ರಸ್ತೆಯಲ್ಲಿದ್ದ ಹೊಂಡಕ್ಕೆ ಬಿದ್ದೆದ್ದ ಸರಕಾರಿ ಬಸ್ಸು

0

 

ಬಿದ್ದ ರಭಸಕ್ಕೆ ಸೀಟಿನಿಂದ ಮೇಲಕ್ಕೆಸೆಯಲ್ಪಟ್ಟು ಸೊಂಟ ಮುರಿದುಕೊಂಡ ಬೆಳ್ಳಾರೆಯ ಯುವಕ

ಗಂಭೀರ ಸ್ಥೀತಿಯಲ್ಲಿ ಆಸ್ಪತ್ರೆಗೆ ದಾಖಲು

ಮಂಗಳೂರಿನಿಂದ ಪುತ್ತೂರಿಗೆ ಕೆ ಎಸ್‌ ಆರ್‌ ಟಿ ಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಬೆಳ್ಳಾರೆಯ ಯುವಕನೋರ್ವ ರಸ್ತೆಯ ಅವ್ಯವಸ್ಥೆ ಯಿಂದಾಗಿ ಬಸ್ಸು ಒಮ್ಮಿಂದೊಮ್ಮೆಲೆ ಗುಂಡಿಗೆ ಬಿದ್ದು ಎದ್ದಾಗ ಹಿಂಬದಿ ಸೀಟಿನಲ್ಲಿದ್ದ ಯುವಕ ಸೀಟಿನಿಂದ ಎಸೆಯಲ್ಪಟ್ಟು, ತನ್ನ ಸೊಂಟಕ್ಕೆ ಏಟು ತಗುಲಿ ಗಂಭೀರಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ.

ಬೆಳ್ಳಾರೆಯ ತಡೆಗಜೆ ವಿಜಯ ಕುಮಾರ್‌ ಎಂಬವರು ಸುಳ್ಯದ ಮೊಬೈಲ್‌ ಅಂಗಡಿಯೊಂದರಲ್ಲಿ ಉದ್ಯೋಗಿಯಾಗಿದ್ದು, ಆ.17ರಂದು ಕಾರ್ಯ ನಿಮಿತ್ತ ಮಂಗಳೂರಿಗೆ ಹೋಗಿ ವಾಪಾಸ್‌ ಬೆಳ್ಳಾರೆಗೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಬರುತ್ತಿದ್ದರು. ಬಸ್ಸು ಕಲ್ಲಡ್ಕ ಬಳಿ ತಲುಪುತ್ತಿದ್ದಂತೆ ಬಸ್ಸು ಒಮ್ಮಿಂದೊಮ್ಮೆಲೆ ರಸ್ತೆಯಲ್ಲಿದ್ದ ಹೊಂಡಕ್ಕೆ ಬಿದ್ದೇಳಿತ್ತೆನ್ನಲಾಗಿದೆ. ಬಸ್ಸು ಗುಂಡಿಗೆ ಬಿದ್ದ ರಭಸಕ್ಕೆ ಬಸ್ಸಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ವಿಜಯ ಕುಮಾರ್ ರವರು ಸೀಟಿನಿಂದ ಮೇಲಕ್ಕೆ‌ ಎಸೆಯಲ್ಪಟ್ಟು ಬೀಳುವಾಗ ಬಸ್ಸಿನ ಸೀಟಿನ ರಾಡ್ ಸೊಂಟಕ್ಕೆ ತಾಗಿ ಗಂಭೀರ ಗಾಯಗೊಂಡರಲ್ಲದೆ, ಸೊಂಟದಿಂದ ಕೆಳಭಾಗ ಸ್ಪರ್ಶ ಕಳೆದುಕೊಂಡು, ಬಸ್ಸಿನೊಳಗೆ ಬೊಬ್ಬೆ ಹೊಡೆದರೆನ್ನಲಾಗಿದೆ. ತಕ್ಷಣ ಬಸ್ಸು ನಿಲ್ಲಿಸಿದ ಚಾಲಕ ಗಂಭೀರ ಸ್ಥಿತಿಯಲ್ಲಿದ್ದ ವಿಜಯರವನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್‌ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು.

ಮೇಲಕ್ಕೆಸೆಯಲ್ಪಟ್ಟ ಸಂದರ್ಭ ವಿಜಯರವರ ತಲೆ ಬಸ್ಸಿನ ಟಾಪ್ ಗೆ ತಾಗಿತ್ತೆನ್ನಲಾಗಿದೆ.

ವೆನ್ಲಾಕ್ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಬೆನ್ನುಹುರಿ ಹಾಗೂ ಕುತ್ತಿಗೆ ಸಮೀಪದ ಎಲುಬು ಜಖಂಗೊಂಡಿರುವುದಾಗಿಯೂ ಶಸ್ತ್ರಚಿಕಿತ್ಸೆಗೆ ಮಾಡಬೇಕಾಗಿರುವುದಾಗಿಯೂ ತಿಳಿಸಿದ್ದಾರೆ.

ರಸ್ತೆಯ ಅಭಿವೃದ್ಧಿ ಕಾಮಗಾರಿ ಕೆಲಸಗಳು ನಡೆಯುತ್ತಿದ್ದು, ರಸ್ತೆಯಲ್ಲಿ ಸಮರ್ಪಕ ಕಾಮಗಾರಿಯ ನಿರ್ವಹಣೆ ಇಲ್ಲದೇ ಇರುವುದು ಹಾಗೂ ಬಸ್ಸು ಚಾಲಕನ ನಿರ್ಲಕ್ಷ್ಯ ತನದ ಚಾಲನೆಯೇ ಘಟನೆಗೆ ಕಾರಣವೆನ್ನಲಾಗಿದ್ದು, ಬಸ್ ಚಾಲಕ ಅಬ್ದುಲ್ ಎಂಬವರ ಮೇಲೆ ಬಂಟ್ವಾಳ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯರವರು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ತಗಡಜೆಯಲ್ಲಿ ವಾಸಿಸುತ್ತಿದ್ದಾರೆ. ವಿಜಯರವರ ದುಡಿಮೆಯಿಂದಾಗಿ ಕುಟುಂಬದ ಜೀವನ ಸಾಗುತ್ತಿತ್ತು.
ರಸ್ತೆಯ ಅವ್ಯವಸ್ಥೆ ಹಾಗೂ ಸರಕಾರಿ ಬಸ್ಸಿನ ಅವಂತರದಿಂದಾಗಿ ದುಡಿಮೆ ನಡೆಸುತ್ತಿದ್ದ ಯುವಕ ಬಾಳು ಚಿಂತಾಜನಕವಾಗಿದೆ.