ಗುಜರಾತ್ ನಲ್ಲಿ ಡಾ. ಆರ್.ಕೆ. ನಾಯರ್ ಅರಣ್ಯ ಬೆಳೆಸಿರುವ ಸ್ಮೃತಿ ವನ್ ನಾಳೆ ಪ್ರಧಾನಿ ನರೇಂದ್ರ ಮೋದಿಯವರಿಂದ ಲೋಕಾರ್ಪಣೆ

0

 

ಗ್ರೀನ್ ಹೀರೋ, ಸುಳ್ಯದವರಾದ ಡಾ.ಆರ್.ಕೆ. ನಾಯರ್ ಗುಜರಾತ್‌ನ ಕಛ್‌ನಲ್ಲಿ ಬೆಳೆಸಿರುವ ಅತ್ಯಂತ ದೊಡ್ಡ ಮಿಯಾವಾಕಿ ಅರಣ್ಯ ಸಹಿತವಾದ ಸ್ಮೃತಿ ವನ್ ಜು. 28 ರಂದು ಲೋಕಾರ್ಪಣೆಗೊಳ್ಳಲಿದ್ದು, ಪ್ರಧಾನಮಂತ್ರಿ ಡಾ. ನರೇಂದ್ರ ಮೋದಿಯವರು ಇದರ ಉದ್ಘಾಟನೆ ನೆರವೇರಿಸಲಿದ್ದಾರೆ.

ಕಛ್ ಭಾರತದ ಅತಿ ದೊಡ್ಡ ಜಿಲ್ಲೆಯಾಗಿದ್ದು, 2011ರ ಜನಗಣತಿ ಯಂತೆ ಅಲ್ಲಿ ವಾಸ್ತವ್ಯ ವಿರುವುದು ಎರಡು ದಶಲಕ್ಷ ಜನ. ಇಂತಹ ಕಛ್ ಜಿಲ್ಲೆಯಲ್ಲಿ ಭುಜಂಗ ಪರ್ವತದ ಶ್ರೇಣಿಯಲ್ಲಿ 2001 ರಲ್ಲಿ ಘಟಿಸಿದ ಭೂಕಂಪವು ಅತ್ಯಂತ ದೊಡ್ಡ ನಾಶ ನಷ್ಟವನ್ನು ಉಂಟುಮಾಡಿತು. ಅಂಜಾರ್, ಭುಜ್ ಮತ್ತು ಬಚಾವ್ ತಾಲೂಕಿನಲ್ಲಿ ನೂರಾರು ಹಳ್ಳಿಗಳು ನೆಲಸಮಗೊಂಡಿತ್ತು. ಅನೇಕ ಐತಿಹಾಸಿಕ ಕಟ್ಟಡಗಳು ಸೇರಿದಂತೆ ಒಂದು ದಶಲಕ್ಷಕ್ಕೂ ಹೆಚ್ಚು ಹಾನಿಗೊಳಗಾಗಿತ್ತು.
ಹೀಗೆ ಭೂಕಂಪದಿಂದ ಸಾವಿಗೀಡಾದವರ ನೆನಪಿನಲ್ಲಿ ಗುಜರಾತ್ ಸರಕಾರವು ಬೃಹತ್ತಾದ ಸ್ಮೃತಿ ವನ್ ಮೆಮೋರಿಯಲ್ ಪ್ರಾಜೆಕ್ಟ್‌ಗೆ ಮುಂದಾಗಿದ್ದು ಇದರಲ್ಲಿ ಮ್ಯೂಸಿಯಂ ಮತ್ತು ಸ್ಮೃತಿವನ್ ಒಳಗೊಂಡಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸಿನ ಯೋಜನೆ ಇದಾಗಿದ್ದು, ಈ ಪೈಕಿ ಸ್ಮೃತಿವನದ ರೂವಾರಿ, ಜಪಾನ್ ತಂತ್ರಜ್ಞಾನದ ಮಿಯಾವಾಕಿ ಫಾರೆಸ್ಟ್ ಮೂಲಕ ದೇಶದಾದ್ಯಂತ ಹಸಿರು ಕ್ರಾಂತಿ ಸೃಷ್ಟಿಸಿರುವ ಫಾರೆಸ್ಟ್ ಕ್ರಿಯೇಟರ್ಸ್ ಮುಖ್ಯಸ್ಥ ಡಾ. ಆರ್.ಕೆ. ನಾಯರ್.

ಸುಳ್ಯ ತಾಲೂಕಿನ ಜಾಲ್ಸೂರಿನವರಾದ ಆರ್.ಕೆ. ನಾಯರ್ ಕಳೆದ ಹಲವು ದಶಕಗಳಿಂದ ಗುಜರಾತ್‌ನಲ್ಲಿ ನೆಲೆಸಿದ್ದು, ಮಹಾರಾಷ್ಟ್ರ ಹಾಗೂ ಗುಜರಾತ್‌ನಲ್ಲಿ ಗಾರ್ಮೆಂಟ್ಸ್ ಉದ್ಯಮಿಯಾಗಿ ಪ್ರಸಿದ್ಧರಾಗಿದ್ದಾರೆ. ನೂರಾರು ಮಂದಿಗೆ ಉದ್ಯೋಗ ನೀಡಿದ್ದಾರೆ. ಹಲವು ವರ್ಷಗಳಿಂದ ಮಿಯಾವಾಕಿ ಮಾದರಿ ಅರಣ್ಯ ಬೆಳೆಸುತ್ತಿರುವ ಆರ್.ಕೆ. ನಾಯರ್‌ರವರು ದೇಶದ ವಿವಿಧ ರಾಜ್ಯಗಳಲ್ಲಿ ನೂರಕ್ಕೂ ಹೆಚ್ಚು ಹಸಿರು ವನಗಳ ಮೂಲಕ ಲಕ್ಷಾಂತರ ಗಿಡಗಳನ್ನು ಬೆಳೆಸಿದ್ದು, ಒಂದು ಕೋಟಿ ಗಿಡ ಬೆಳೆಸುವ ಗುರಿ ಹೊಂದಿದ್ದು, ಭುಜ್ ಪ್ರದೇಶದಲ್ಲೂ ಈ ಅರಣ್ಯ ಬೆಳೆಸಿದ್ದಾರೆ. ಇದು ವಿಶ್ವದ ಅತ್ಯಂತ ದೊಡ್ಡ ಮಿಯಾವಾಕಿ ಅರಣ್ಯ.

ಗುಜರಾತ್ ಸ್ಟೇಟ್ ಡಿಸಾಸ್ಟರ್‌ವಮ್ಯಾನೇಜ್‌ಮೆಂಟ್ ಅಥೋರಿಟಿ (ಜಿ.ಎಸ್.ಡಿ.ಎಂ.ಎ.) ಮುಖಾಂತರ ಕಾರ್ಪೋರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಫಂಡ್ (ಸಿಎಸ್‌ಆರ್) ಮುಖಾಂತರ ಈ ಕಾರ್ಯ ಕಾರ್ಯಗತಗೊಳ್ಳುತ್ತಿದ್ದು, ಇಲ್ಲಿ ಒಟ್ಟು 2,23,533 ಗಿಡಗಳನ್ನು ನೆಡಲಾಗಿದೆ. ಕಳೆದ ಒಂದು ವರ್ಷದಿಂದ ಈ ಕಾರ್ಯ ಪ್ರಗತಿಯಲ್ಲಿದ್ದು, ಸುಮಾರು 117 ಜಾತಿಯ ಗಿಡಗಳನ್ನು ನೆಡಲಾಗಿದೆ. ಒಂದು ವರ್ಷದಲ್ಲಿಯೇ ಹಸಿರು ವನ ಕಂಗೊಳಿಸಿದೆ. ಕುಕ್ಕೆಸುಬ್ರಹ್ಮಣ್ಯ ಸಮೀಪದ ನೆಟ್ಟಣದ ಜಯಕೃಷ್ಣರವರು ಡಾ. ಆರ್.ಕೆ. ನಾಯರ್ ತಂಡದ ಟೀಮ್ ಸೈಟ್ ಇನ್‌ಚಾರ್ಜ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಏನಿದು ಸ್ಮೃತಿ ವನ್ ?

ಈ ಸ್ಮೃತಿವನ್ ನಿರ್ಮಾಣದ ನಿರ್ಧಾರವನ್ನು ಅಂದಿನ ಮುಖ್ಯಮಂತ್ರಿ, ಪ್ರಧಾನಿ ನರೇಂದ್ರ ಮೋದಿಯವರು ಕೈಗೊಂಡಿದ್ದರು. ಮುಂದೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ನೇತೃತ್ವದ ರಾಜ್ಯ ಸರ್ಕಾರ ಈ ಯೋಜನೆಯನ್ನು ಸಾಕಾರಗೊಳಿಸಿದೆ.

ಈ ಸ್ಮೃತಿವನ್ ನಲ್ಲಿ ನಿರ್ಮಿಸಲಾಗಿರುವ ವಿಶೇಷ ವಸ್ತುಸಂಗ್ರಹಾಲಯವು ಜನರನ್ನು ಆಕರ್ಷಿಸುತ್ತಿದೆ. ವಸ್ತು ಸಂಗ್ರಹಾಲಯವು ಭೂಕಂಪದ ಕ್ಷಣಗಳನ್ನು ಮತ್ತು ಅದರಿಂದ ಕಲಿತ ಪಾಠಗಳನ್ನು ಸ್ಮರಣೆ ಮಾಡಿಕೊಳ್ಳುವಂತೆ ಮಾಡುತ್ತದೆ. ಅಲ್ಲದೇ ಯುವಜನರಲ್ಲಿ ಭೂವಿಜ್ಞಾನದ ಬಗ್ಗೆ ಆಸಕ್ತಿಯನ್ನು ಬೆಳೆಸಲು ಇದನ್ನು ವಿನ್ಯಾಸಗೊಳಿಸಲಾಗಿದೆ.

ಭೂವಿಜ್ಞಾನಕ್ಕೆ ಸಂಬಂಧಿಸಿದ ವಿವಿಧ ಆಸಕ್ತಿದಾಯಕ ಮಾಹಿತಿ ಹಾಗೂ ಭೂಕಂಪದ ಸ್ಮರಣಿಕೆಗಳನ್ನು ವಿವಿಧ ಗ್ಯಾಲರಿಗಳಲ್ಲಿ ಜೋಡಿಸಲಾಗಿದೆ. ಅದಕ್ಕಾಗಿ ಆಧುನಿಕ ತಂತ್ರಜ್ಞಾನ ಮತ್ತು ಸಲಕರಣೆಗಳನ್ನು ಬಳಸಲಾಗಿದೆ.

ಕಛ್ ಭೂಕಂಪನದಲ್ಲಿ ಪ್ರಾಣ ಕಳೆದುಕೊಂಡವರ ಗೌರವ ಸಲ್ಲಿಸಲು ರಿಮೆಂಬರೆನ್ಸ್ ಬ್ಲಾಕ್‌ನಲ್ಲಿ ಗ್ಯಾಲರಿಯನ್ನು ಮಾಡಲಾಗಿದೆ. ಮತ್ತು ಡಿಜಿಟಲ್ ಲೈಟಿಂಗ್ ಮೂಲಕ ಭೂಕಂಪದ ಅನುಭವ ಮತ್ತು ಅಂದಿನ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ಮಾಡಲಾಗಿದೆ.

ಭೂಕಂಪದ ಸಮಯದಲ್ಲಿ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ಅನುಭವ ಪಡೆಯಲು ವಿಶೇಷ ರಂಗಮಂದಿರವನ್ನು ನಿರ್ಮಿಸಲಾಗಿದೆ. ಇಲ್ಲಿ ಕಂಪನ, ಧ್ವನಿ ಮತ್ತು ಬೆಳಕಿನ ಸಂಯೋಜನೆಯೊಂದಿಗೆ ಒಂದು ವಿಶಿಷ್ಟ ಸನ್ನಿವೇಶವನ್ನು ರಚಿಸಲಾಗಿದೆ. ಮ್ಯೂಸಿಯಂನಲ್ಲಿ ಪುನರ್ನಿರ್ಮಾಣ, ಪುನರಾರಂಭ, ಮರುಪ್ರವೇಶ, ಮರುಚಿಂತನೆ, ಪರಿಷ್ಕರಣೆ, ಮರು ಪರೀಕ್ಷೆ ಎಂಬ ಒಟ್ಟು ಎಂಟು ಬ್ಲಾಕ್‌ಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಐತಿಹಾಸಿಕ ಹರಪ್ಪಾ, ಸಿಂಧೂ ನಾಗರಿಕತೆ, ಭೂಕಂಪಗಳ ವೈಜ್ಞಾನಿಕ ಮಾಹಿತಿ, ಗುಜರಾತ್ ಕಲೆ, ಸಂಸ್ಕೃತಿ, ಸೈಕ್ಲೋನ್‌ಗಳ ವಿಜ್ಞಾನ, ನಿಯಂತ್ರಣ ಕೊಠಡಿಯ ಮೂಲಕ ನೈಜ ಸಮಯದಲ್ಲಿ ತುರ್ತು ಸಂವಹನ, ಕಛ್ ಭೂಕಂಪದ ನಂತರ ಚೇತರಿಕೆ ಕಥೆಗಳು, ರಾಜ್ಯ ಅಭಿವೃದ್ಧಿ ಕಾರ್ಯಾಗಾರಗಳು ಮತ್ತು ಪ್ರಸ್ತುತಿಗಳನ್ನು ತೋರಿಸಲಾಗಿದೆ.

ಪ್ರವಾಸಿಗರಿಗೆ ಹೆಚ್ಚಿನ ಅನುಭವವನ್ನು ನೀಡಲು ಇಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಲಾಗಿದೆ. ಇದು 50 ಆಡಿಯೋ-ದೃಶ್ಯ ಮಾದರಿಗಳು, ಹೊಲೊಗ್ರಾಮ್‌ಗಳು, ಸಂವಾದಾತ್ಮಕ ಪ್ರೊಜೆಕ್ಷನ್, ವರ್ಚುವಲ್ ರಿಯಾಲಿಟಿಯನ್ನು ಬಳಸಲಾಗಿದೆ. ಜನರು ಇಲ್ಲಿ ಪಳೆಯುಳಿಕೆಗಳ ಪ್ರದರ್ಶನವನ್ನು ಸಹ ನೋಡಬಹುದು. ಈ ಸ್ಥಳವು ಭೂಕಂಪದ ನಂತರದ ಚೇತರಿಕೆಯ ಕಥೆಯೊಂದಿಗೆ ಸ್ಥಳೀಯ ಕಲೆ ಸಂಸ್ಕೃತಿ, ವಿಜ್ಞಾನವನ್ನು ಪರಿಚಯಿಸುತ್ತದೆ.

ಈ ಯೋಜನೆಯನ್ನು ಭುಜ್‌ನ ಭುಜಿಯೋ ಬೆಟ್ಟದ ಮೇಲೆ 470 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಮೊದಲ ಹಂತದಲ್ಲಿ 170 ಎಕರೆ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಮೊದಲ ಹಂತದಲ್ಲಿ 50 ಚೆಕ್ ಡ್ಯಾಮ್‌ಗಳು, ಸನ್ ಪಾಯಿಂಟ್‌ಗಳು, 8 ಕಿಮೀ ಉದ್ದದ ಕೂಲಂಕುಷ ಮಾರ್ಗ, 1.2 ಕಿಮೀ ಆಂತರಿಕ ರಸ್ತೆ, 1 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರ, 3 ಸಾವಿರ ಪ್ರವಾಸಿಗರಿಗೆ ಪಾರ್ಕಿಂಗ್, 300ಕ್ಕೂ ಅಧಿಕ ವರ್ಷಗಳ ಹಳೆಯ ಕೋಟೆಯ ಮರುಸ್ಥಾಪನೆ, 3 ಲಕ್ಷ ಮರಗಳ ಮಿಯಾವಾಕಿ ಅರಣ್ಯ ಇದೆ. ಪ್ರದೇಶದಾದ್ಯಂತ ವಿದ್ಯುತ್ ದೀಪಗಳಿವೆ, ಭೂಕಂಪದ ಅನುಭವಕ್ಕಾಗಿ ಮೀಸಲಾಗಿರುವ 11500 ಚದರ ಮೀಟರ್ ವಸ್ತು ಸಂಗ್ರಹಾಲಯ ಇದೆ. ಚೆಕ್ ಡ್ಯಾಂನ ಗೋಡೆಗಳ ಮೇಲೆ ಎಲ್ಲಾ ಸಂತ್ರಸ್ತ ನಾಗರಿಕರ ಹೆಸರಿನ ಫಲಕವನ್ನು ಅಳವಡಿಸಲಾಗಿದೆ.