ಕೊಚ್ಚಿಹೋದ ಕೊಡಿಯಾಲ – ಸಾರಕೆರೆ ಸಂಪರ್ಕ ಕಿಂಡಿ ಅಣೆಕಟ್ಟು, ತಾತ್ಕಾಲಿಕ ಸಂಪರ್ಕ ವ್ಯವಸ್ಥೆ ಕಲ್ಪಿಸಿದ ಊರವರು

0

 

ಕೊಡಿಯಾಲ ಪೆರುವಾಜೆ ಗ್ರಾಮಗಳನ್ನು ಸಂಪರ್ಕಿಸುವ ಸಾರಕೆರೆ ಎಂಬಲ್ಲಿ ಸುಮಾರು 47 ವರ್ಷಗಳ ಹಿಂದೆ ನಿರ್ಮಿಸಲಾದ ಕಿಂಡಿ ಅಣೆಕಟ್ಟು ಸಂಪೂರ್ಣ ಶಿಥಿಲಗೊಂಡಿದ್ದು, ಜು. 30ರಂದು ಸುರಿದ ರಣಭೀಕರ ಮಳೆಗೆ ಇದ್ದ ಸಂಪರ್ಕ ಸಾಧನವೂ ನೀರಿನಲ್ಲಿ ಕೊಚ್ಚಿಹೋಗಿ ಆ ಭಾಗದ ಜನರು ಪರಡಾಡುವ ಸ್ಥಿತಿ ನಿರ್ಮಾಣವಾಗಿದೆ.

 


ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಕೊಡಿಯಾಲ ಗ್ರಾಮದ ಆನೆಗುರಿ ಬೇರ್ಯ, ಉಡುಕಿರಿ ಕಾಲೊನಿ, ಕೆಡಿಂಜಿ ಮೊಗರು, ಸಾರಕೆರೆ ನಾಗರಿಕರು ಹಾಗೂ ಪೆರುವಾಜೆ ನಾಗರಿಕರು ತಮ್ಮ ದಿನನಿತ್ಯದ ವ್ಯವಹಾರ ಮತ್ತು ಕೃಷಿ ಚಟುವಟಿಕೆಗಳಿಗೆ ಈ ಕಿಂಡಿ ಅಣೆಕಟ್ಟನ್ನು ಅವಲಂಬಿಸಿದ್ದಾರೆ. ಈ ಅಣೆಕಟ್ಟು ಕೊಡಿಯಾಲ ಗ್ರಾಮಕ್ಕೆ ಸಂಪರ್ಕ ಕೊಂಡಿಯಾಗಿದ್ದು ಮಳೆಗಾಲದಲ್ಲಿ ಅಪಾಯದ ಮಟ್ಟದಲ್ಲಿ ನೀರು ಹರಿಯುತ್ತಿದೆ ತಗ್ಗು ಪ್ರದೇಶಗಳು ಮುಳುಗಡೆಯಾಗುತ್ತದೆ. ಇದರಿಂದ ಈ ಭಾಗದ ಜನತೆ ತುಂಬಾ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದೀಗ ಜು. 31ರಂದು ಸುರಿದ ಮಳೆಗೆ ಇದ್ದ ಕಾಲುದಾರಿಯೂ ನೀರಿನಲ್ಲಿ ಕೊಚ್ಚಿಹೋಗಿದೆ.
ಸ್ಥಳೀಯ ನಾಗರಿಕರು ಸಂಬಂಧಪಟ್ಟ ಇಲಾಖೆಗಳಿಗೆ ಹಲವು ಬಾರಿ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ ಈ ಕಿಂಡಿ ಅಣೆಕಟ್ಟು ಕೊಡಿಯ‍ಾಲ ಮತ್ತು ಪೆರುವಾಜೆ ಗ್ರಾಮಗಳ ವ್ಯಾಪ್ತಿಗೆ ಒಳಪಟ್ಟಿದ್ದು ಆದಷ್ಟು ಬೇಗ ಮೇಲ್ದರ್ಜೆಗೇರಿಸಿ ಸರ್ವಋತು ಸೇತುವೆಯನ್ನು ನಿರ್ಮಾಣ ಮಾಡಬೇಕೆಂದು ಈ ಭಾಗದ ನಾಗರಿಕರು ಆಗ್ರಹಿಸಿದ್ದಾರೆ. ಸದ್ಯಕ್ಕೆ ಕೊಚ್ಚಿಹೋದ ಭಾಗದಲ್ಲಿ ತೆಂಗಿನ ಮರದ ಪಾಲ ಹಾಕಿ ಸಂಚರಿಸುತ್ತಾರಾದರೂ ಶಾಲಾ ಮಕ್ಕಳು ಸಂಚರಿಸುವುದು ಕಷ್ಟಕರವಾಗಿದೆ.