ಗೃಹರಕ್ಷಕರನ್ನು ಜೀವರಕ್ಷಕರಾಗಿಸೋಣ: ಡಾ: ಕಿಶನ್ ರಾವ್ ಬಾಳಿಲ

0

 

ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ಪಡೆ ಇದರ ಸಂಯುಕ್ತ ಆಶ್ರಯದಲ್ಲಿ ಜೀವರಕ್ಷಾ ಟ್ರಸ್ಟ್ ಮತ್ತು ಫಾದರ್ ಮುಲ್ಲರ್ ಆಸ್ಪತ್ರೆ, ಮಂಗಳೂರು ಇವರ ಸಹಯೋಗದೊಂದಿಗೆ ಆ. 19ರಂದು ನಗರದ ಮೇರಿಹಿಲ್‌ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಛೇರಿಯಲ್ಲಿ ಗೃಹರಕ್ಷಕರಿಗೆ ಹೃದಯ ಸ್ತಂಭನ ಮರುಪೂರಣ ಕೌಶಲ್ಯ ತರಬೇತಿ ಶಿಬಿರ ನಡೆಸಲಾಯಿತು.


ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರು ಜೀವರಕ್ಷಾ ಟ್ರಸ್ಟ್ ವಲಯ ವ್ಯವಸ್ಥಾಪಕರಾದ ಡಾ. ಕಿಶನ್ ರಾವ್ ಬಾಳಿಲ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೆಚ್ಚು ಹೆಚ್ಚು ಹೃದಯಘಾತವಾಗುತ್ತಿದೆ. ಎಲ್ಲಾ ಕಡೆಗಳಲ್ಲಿ ವೈದ್ಯರ ಲಭ್ಯತೆ ಇರುವುದಿಲ್ಲ. ಈ ನಿಟ್ಟಿನಲ್ಲಿ ಸಮಾಜದಲ್ಲಿ ಸಾಮಾನ್ಯ ಜನರೂ ಕೂಡ ಆರೋಗ್ಯ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಸನ್ನದ್ದರಾಗಬೇಕಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಬಹು ದೊಡ್ಡ ಆರೋಗ್ಯ ವಿಶ್ವವಿದ್ಯಾಲಯವಾದ ರಾಜೀವ್ ಗಾಂಧಿ ವಿಶ್ವ ವಿದ್ಯಾಲಯದ ಅಂಗ ಸಂಸ್ಥೆಯಾದ ಜೀವರಕ್ಷಾ ಟ್ರಸ್ಟ್ ವತಿಯಿಂದ ರಾಜ್ಯದೆಲ್ಲೆಡೆ ಸಾಮಾನ್ಯ ಜನರಿಗೆ ಹೃದಯ ಪುನಶ್ಚೇತನ ಕೌಶಲ್ಯ ತರಬೇತಿ ನೀಡಲಾಗುತ್ತದೆ. ಸಮಾಜದ ಆರೋಗ್ಯ ರಕ್ಷಿಸುವಲ್ಲಿ ಬಹು ಮುಖ್ಯ ಭೂಮಿಕೆ ವಹಿಸುವ ಗೃಹರಕ್ಷಕರಿಗೆ ವಿಶೇಷ ತರಬೇತಿ ನೀಡಿ ಜನರ ಜೀವ ರಕ್ಷಣೆಯ ಹೊಣೆಗಾರಿಕೆಯನ್ನು ಅವರಿಗೆ ವಹಿಸಲು ಈ ಕಾರ್ಯಸೂಚಿ ತಯಾರಾಗಿದೆ. ಮುಂದೆ ಗೃಹರಕ್ಷಕರು ಜೀವರಕ್ಷಕರಾಗಿ ಸಮಾಜದ ಜನರ ಜೀವ ರಕ್ಷಿಸಲು ಸನ್ನದ್ದರಾಗಿದ್ದಾರೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರು ಮತ್ತು ಪೌರರಕ್ಷಣಾ ಪಡೆಯ ಮುಖ್ಯಪಾಲಕ ಡಾ. ಮುರಲೀಮೋಹನ್ ಚೂಂತಾರು ಮಾತನಾಡಿ ಜಗತ್ತಿನಲ್ಲಿ ಸಾವಿಗೆ ಕಾರಣವಾಗುವ ರೋಗಗಳಲ್ಲಿ ಹೃದಯ ಸ್ತಂಭನ ಮತ್ತು ಹೃದಯಾಘಾತಕ್ಕೆ ಅಗ್ರಸ್ಥಾನ ಇದೆ. ಪ್ರತಿ 100 ರಲ್ಲಿ 90 ಮಂದಿ ಹೃದಯ ಸಂಬಧಿ ರೋಗಗಳಿಂದ ಸಾವನ್ನಪ್ಪುತ್ತಾರೆ. ಹೃದಯ ಸ್ತಂಭನವಾದಾಗ ತಕ್ಷಣವೇ ಸೂಕ್ತ ರೀತಿಯಲ್ಲಿ ಸ್ಪಂದಿಸಿ ಹೃದಯ ಪುನಶ್ಚೇತನ ಪ್ರಕ್ರಿಯೆ ಮಾಡಿದಲ್ಲಿ50 ಶೇಕಡಾ ರೋಗಿಗಳನ್ನು ಬದುಕಿಸಲು ಸಾಧ್ಯವಿದೆ. ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಎಲ್ಲಾ ಗೃಹರಕ್ಷಕರಿಗೆ ಮತ್ತು ಪೌರರಕ್ಷಣಾ ಕಾರ್ಯಕರ್ತರಿಗೆ ಈ ಹೃದಯ ಸ್ತಂಭನ ಮರುಪೂರಣಾ ಕೌಶಲ್ಯ ತರಬೇತಿ ನೀಡಿ ಅವರನ್ನು ಜೀವರಕ್ಷಕರನ್ನಾಗಿ ಸಿದ್ದಪಡಿಸಲಾಗುತ್ತದೆ. ಒಟ್ಟಿನಲ್ಲಿ ಆರೋಗ್ಯ ಪೂರ್ಣ ಸಮೃದ್ದ ಮತ್ತು ಸಧೃಡ ಬಲಿಷ್ಟ ಭಾರತ ನಿರ್ಮಾಣಕ್ಕಾಗಿ ಗೃಹರಕ್ಷಕರು ಕಟಿಬದ್ದರಾಗಿದ್ದಾರೆ ಎಂದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಡಾ. ನಮ್ರತಾ ಶೆಟ್ಟಿ ಮಾತನಾಡಿ, ಹೃದಯ ಸ್ತಂಭನವಾದಾಗ ನೀವು ಇಂದು ಕಲಿತ ವಿಚಾರಗಳನ್ನು ತಕ್ಷಣವೇ ಕರ‍್ಯರೂಪಕ್ಕೆ ತಂದಲ್ಲಿ, ಜನರ ಜೀವ ಉಳಿಸಿದ ಸಾರ್ಥಕತೆ ನಿಮಗೆ ದೊರಕುತ್ತದೆ. ಇದಕ್ಕೆ ಬೆಲೆ ಕಟ್ಟಲು ಸಾಧ್ಯವಾಗದು. ಈ ನಿಟ್ಟಿನಲ್ಲಿ ಪ್ರತೀ ಗೃಹರಕ್ಷಕರೂ ಈ ತರಬೇತಿ ಪಡೆದಲ್ಲಿ ವೈದ್ಯರ ಮೇಲಿನ ಜವಾಬ್ದಾರಿ ಮತ್ತು ಒತ್ತಡ ಸ್ವಲ್ಪ ಕಡಿಮೆಯಾಗಬಹುದು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಕೋರ್ಸ್ ಡೈರೆಕ್ಟರ್, ಡಾ. ಶೈಲಜಾ ಕಟ್ಟಿ,
ಕೋರ್ಸ್ ಇನ್ಸ್ ಫರಕ್ಟರ್ ಶ್ರೀಮತಿ ಜಿನ್ಸಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಉಪ ಸಮಾದೇಷ್ಟರಾದ ರಮೇಶ್ ವಂದನಾರ್ಪಣೆ ಮಾಡಿದರು. 15 ಮಂದಿ ಗೃಹರಕ್ಷಕರಿಗೆ ಈ ತರಬೇತಿಯನ್ನು ನೀಡಿ ಪ್ರಮಾಣ ಪತ್ರವನ್ನು ವಿತರಿಸಲಾಯಿತು.