ಕಲ್ಮಕ್ಕಾರು : ಕೊಚ್ಚಿ ಹೋದ ಸೇತುವೆ- ಅವಿರತ ಪರಿಹಾರ ಕಾರ್ಯ, ತಾತ್ಕಾಲಿಕ ಪಾಲ ನಿರ್ಮಿಸಿ ಸಂಪರ್ಕ ಕಲ್ಪಿಸಿದ ಕಾರ್ಯಕರ್ತರು

0

 

 

ವಿಶ್ವ ಹಿಂದೂ ಪರಿಷತ್ ಭಜರಂಗದಳ ,ಸೇವಾ ಭಾರತಿ , ಹಿಂದೂ ಜಾಗರಣ ವೇದಿಕೆ,ವೀರ ಕೇಸರಿ ತಂಡದ ಸೇವಾ ಕಾರ್ಯ

ಇತ್ತೀಚಿಗೆ ಕಳೆದ ಕೆಲ ದಿನಗಳಲ್ಲಿ ಪ್ರಾಕೃತಿಕ ವಿಕೋಪದಿಂದ
ಮೇಘಸ್ಪೋಟದಿಂದ ನಲುಗಿ ಹೋಗಿರುವ ಕಲ್ಮಕ್ಕಾರು ಕೊಲ್ಲಮೊಗ್ರು ಭಾಗದಲ್ಲಿ ಸೇವಾ ಭಾರತಿ, ವಿಶ್ವಹಿಂದೂ ಪರಿಷತ್ ಭಜರಂಗದಳ, ಹಿಂದೂ ಜಾಗರಣಾ ವೇದಿಕೆ ಹಾಗೂ ವೀರಕೇಸರಿ ಮಿತ್ರವೃಂದ ಮಂಡೆಕೋಲು ಭಾಗದ ಸಂಘಟನೆಯ ಸದಸ್ಯರು ಹೆಸರಿಗೆ ತಕ್ಕಂತೆ ಫಲಾಪೇಕ್ಷೆ ಬಯಸದೆ ಪರಿಹಾರ ಕಾರ್ಯದಲ್ಲಿ ಸ್ವಯಂ ಸೇವಕರಾಗಿ ತೊಡಗಿಸಿಕೊಂಡಿರುತ್ತಾರೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ಯುವಕರು ತಮ್ಮ ಸ್ವಂತ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಸ್ವಯಂ ಸೇವಕರಾಗಿ ಶ್ರಮಪಡುತ್ತಿದ್ದಾರೆ.

ಪರಿಹಾರ ಕಾರ್ಯದಲ್ಲಿ ತೊಡಗಿರುವಂತೆಯೇ ಭಾರೀ ಮಳೆಗೆ ಮೇಲಿನ ಭಾಗದಿಂದ ಅನಿರೀಕ್ಷಿತವಾಗಿ ಹರಿದು ಬಂದ ನೆರೆನೀರಿಗೆ ಕಲ್ಮಕ್ಕಾರು ಕೊಲ್ಲಮೊಗರು ರಸ್ತೆಯಲ್ಲಿ ಆಳೆತ್ತರದಲ್ಲಿ ನೀರು ಉಕ್ಕಿಬಂದ ಪರಿಣಾಮ ಗಂಟೆಗಳಷ್ಟು ಕಾಲ ಪರಿಹಾರ ಕಾರ್ಯದಲ್ಲಿ ತೊಡಗಿದ್ದ ಕಾರ್ಯಕರ್ತರು ದಿಗ್ಭಂಧನಕ್ಕೊಳಗಾದ ಘಟನೆಯು ಇಂದು ನಡೆಯಿತು. ಆದರೂ ಎದೆಗುಂದದ ಕಾರ್ಯಕರ್ತರು ನೆರೆನೀರು ಸ್ವಲ್ಪ ತಗ್ಗುತ್ತಿದ್ದಂತೆ ರಸ್ತೆಯ ಎರಡು ಬದಿಗೆ ರಕ್ಷಣಾ ಬೇಲಿಯಾಗಿ ನಿಂತು ಒಂದು ಬದಿಯಿಂದ ಇನ್ನೊಂದು ಬದಿಗೆ ವಾಹನ ಹಾಗೂ ಜನರನ್ನು ದಾಟಿಸುವಲ್ಲಿ ಯಶಸ್ವಿಯಾದರು.
ಕಲ್ಮಕ್ಕಾರಿನಲ್ಲಿ ಮೇಘಸ್ಪೋಟದಿಂದಾಗಿ ಭಾರಿ ಗಾತ್ರದ ಮರಗಳ ಸಹಿತ ಹರಿದು ಬಂದಿರುವ ನೀರಿನ ರಭಸಕ್ಕೆ ಸೇತುವೆಯ ಇನ್ನೊಂದು ಬದಿಯ ತೆಂಗಿನ ತೋಟ ಕೊಚ್ಚಿಹೋಗಿ ಹೊಸದಾಗಿ ತೋಡು ನಿರ್ಮಾಣವಾಗಿತ್ತು. ಆ ಪ್ರದೇಶಕ್ಕೆ ಸಂಪರ್ಕ ಸಾಧ್ಯವಾಗದೆ ಸಂಕಷ್ಟದಲ್ಲಿದ್ದ ಮನೆಗಳಿಗೆ ಸೇವಾಭಾರತಿ ಹಾಗೂ ವೀರಕೇಸರಿ ತಂಡದ ಸದಸ್ಯರು ನೂತನ ತಾತ್ಕಾಲಿಕ ಕಂಗಿನ ಪಾಲ ನಿರ್ಮಿಸಿ ಸದ್ಯದ ‌ಮಟ್ಟಿಗೆ ಸಂಪರ್ಕ ವ್ಯವಸ್ಥೆ ಕಲ್ಪಿಸಿಕೊಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಶ್ರಮದಾನ ಕಾರ್ಯದಲ್ಲಿ
ಹಿಂದೂ ಸಂಘಟನೆಗಳ ಪ್ರಮುಖರಾದ ಮಹೇಶ್ ಕುಮಾರ್ ರೈ ಮೇನಾಲ, ಸುರೇಶ್ ಕಣೆಮರಡ್ಕ, ರಾಜೇಶ್ ಕಿರಿಭಾಗ, ಶಿವಪ್ರಸಾದ್ ಉಗ್ರಾಣಿಮನೆ‌ ಹಾಗೂ ಮತ್ತಿತರರು ನೇತೃತ್ವ ವಹಿಸಿದ್ದರು.
ತನ್ನ ಮನೆ ಮಂದಿಯನ್ನು ಬಿಟ್ಟು ಸ್ವಂತ ಕೆಲಸ ಕಾರ್ಯಗಳನ್ನು ಬದಿಗಿರಿಸಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುತ್ತಾರೆ.