ರಿಕ್ಟರ್ ಮಾಪಕದಲ್ಲಿ 3.0 ಪರಿಮಾಣ ದಾಖಲು
ಇಂದು ಬೆಳಿಗ್ಗೆ ಸಂಭವಿಸಿದ ಭೂಕಂಪನದ ಕುರಿತಂತೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬುಲೆಟಿನ್ ಬಿಡುಗಡೆಗೊಳಿಸಿದ್ದು, ರಿಕ್ಟರ್ ಮಾಪಕದಲ್ಲಿ 3.0 ದಾಖಲಾಗಿರುವುದಾಗಿ ತಿಳಿಸಿದೆ.
ಬೆಳಿಗ್ಗೆ 7 ಗಂಟೆ 45 ನಿಮಿಷ 47 ಸೆಕೆಂಡಿಗೆ ಈ ಭೂಕಂಪನ ಸಂಭವಿಸಿದ್ದು, ಮಡಿಕೇರಿ – ದಕ್ಷಿಣ ಕನ್ನಡ ಗಡಿಗ್ರಾಮವಾಗಿರುವ ಚೆಂಬುವಿನಿಂದ 5.2 ವಾಯುವ್ಯ ದಿಕ್ಕಿನಲ್ಲಿ ಭೂಮಿಯ 15 ಕಿಲೋಮೀಟರ್ ಆಳದಲ್ಲಿ ರಿಕ್ಟರ್ ಮಾಪಕ 3.0 ರಷ್ಟು ಭೂಕಂಪನವಾಗಿದೆ. ಇದರ ಪರಿಣಾಮ ಮಡಿಕೇರಿ ತಾಲೂಕಿನ ಕರಿಕೆ ಭಾಗದ ವಾಯುವ್ಯದಲ್ಲಿ 8.2 ಕಿಲೋಮೀಟರ್ ವ್ಯಾಪ್ತಿಯಲ್ಲಿ, ಸಂಪಾಜೆ ಭಾಗದ ಪಶ್ಚಿಮದಲ್ಲಿ 11.4 ಕಿಲೋಮೀಟರ್ ವ್ಯಾಪ್ತಿಯಲ್ಲಿ, ಸುಳ್ಯ ತಾಲೂಕು ಭಾಗದ ಆಗ್ನೇಯದಲ್ಲಿ 12.1 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದೆ. ಹಾಗಾಗಿ ಈ ಪ್ರದೇಶದ 4೦ರಿಂದ 5೦ ಕಿಲೋಮೀಟರ್ ದೂರದಲ್ಲಿ ಭೂಕಂಪನದ ಅನುಭವವಾಗಿದೆ ಎಂದು ಕೆಎಸ್ಎನ್ಡಿಎಂಸಿ ಮಾಹಿತಿ ನೀಡಿದೆ.
ಹೀಗಾಗಿಯೇ ಸುಳ್ಯ ತಾಲೂಕಿನ ಬಹುತೇಕ ಕಡೆ ಭೂಮಿ ಕಂಪಿಸಿರುವ ಅನುಭವ ಆಗಿರುವುದಾಗಿ ತಿಳಿದುಬಂದಿದೆ.