ವಿದ್ಯಾರ್ಥಿನಿ ಜತೆಗೆ ಮಾತನಾಡಿದ ಆರೋಪ : ವಿದ್ಯಾರ್ಥಿಗೆ ಥಳಿತ

0

 

ಏಟು ತಿಂದ ವಿದ್ಯಾರ್ಥಿಯಿಂದ ಪೋಲೀಸ್ ದೂರು : ಏಳು ಮಂದಿಯ ಮೇಲೆ ಪ್ರಕರಣ ದಾಖಲು

ಸುಳ್ಯ ಕೊಡಿಯಾಲಬೈಲು ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಹಾಗೂ ಅದೇ ಕಾಲೇಜಿನ ಮಹಮ್ಮದ್ ಸನೀಫ್ (19) ಎಂಬ ವಿದ್ಯಾರ್ಥಿ ಮಾತನಾಡುತ್ತಿದ್ದಾರೆಂಬ ಕಾರಣಕ್ಕೆ ಆ ಯುವಕನ ಮೇಲೆ ಹಲ್ಲೆ ನಡೆಸಿದ ಯುವಕರ ಮೇಲೆ ಸುಳ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆಗೊಳಗಾದ ವಿದ್ಯಾರ್ಥಿ ಕೊಡಿಯಾಲಬೈಲು ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಕಾಂ ಪದವಿ ಓದುವ ಮಹಮ್ಮದ್ ಸನೀಫ್ ಪೋಲೀಸರಿಗೆ ದೂರು ನೀಡಿದ್ದು,
ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ನನ್ನ ಸ್ನೇಹಿತೆಯಾಗಿದ್ದು, ಅವಳ ಒಟ್ಟಿಗೆ ಮಾತನಾಡುವುದನ್ನು ಕೆಲವರಿಗೆ ಇಷ್ಟವಿಲ್ಲದ ಕಾರಣ ಆ. 30ರಂದು ಬೆಳಗ್ಗೆ 10:30 ಗಂಟೆಗೆ ನಾನು ಕ್ಲಾಸ್ ರೂಂ ನಲ್ಲಿರುವಾಗ ನಮ್ಮ ಕಾಲೇಜಿನಲ್ಲಿ ಓದುತ್ತಿದ್ದ ಅಂತಿಮ ವರ್ಷದ ಬಿಬಿಎ ವಿದ್ಯಾರ್ಥಿಗಳಾದ ದೀಕ್ಷಿತ್ ಮತ್ತು ಧನುಷ್ ಎಂಬವರು ಕ್ಲಾಸ್ ನಿಂದ ನನ್ನನ್ನು ಕರೆದು ಮಾತನಾಡಲು ಇದೆ ಎಂದು ಹೇಳಿ ಕಾಲೇಜಿನ ಗ್ರೌಂಡ್ ಗೆ ಕರೆದುಕೊಂಡು ಹೋಗಿ ಅಲ್ಲೇ ಇದ್ದ ನಮ್ಮ ಕಾಲೇಜಿನ ಇತರ ವಿದ್ಯಾರ್ಥಿಗಳಾದ ಪ್ರಜ್ವಲ್, (ಅಂತಿಮ ವರ್ಷದ ಬಿಬಿಎ) ತನುಜ್ (ಅಂತಿಮ ವರ್ಷದ ಬಿಕಾಂ) ಅಕ್ಷಯ್ (ದ್ವಿತಿಯ ವರ್ಷದ ಬಿಕಾಂ) ಮೋಕ್ಷಿತ್ (ಅಂತಿಮ ವರ್ಷದ ಬಿಕಾಂ) ಹಾಗೂ ಸುಳ್ಯದ ಎನ್ ಎಂಸಿ ಕಾಲೇಜಿನ ಗೌತಮ್ ಮತ್ತು ಇತರರು ಕಾಲರ್ ಪಟ್ಟಿ ಹಿಡಿದು ನೀನು ಆ ಹುಡುಗಿ ಜತೆಗೆ ಯಾಕೆ ಮಾತನಾಡುತ್ತಿಯಾ ಎಂದು ಹೇಳುತ್ತಾ, ಅವರ ಕೈಯಲ್ಲಿದ್ದ ದೊಣ್ಣೆಯಿಂದ ನನ್ನ ಬೆನ್ನಿಗೆ ಹೊಡೆದು ನೆಲಕ್ಕೆ ದೂಡಿಹಾಕಿ ಕಾಲಿನಿಂದ ತುಳಿದು ಇನ್ನೂ ಮುಂದಕ್ಕೆ ಮಾತನಾಡಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಕ್ಲಾಸ್ ಗೆ ವಾಪಸ್ ಹೋಗಿ ತಮ್ಮ ಮನೆಯವರಿಗೆ ವಿಷಯ ತಿಳಿಸಿ ಹೊಡೆತದ ನೋವಿನಿಂದ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿದ್ದೇನೆ ಹಾಗೂ ನನ್ನ ಮೇಲೆ ಹಲ್ಲೆ ಮಾಡಿದ ಆರೋಪಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ವಿನಂತಿಸಿಕೊಂಡಿದ್ದಾರೆ

ಸನೀಫ್ ನೀಡಿದ ದೂರಿನಂತೆ ಪೋಲೀಸರು ದೀಕ್ಷಿತ್, ಧನುಷ್ , ಪ್ರಜ್ವಲ್, ತನುಜ್, ಅಕ್ಷಯ್, ಮೋಕ್ಷಿತ್, ಗೌತಮ್ ಹಾಗೂ ಇತರರ ಮೇಲೆ
143.147.148.323.324.506. ಜೊತೆಗೆ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇವರಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ ಎನ್.ಎಂ.ಸಿ. ವಿದ್ಯಾರ್ಥಿ ಯಾಗಿದ್ದು ಉಳಿದವರೆಲ್ಲ ಸುಳ್ಯ ಡಿಗ್ರಿ ಕಾಲೇಜಿನ ವಿದ್ಯಾರ್ಥಿಗಳೆಂದು ತಿಳಿದು ಬಂದಿದೆ.