ಸುಳ್ಯ : ಖಾಸಗಿ ಬಸ್ಸು ಮತ್ತು ಆಟೋ ಚಾಲಕರ ನಡುವೆ ಉಂಟಾಗುವ ಪಾರ್ಕಿಂಗ್ ತಕರಾರಿನ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ವಾಹನ ಚಾಲಕ ಮಾಲಕರ ಸಭೆ

0

 

ಪರಸ್ಪರ ಸಹಕಾರದೊಂದಿಗೆ ಸಮಸ್ಯೆ ಬಗೆಹರಿಸಿಕೊಳ್ಳಲು ಎಸ್.ಐ. ಎದುರಲ್ಲಿ ತೀರ್ಮಾನ

ಸುಳ್ಯದಲ್ಲಿರುವ ಖಾಸಗಿ ಬಸ್ಸುಗಳು, ಸರ್ವಿಸ್ ವ್ಯಾನ್ ಗಳು, ಜೀಪು ಮತ್ತು ಆಟೋರಿಕ್ಷಾಗಳ ಚಾಲಕ ಮಾಲಕರಲ್ಲಿ ತಮ್ಮ ತಮ್ಮ ವಾಹನಗಳಿಗೆ ಪ್ರಯಾಣಿಕರನ್ನು ಹತ್ತಿಸುವ ಮತ್ತು ವಾಹನಗಳನ್ನು ಪಾರ್ಕ್ ಮಾಡುವ ವಿಷಯಕ್ಕೆ ಸಂಬಂಧಿಸಿ ಇರುವ ಸಮಸ್ಯೆಗಳನ್ನು ಪರಸ್ಪರ ಸಮಾಲೋಚನೆಯೊಂದಿಗೆ ಇತ್ಯರ್ಥಪಡಿಸಿಕೊಳ್ಳ ಲು ನಿರ್ಧರಿಸಲಾಗಿದೆ.


ಖಾಸಗಿ ಬಸ್ ಗಳು, ವ್ಯಾನ್ ಗಳು, ಜೀಪುಗಳು ಮತ್ತು ರಿಕ್ಷಾ ಚಾಲಕರ ಮಧ್ಯೆ ವಿವಾದ ಉಂಟಾದಾಗ ಚರ್ಚೆ ಮತ್ತು ಸಣ್ಣ ಪುಟ್ಟ ಕಲಹಗಳು ನಡೆದು ಪೊಲೀಸ್ ಠಾಣೆಯವರೆಗೆ ಹೋಗುತ್ತಿದ್ದವು.

ನಂತರ ಠಾಣೆಯಲ್ಲಿ ಮಾತುಕತೆಯ ಮೂಲಕ ಇತ್ಯರ್ಥಪಡಿಸಿಕೊಂಡು ಬರಲಾಗುತ್ತಿತ್ತು.
ಇದೀಗ ಮತ್ತೆ ಅದೇ ರೀತಿಯ ಘಟನೆಗಳು ಸುಳ್ಯ ಆಟೋ ಚಾಲಕರ ಮತ್ತು ಖಾಸಗಿ ಬಸ್ಸು ಚಾಲಕ ಮಾಲಕರ ನಡುವೆ ಸಂಭವಿಸಿ ಇದರ ಪರಿಹಾರಕ್ಕಾಗಿ ಆಗ್ತಹಿಸಿ ಸೆಪ್ಟೆಂಬರ್ 15ರಂದು ಸುಳ್ಯದಲ್ಲಿ ಪ್ರತಿಭಟನೆ ನಡೆಸಲು ಆಟೋ ರಿಕ್ಷಾ ಚಾಲಕರು ತೀರ್ಮಾನ ಕೈಗೊಂಡಿದ್ದರು.

ಪೋಲೀಸರಿಗೂ ತಿಳಿಸಿದ್ದರು. ಆ ಹಿನ್ನೆಲೆಯಲ್ಲಿ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ದಿಲೀಪ್ ರವರು ಇಂದು ಸುಳ್ಯದ ಆಟೋ ಚಾಲಕ ಸಂಘದ ಮುಖ್ಯಸ್ಥರನ್ನು, ಖಾಸಗಿ ಬಸ್ , ಗೂಡ್ಸ್ ವಾಹನ ಮತ್ತು ಟೆಂಪೋ, ಟೂರಿಸ್ಟ್ ಕಾರು ಮತ್ತು ವ್ಯಾನು ಚಾಲಕರ ಮಾಲಕರನ್ನು ಸುಳ್ಯ ಠಾಣೆಗೆ ಕರೆಸಿ ಸಭೆಯನ್ನು ನಡೆಸಿ ಚರ್ಚಿಸಿದರು.
ಬಸ್ ಮಾಲಕರ ಪರವಾಗಿ ಮೋಹನ್, ರಿಕ್ಷಾ ಚಾಲಕರ ಪರವಾಗಿ ಸಂಘದ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ, ಬಿ.ಎಂ.ಎಸ್. ಅಧ್ಯಕ್ಷ ಗೋಪಾಲಕೃಷ್ಣ ಭಟ್, ಟೂರಿಸ್ಟ್ ಕಾರು, ವ್ಯಾನ್ ಚಾಲಕರ ಸಂಘದ ಅಧ್ಯಕ್ಷ ಜಯಂತ್ ಹರ್ಲಡ್ಕ, ಗೂಡ್ಸ್ ವಾಹನ ಚಾಲಕರ ಸಂಘದವರು, ಸಂಘಟನೆಗಳ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು.

 


ಸಭೆಯಲ್ಲಿ ತುಂಬ ಹೊತ್ತು ಚರ್ಚೆ, ವಾದ, ಪ್ರತಿವಾದಗಳ ನಡೆದ ಬಳಿಕ ಎಸ್. ಐ. ದಿಲೀಪ್ ರವರ ಮಾರ್ಗದರ್ಶನದಂತೆ ಮುಂದೆ ಪರಸ್ಪರ ಹೊಂದಾಣಿಕೆಯ ಮೂಲಕ ಇರುವುದಾಗಿ ಸಭೆಯಲ್ಲಿ ಭಾಗವಹಿಸಿದ ವಾಹನ ಚಾಲಕಮಾಲಕ ಸಂಘದ ಮುಖಂಡರು ಹೇಳಿಕೊಂಡರು.
ವೇದಿಕೆಯಲ್ಲಿ ಕ್ರೈಂ ವಿಭಾಗದ ಎಸ್ ಐ , ಹಾಗೂ ಪ್ರೊಬೆಷನರಿ ಎಸ್ ಐ ಸರಸ್ವತಿ ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು.
ಪೊಲೀಸ್ ಸಿಬ್ಬಂದಿ ಧನೇಶ್ ಸ್ವಾಗತಿಸಿದರು.