲಿ ಪಾರಂಪರಿಕ ಕಟ್ಟಡ , ಸ್ನಾನ ಘಟ್ಟ ಹಾಗೂ ಗೋಶಾಲೆಗಳನ್ನು ನಿರ್ಮಿಸುವ ಪ್ರಯತ್ನದಲ್ಲಿರುವಾಗ ಕೆಲವೊಬ್ಬರು ಅನಾವಶ್ಯಕವಾಗಿ ಮೇಲಾಧಿಕಾರಿಗಳಿಗೆ ಕಮಿಷನ್ ವ್ಯವಹಾರ ನಡೆಯುತ್ತಿದೆ ಎಂದು ಹೇಳಿ ದಾರಿ ತಪ್ಪಿಸುವ ಕೆಲಸವು ನಡೆಯುತ್ತಿದೆ . ಆದರೆ ಈ ಎಲ್ಲಾ ಕಾಮಗಾರಿಗಳು ಪಿಡಬ್ಲೂಡಿಯ ಉಸ್ತುವಾರಿಯ ಮೂಲಕ ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದೆ ಎಂದರು.
ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದು , ಅವರ ವಸತಿಗಾಗಿ ಸಾಕಷ್ಟು ವಸತಿ ಗೃಹಗಳನ್ನು ನಿರ್ಮಿಸಿದೆ . ಅಧಿಕವಾಗಿ ಬರುವ ಭಕ್ತಾದಿಗಳಿಗೆ ಆದಿ ಸುಬ್ರಹ್ಮಣ್ಯದ ಕಲ್ಯಾಣ ಮಂಟಪ ಹಾಗೂ ಭೋಜನ ಶಾಲೆಗಳಲ್ಲಿ ಮಧ್ಯ ರಾತ್ರಿಯವರೆಗೆ ವ್ಯವಸ್ಥೆಯನ್ನು ಮಾಡಲು ನಿರಂತರವಾಗಿ ದೇವಳದ ನೌಕರರು , ಸೆಕ್ಯೂರಿಟಿಯವರು , ವ್ಯವಸ್ಥಾಪನಾ ಸಮಿತಿಯವರು ಹಾಗೂ ಮಾಸ್ಟರ್ ಪ್ಲಾನ್ನ ಸದಸ್ಯರು ಶ್ರಮಿಸುತ್ತಿದ್ದರೂ ಕೆಲ ಭಕ್ತಾದಿಗಳು ರಥಬೀದಿಯಲ್ಲಿ ಮಲಗಿರುವುದು ನಮ್ಮ ಗಮನಕ್ಕೆ ಬಂದಿದೆ . ಮುಂದಿನ ದಿನಗಳಲ್ಲಿ ಅಂತಹ ಭಕ್ತಾದಿಗಳಿಗೂ ಕೂಡ ವಸತಿ ವ್ಯವಸ್ಥೆಯನ್ನು ಮಾಡಿಕೊಡಲು ಪ್ರಯತ್ನಿಸಲಾಗುವುದು ಎಂದರು.
ಕೆ ಎಸ್ ಎಸ್ ಕಾಲೇಜಿನ ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ ಅವರು, 1983 ರಲ್ಲಿ ಪ್ರಾರಂಭಗೊಂಡ ಪದವಿ ಕಾಲೇಜು ಅನುದಾನಿತ ಕಾಲೇಜಾಗಿದೆ . 1983 ರ ನಂತರ ಕಾರ್ಯನಿರ್ವಹಿಸುತ್ತಿದ್ದಂತಹ ಬಹುತೇಕ ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿಗಳು ಅನುದಾನಕ್ಕೆ ಒಳಪಟ್ಟಿದ್ದರು . ಆದರೆ ಕಳೆದ 5 ವರ್ಷಗಳಲ್ಲಿ 95 % ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿಗಳು ನಿವೃತ್ತಿಯನ್ನು ಹೊಂದಿದ್ದಾರೆ . 2023-24ನೇ ಸಾಲಿನಲ್ಲಿ ಸಂಸ್ಥೆಯು ಯುಜಿಸಿಯ ನ್ಯಾಕ್ ಸಮಿತಿಯನ್ನು ಎದುರಿಸಬೇಕಾಗಿದೆ . ಈ ಸಮಯದಲ್ಲಿ ಕನಿಷ್ಠ ಪಕ್ಷ ‘ ಬಿ ‘ ಗ್ರೇಡನ್ನು ಪಡೆಯಲೇ ಬೇಕು ಇಲ್ಲದೇ ಇದ್ದಲ್ಲಿ ಯುಜಿಸಿ ಹಾಗೂ ಸರ್ಕಾರದಿಂದ ಬರುವ ಎಲ್ಲಾ ಅನುದಾನಗಳು ಸ್ಥಗಿತಗೊಳ್ಳುತ್ತವೆ . ಆದ್ದರಿಂದ ಯುಜಿಸಿಯ ನಿಯಮಾವಳಿಯ ಪ್ರಕಾರ ವಿದ್ಯಾರ್ಹತೆಯನ್ನು ಹೊಂದಿರುವಂತಹ ಪದವೀಧರರನ್ನು ಆಯ್ಕೆ ಮಾಡುವುದು ಕಡ್ಡಾಯವಾಗಿರುತ್ತದೆ . ಅದೇ ರೀತಿ ನಮ್ಮ ಆಡಳಿತ ಮಂಡಳಿಯು ಬಂದ ನಂತರ ವಿದ್ಯಾರ್ಹತೆ ಹಾಗೂ ಮೀಸಲಾತಿಯನ್ನು ಕೂಡ ಪರಿಗಣಿಸಿ ನೇಮಕ ಮಾಡಿದೆ. ಪಿಹೆಚ್ಡಿ ಪದವೀಧರರು, ಪಿಹೆಚ್ಡಿ ಪದವೀಧರರಾಗಿದ್ದು 10 ವರ್ಷಗಳ ಅನುಭವವನ್ನು ಹೊಂದಿರುವವರನ್ನು ಉಪನ್ಯಾಸಕರನ್ನು ನೇಮಿಸಲಾಗಿದೆ.
ಈ ಹಿಂದೆ ನೇಮಕವಾದ ಉಪನ್ಯಾಸಕರಿಗೆ ವಿವಿಧ ವೇತನ ಶ್ರೇಣಿಯನ್ವಯ ವೇತನವನ್ನು ನೀಡಲಾಗುತ್ತಿದೆ . ಅಲ್ಲದೇ ಅವರಿಗೆ ಪ್ರತೀ ವರ್ಷದಲ್ಲಿ 7 % ರಂತೆ ಏರಿಸಿ ವೇತನವನ್ನು ನೀಡಲಾಗುತ್ತಿದೆ . ಇದನ್ನು ಸರಿಪಡಿಸುವ ನಿಟ್ಟಿನಲ್ಲಿ 2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಹತೆ ಹಾಗೂ ಅನುಭವದ ಆಧಾರದಲ್ಲಿ ವೇತನ ತಾರತಮ್ಯವನ್ನು ಸರಿಪಡಿಸಲು ಚಿಂತಿಸಲಾಗುತ್ತಿದೆ . ಅದನ್ನು ಕಾಲೇಜಿನ ಸಂಪನ್ಮೂಲವನ್ನು ನೋಡಿಕೊಂಡು ಉಳಿದ ಹಣವನ್ನು ದೇವಳದ ವತಿಯಿಂದ ನೀಡಲು ಈಗಾಗಲೇ ತೀರ್ಮಾನಿಸಿ ನಿರ್ಣಯವನ್ನು ಮಾಡಲಾಗಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ತಿಳಿಸಿದರು .
ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ ಆಶ್ಲೇಷ ಪೂಜೆ ಸಂಬಂಧಿಸಿ ವಿಶೇಷ ದಿನಗಳಲ್ಲಿ ಹೆಚ್ಚಿನ ಆಶ್ಲೇಷ ಪೂಜೆ ನಡೆಸುವ ಸಲುವಾಗಿ ಅರ್ಚಕರಲ್ಲಿ ಮಾತನಾಡಿ ಬೇರೆ ವ್ಯವಸ್ಥೆ ಮಾಡಿ ಸಮಸ್ಯೆ ಬಗೆ ಹರಿಸಲಾಗುವುದು ಎಂದರು. ಮೈಸೂರು ಮತ್ತು ಬೆಂಗಳೂರಿನಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕಾದಿರಿಸಲಾದ ಜಾಗ ಬಗ್ಗೆ ಕೇಳಿದಾಗ ಕಾರ್ಯನಿರ್ವಹಣಾಧಿಕಾರಿಗಳೇ ಇದ್ದು ಮಾಡಿರುವಂತದ್ದು . ಈ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ಇಲ್ಲ ಕಾರ್ಯನಿರ್ವಹಣಾಧಿಕಾರಿ ಅವರಲ್ಲಿ ಹೆಚ್ಚಿನ ಮಾಹಿತಿ ಇರಬಹುದೆಂದರು. ಕಾರ್ಯನಿರ್ವಹಣಾಧಿಕಾರಿ ಸಣ್ಣಪುಟ್ಟ ತಪ್ಪು ಮಾಹಿತಿ ನೀಡಿ ಅಭಿವೃದ್ಧಿ ಕೆಲಸ ಕಾರ್ಯ ವಿಳಂಬ ಆಗುತ್ತಿರುವುದಾಗಿ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. ಕಾಲೇಜಿನ ನೇಮಕಾತಿಗೆ ಸಂಬಂಧಿಸಿ 5 ಜನರ ಸಮಿತಿ ಇದೆ. ಆ ಸಮಿತಿಯಲ್ಲಿ ಕಾರ್ಯನಿರ್ವಹಣಾಧಿಕಾರಿ ಇರುತ್ತಾರೆ. ಸಮಿತಿಯ ನಿರ್ಧಾರದಂತೆ ನೇಮಕಾತಿ ಆಗುತ್ತದೆ. ಕಾರ್ಯನಿರ್ವಹಣಾಧಿಕಾರಿ ಅವರು ಸಮಿತಿಯ ಸಭೆಗೆ ಸದಾ ಗೈರಾಗುತ್ತಾರೆ. ಇತರೇ ಅಧಿಕಾರಿಗಳನ್ನು ಕಳುಹಿಸುತ್ತಾರೆ. ಕಾಲೇಜುಗಳ ಸಂಚಾಲಕರಾಗುವ ಬಯಕೆಯಿಂದ ಅವರು ಹೀಗೆ ಮಾಡುತ್ತಿರುವುದಾಗಿ ಪಶ್ನೆಗೆ ಉತ್ತರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಪ್ರಸನ್ನ ದರ್ಬೆ, ಮನೋಹರ ರೈ, ಲೊಕೇಶ್ ಮುಂಡೋಕಜೆ, ವನಜಾ ಭಟ್, ಶೋಭಾ ಗಿರಿಧರ್, ಮಾಸ್ಟರ್ ಪ್ಲಾನ್ ಸಮಿತಿಯ ಮನೋಜ್ ಉಪಸ್ಥಿತರಿದ್ದರು.