ಎಡಮಂಗಲ: ಕೊಡಲಿಯಿಂದ ಹಲ್ಲೆ – ಇತ್ತಂಡಗಳು ಆಸ್ಪತ್ರೆಗೆ ದಾಖಲು

0

 

ಎಡಮಂಗಲ ಗ್ರಾಮದ ಗಂಡಿತ್ತಡ್ಕ ಎಂಬಲ್ಲಿ ಕೊಡಲಿಯಿಂದ ಹಲ್ಲೆ ನಡೆಸಿಕೊಂಡು ಇತ್ತಂಡಗಳು ಆಸ್ಪತ್ರೆ ಸೇರಿರುವ ಘಟನೆ ಸೆ.2 ರಂದು ವರದಿಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಾಗೇಶ್ ಗಂಡಿತ್ತಡ್ಕರವರು ನೀಡಿದ ಪೊಲೀಸ್ ದೂರಿನಲ್ಲಿ ನಮ್ಮ ಜಮೀನಿನಲ್ಲಿ ನನ್ನ ದೊಡ್ಡಪ್ಪ ಶೂದ್ರಪ್ಪ ನಾಯ್ಕ ಎಂಬವರೊಂದಿಗೆ ನಾನು ನನ್ನ ಪತ್ನಿ ರೇವತಿ ಕೃಷಿ ಕಾರ್ಯವನ್ನು ಮಾಡುತ್ತಿರುವ ಸಂದರ್ಭದಲ್ಲಿ ನೆರೆಯವರಾದ ಸುಂದರ ನಾಯ್ಕ ಮತ್ತು ಅವರ ಪತ್ನಿ ಸರಸ್ವತಿ ಎಂಬವರು ಆಗಮಿಸಿ ಕೆಲಸಕ್ಕೆ ಆಕ್ಷೇಪ ವ್ಯಕ್ತಪಡಿಸಿ ನನ್ನನ್ನು ದೂಡಿ ಹಾಕಿ ಶೂದ್ರಪ್ಪ ನಾಯ್ಕರಿಗೆ ಮತ್ತು ನನ್ನ ಪತ್ನಿ ರೇವತಿ ಎಂಬವರ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಹಲ್ಲೆಯಿಂದ ಶೂದ್ರಪ್ಪ ನಾಯ್ಕ ಮತ್ತು ರೇವತಿಯವರ ತಲೆಗೆ ಗಾಯವಾಗಿದ್ದು, ಕಡಬ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿಸಿದ್ದಾರೆ.


ಸುಂದರ ನಾಯ್ಕ ಮತ್ತು ಅವರ ಪತ್ನಿ ಸರಸ್ವತಿಯವರು ಕೂಡ ಪೋಲೀಸರಿಗೆ ದೂರು ನೀಡಿದ್ದು ತಮ್ಮ ಮೇಲೆ ಶೂದ್ರಪ್ಪ ನಾಯ್ಕ, ನಾಗೇಶ್ ಮತ್ತು ಅವರ ಸಂಬಂಧಿ ದಯಾನಂದ ಎಂಬವರು ತಮ್ಮ ಮೇಲೆ ಕತ್ತಿ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದು, ತನ್ನ ತಲೆಗೆ, ತನ್ನ ಪತ್ನಿ ಕೈಗೆ ಗಾಯವಾಗಿರುವುದಾಗಿ ಆರೋಪಿಸಿದ್ದಾರೆ.
ಸುಂದರ ನಾಯ್ಕ ಮತ್ತು ಅವರ ಪತ್ನಿ ಸರಸ್ವತಿಯವರು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿ ತಿಳಿದುಬಂದಿದೆ.
ಪೊಲೀಸರು ಎರಡು ತಂಡಗಳಿಂದ ದೂರು ಸ್ವೀಕರಿಸಿ ತನಿಖೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.