ಕಂಚಿನ ಪ್ರತಿಮೆಯನ್ನು ಕಣ್ತುಂಬಿಕೊಂಡ ಸಾವಿರಾರು ಮಂದಿ
1837 ರಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಸಿ ಅಮರರಾದ ಸ್ವಾತಂತ್ರ್ಯ ಸಮರ ವೀರ, ಸಂಘಟನಾ ಚತುರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಇಂದು ಸುಳ್ಯಕ್ಕೆ ಆಗಮಿಸಿದಾಗ ಸುಳ್ಯ ಬಸ್ನಿಲ್ದಾಣದ ಬಳಿಯಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು.
ಸಂಪಾಜೆಯಿಂದಾಗಿ ಆಗಮಿಸಿದ ಪ್ರತಿಮೆಯನ್ನು ಬಳಿಕ ಅರಂತೋಡು, ಪೆರಾಜೆ ಮೊದಲಾದ ಕಡೆಗಳಲ್ಲಿ ಸ್ವಾಗತಿಸಿ, ಸುಳ್ಯ ಪೇಟೆ ಆರಂಭಗೊಳ್ಳುವ ಉಬರಡ್ಕ ಕ್ರಾಸ್ನ ಬಳಿ ಸಾವಿರಾರು ಮಂದಿ ಕಾದು ನಿಂತು ಭವ್ಯ ಸ್ವಾಗತ ಕೋರಿದರು.
ಮಹಿಳೆಯರು ಪೂರ್ಣಕುಂಭ ಸ್ವಾಗತದೊಂದಿಗೆ ಸ್ವಾಗತಿಸಿದರೆ, ಕೆದಂಬಾಡಿ ಕುಟುಂಬಸ್ಥರು, ಗೌಡ ಯುವ ಸೇವಾ ಸಂಘದ ಪದಾಧಿಕಾರಿಗಳು ಪುಷ್ಪಾರ್ಚನೆಯೊಂದಿಗೆ ಸ್ವಾಗತ ಮಾಡಿದರು. ಈ ಸಂದರ್ಭದಲ್ಲಿ ಪುತ್ಥಳಿ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಕಿರಣ್ ಬುಡ್ಲೆಗುತ್ತು ಮತ್ತು ಕಾರ್ಯದರ್ಶಿಯವರಿಗೆ ಕೆದಂಬಾಡಿ ಕುಟುಂಬದ ಪರವಾಗಿ ಸ್ನಮಾನಿಸಲಾಯಿತು. ಅಲ್ಲಿಂದ ಕಾಲ್ನಡಿಗೆಯಲ್ಲಿ ಮತ್ತು ವಾಹನ ಜಾಥಾದ ಮೂಲಕ ಸಾವಿರಾರು ಮಂದಿ ಖಾಸಗಿ ಬಸ್ ನಿಲ್ದಾಣದ ಬಳಿಗೆ ರಾಮಯ್ಯ ಗೌಡರ ಪುತ್ಥಳಿಯೊಂದಿಗೆ ಆಗಮಿಸಿದರು. ಅಲ್ಲಿ ಸುಳ್ಯ ಎನ್ನೆಂಸಿಯ ಎನ್ಸಿಸಿ ಕೆಡೆಟ್ಗಳಿಂದ ಗೌರವ ವಂದನೆ ಸಲ್ಲಿಸಲಾಯಿತು.
ಆರಂಭದಲ್ಲಿ ಮಂಗಳೂರು ಆದಿಚುಂಚನಗಿರಿ ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿ ಪುಷ್ಪಾರ್ಚನೆ ಮಾಡಿ ಕಂಚಿನ ಪ್ರತಿಮೆಯನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ಎಸ್.ಅಂಗಾರ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ, ಪ್ರಧಾನ ಕಾರ್ಯದರ್ಶಿ ಡಾ. ರೇಣುಕಾಪ್ರಸಾದ್ ಕೆ.ವಿ., ಗೌಡ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್, ನ.ಪಂ. ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ತಹಶೀಲ್ದಾರ್ ಕು. ಅನಿತಾಲಕ್ಷ್ಮಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ರಾಮಯ್ಯ ಗೌಡರ ಕಂಚಿನ ಪುತ್ಥಳಿ ಆಗಮನವಾದ ತಕ್ಷಣ ಧ್ವಜಾರೋಹಣವನ್ನು ಡಾ. ಕೆ.ವಿ. ಚಿದಾನಂದರವರು ನೆರವೇರಿಸಿದರು.
ಸ್ವಾತಂತ್ರ್ಯ ಹೋರಾಟದ ದ್ಯೋತಕವಾಗಿ ಕೇಸರಿ, ಬಿಳಿ, ಹಸಿರು ಬಣ್ಣದ ಬಲೂನ್ಗಳನ್ನು ಮೂರು ಧರ್ಮಗಳ ಧರ್ಮಗುರುಗಳು ಆಕಾಶಕ್ಕೆ ಹಾರಿಸಿದರು. ಶಾಂತಿಯ ಸಂಕೇತವಾದ ಬಿಳಿ ಪಾರಿವಾಳಗಳನ್ನು ಆಕಾಶಕ್ಕೆ ಹಾರಿಸಲಾಯಿತು. ಕೆದಂಬಾಡಿ ರಾಮಯ್ಯ ಗೌಡ ಪ್ರತಿಮೆಯ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಕಿರಣ್ ಬುಡ್ಲೆಗುತ್ತು ಮತ್ತು ಕಾರ್ಯದರ್ಶಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಂಚಿನ ಪ್ರತಿಮೆಗೆ ಕೂಜುಗೋಡು ಕುಟುಂಬದ ಪರವಾಗಿ ಬೃಹತ್ ಹೂವಿನ ಹಾರವನ್ನು ಹಾಕಲಾಯಿತು. ಈ ವಿಶೇಷ ಸಂದರ್ಭದಲ್ಲಿ ಸಾವಿರಾರು ಮಂದಿ ಭಾಗವಹಿಸಿ, ವಿಶೇಷ ಕ್ಷಣವನ್ನು ಕಣ್ತುಂಬಿಕೊಂಡರು.
ಕಂಚಿನ ಪ್ರತಿಮೆ ಆಗಮನಕ್ಕಿಂತ ಮೊದಲು ಸುಳ್ಯದ ಎನ್ನೆಂಸಿಯ ವಿದ್ಯಾರ್ಥಿಗಳು ಅಭಿನಯಿಸಿದ ಲೋಕೇಶ್ ಊರುಬೈಲು ನಿರ್ದೇಶನದ ಅಮರ ಸುಳ್ಯದ ಸ್ವಾತಂತ್ರ್ಯ ಸಮರ 1837 ನಾಟಕ ಪ್ರದರ್ಶನಗೊಂಡಿತು.