ಫಾಸ್ಟ್ ಫುಡ್ ಅಂಗಡಿಗೆ ಬೋಲೆರೋ ವಾಹನ ಡಿಕ್ಕಿ

0

ಅನ್ನ ಬೇಯುತ್ತಿದ್ದ ಪಾತ್ರೆ ಮಗುಚಿ ಕಾರ್ಮಿಕ ಗಂಭೀರ ಗಾಯ

ಫಾಸ್ಟ್ ಫುಡ್ ಅಂಗಡಿಗೆ ಬೋಲೆರೋ ವಾಹನ ಡಿಕ್ಕಿ ಹೊಡೆದು ಪರಿಣಾಮ ಅಂಗಡಿಯ ಕಾರ್ಮಿಕ ಗಂಭೀರ ಗಾಯಗೊಂಡ ಘಟನೆ ನಿನ್ನೆ ವರದಿಯಾಗಿದೆ.
ಸುಳ್ಯ ಕುರುಂಜಿಭಾಗ್ ಕೆವಿಜಿ ಆಯುರ್ವೇದಿಕ್ ಆಸ್ಪತ್ರೆ ಬಳಿ ಇರುವ ಫಾಸ್ಟ್ ಫುಡ್ ಅಂಗಡಿಗೆ ನಿನ್ನೆ ರಾತ್ರಿ ಸುಮಾರು ಏಳು ಗಂಟೆ ಸುಮಾರಿಗೆ ಬುಲೆರೋ ವಾಹನ ಡಿಕ್ಕಿಯಾಗಿ ಅಂಗಡಿಯ ಕಾರ್ಮಿಕ ಗಂಭೀರ ಗಾಯಗೊಂಡರು. ಆಯುರ್ವೇದ ಕಾಲೇಜು ಬಳಿಯ ತಿರುವಿನಲ್ಲಿ ಈ ಫಾಸ್ಟ್ ಫುಡ್ ಗೂಡಅಂಗಡಿ ಇದ್ದು ವಿವೇಕಾನಂದ ಸರ್ಕಲ್ ಬಳಿಯಿಂದ ಬರುತ್ತಿದ್ದ ಬೊಲೆರೊ ವಾಹನ ಅಂಗಡಿಗೆ ಡಿಕ್ಕಿ ಹೊಡೆದಿದೆ.


ಈ ಸಂದರ್ಭದಲ್ಲಿ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕ ಗಾಂಧಿನಗರ ನಿವಾಸಿ ಪ್ರಸಾದ್ ಎಂಬುವವರು ಅನ್ನವನ್ನು ಬೇಯಿಸುತ್ತಿದ್ದು, ಅವರ ಸ್ನೇಹಿತ ಓರ್ವರು ಹಾಗೂ ಗ್ರಾಹಕರು ಒಬ್ಬರು ಈ ಸಂದರ್ಭದಲ್ಲಿ ಅಂಗಡಿಯೊಳಗೆ ಇದ್ದರು.
ಬೊಲೆರೋ ವಾಹನ ಬಂದು ಡಿಕ್ಕಿ ಹೊಡೆದ ರಭಸಕ್ಕೆ ಅನ್ನ ಬೇಯುತ್ತಿದ್ದ ಪಾತ್ರೆ ಪ್ರಸಾದ್ ರವರ ಮೇಲೆ ಬಿದ್ದು ಮೈಯಲ್ಲಿ ಅಪಾರ ಸುಟ್ಟ ಗಾಯವಾಗಿದ್ದು ಮತ್ತು ಕಾಲು ಜಖಂ ಗೊಂಡು ಗಂಭೀರ ಸ್ಥಿತಿಯಲ್ಲಿ ಸ್ಥಳೀಯರು ಮತ್ತು ಡಿಕ್ಕಿ ಹೊಡೆದ ಬೊಲೆರೋ ವಾಹನದ ಚಾಲಕ ಪಾಲಡ್ಕ ರಾಜೇಶ್   ಎಂಬುವರು ಅದೇ ವಾಹನದಲ್ಲಿ ಕೆವಿಜಿ ಆಸ್ಪತ್ರೆಗೆ ದಾಖಲಿಸಿದರು.


ಘಟನೆ ನಡೆಯುವ ಸಂದರ್ಭ ಗ್ರಾಹಕರು ಇರದಿದ್ದ ಹಿನ್ನಲೆಯಲ್ಲಿ ಭಾರಿ ಅನಾಹುತ ತಪ್ಪಿದಂತಾಗಿದೆ. ಅಂಗಡಿಗೆ ಹಾನಿಯಾಗಿದ್ದು, ಪ್ರಸಾದ್‌ರವರ ದ್ವಿಚಕ್ರ ವಾಹನ ಕೂಡ ಜಖಂಗೊಂಡಿದೆ ಎನ್ನಲಾಗಿದೆ.
ಘಟನೆಯ ಬಗ್ಗೆ ತಿಳಿದ ಸುಳ್ಯ ಪೊಲೀಸರು ಸ್ಥಳಕ್ಕೆ ಧಾವಿಸಿ ಮಾಹಿತಿ ಸಂಗ್ರಹಿಸಿ ಬುಲೆರೋ ವಾಹನ ಚಾಲಕರ ಮೇಲೆ ಕೇಸು ದಾಖಲಿಸಿಕೊಂಡಿರುವುದಾಗಿ ತಿಳಿದುಬಂದಿದೆ.
ಈ ಸಂದರ್ಭ ಅಂಗಡಿಯಲ್ಲಿದ್ದ ಗ್ರಾಹಕರು ಮತ್ತು ಪ್ರಸಾದ್‌ರವರ ಸ್ನೇಹಿತ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.