ಎಲಿಮಲೆ: ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ

0

 

 

“ಆತ್ಮಹತ್ಯೆಗೆ ಮುಂದಾಗುವ ವ್ಯಕ್ತಿ ಯಾವುದಾದರೂ ರೂಪದಲ್ಲಿ ಸೂಚನೆ ನೀಡಿಯೇ ಇರುತ್ತಾನೆ. ಇದನ್ನು ಗಮನಿಸುವ ತಾಳ್ಮೆ, ಸೂಕ್ಷ್ಮ ಮನಸ್ಸು, ತಮ್ಮ ಸುತ್ತಮುತಲಿನದರ ಬಗ್ಗೆ ಕೊಂಚ ಕಾಳಜಿ ಇದ್ದರೆ ಸಾಕು, ಅದೆಷ್ಟೋ ಆತ್ಮಹತ್ಯೆಗಳು ತಪ್ಪಿಸುತ್ತವೆ” ಎಂದು ದೇವಚಳ್ಳ ಗ್ರಾಮದ ಸಮುದಾಯ ಆರೋಗ್ಯಾಧಿಕಾರಿಗಳಾದ ಕುಮಾರಿ ಮೋನಿಷ ಅವರು ಹೇಳಿದರು. ಇವರು ಆ.18ರಂದು ಸರಕಾರಿ ಪ್ರೌಢಶಾಲೆ ಎಲಿಮಲೆ ಹಾಗೂ ಉಪ ಕೇಂದ್ರ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಎಲಿಮಲೆ ಇದರ ಜಂಟಿ ಆಶ್ರಯದಲ್ಲಿ ಸರಕಾರಿ ಪ್ರೌಢಶಾಲೆ ಎಲಿಮಲೆಯಲ್ಲಿ ನಡೆದ “ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ” ಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನ್ನಾಡಿದರು.
” ಪರೀಕ್ಷೆಯಲ್ಲಿ ಕಡಿಮೆ ಅಂಕ ಬರುವುದು, ಹದಿಹರೆಯದ ಸಮಸ್ಯೆಗಳು, ಪ್ರೀತಿ- ಪ್ರಣಯದ ಭ್ರಮಾಲೋಕ, ನಂಬಿಕೆದ್ರೋಹ, ಮಾದಕ ಪದಾರ್ಥಗಳ ಸೇವನೆ, ಮೊಬೈಲ್ ಗೇಮ್ ಗಳ ದಾಸರಾಗುವುದು, ಪೋಷಕರು ಓದಲು ಬರೆಯಲು ಹೇಳಿದಾಗ ಅಥವಾ ಟಿವಿ ನೋಡಬಾರದೆಂದು ಸೂಚಿಸಿದಾಗ ಖಿನ್ನತೆಗೊಳಗಾಗುವುದು ಮುಂತಾದವುಗಳಿಂದ ವಿದ್ಯಾರ್ಥಿಗಳು ಮಾನಸಿಕ ಒತ್ತಡಕ್ಕೊಳಗಾಗುತ್ತಾರೆ. ಇದರಿಂದ ಹೊರಬರಲು ವಿದ್ಯಾರ್ಥಿಗಳು ನೈತಿಕತೆ, ಸಕಾರಾತ್ಮಕ ಮನೋಭಾವ, ಕ್ರೀಡಾ ಚಟುವಟಿಕೆ, ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡಿರಬೇಕು. ಮೊಬೈಲ್ ಗಳನ್ನು ಹಿತಮಿತವಾಗಿ ಬಳಸುವ ಜತೆಗೆ ಮಾದಕ ಪದಾರ್ಥಗಳಿಂದ ದೂರವಿರುವುದರ ಮೂಲಕ ಆತ್ಮಹತ್ಯೆಗಳನ್ನು ತಪ್ಪಿಸಬಹುದು” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಈ ಸಮಾರಂಭದಲ್ಲಿ ದೇವಚಳ್ಳ ಗ್ರಾಮ ಪಂಚಾಯತ್ ನ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕಿ ಪ್ರಪುಲ್ಲಾ ಶ್ರೀಕಾಂತ್ ಪಾರೆಪ್ಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭ ಶಾಲಾ ಮಕ್ಕಳಿಗೆ ಸರಕಾರದಿಂದ ಕೊಡಮಾಡಿದ ಉಚಿತ ಸಮವಸ್ತ್ರವನ್ನು ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿಎಂಸಿ ಕಾರ್ಯಾಧ್ಯಕ್ಷರಾದ ಜಯಂತ್ ಹರ್ಲಡ್ಕ ರವರು ವಹಿಸಿದ್ದರು. ಶಾಲಾ ಮುಖ್ಯಶಿಕ್ಷಕಿ ಸಂಧ್ಯಾ ಕೆ., ಎಲಿಮಲೆ ಉಪಕೇಂದ್ರದ ಆಶಾ ಕಾರ್ಯಕರ್ತೆ ಶ್ರೀಮತಿ ನಿರ್ಮಲಾ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ತಿರುಮಲೇಶ್ವರಿ ಯು.ಎಸ್. ಸ್ವಾಗತಿಸಿ, ಶಿಕ್ಷಕರಾದ ವಿರುಪಾಕ್ಷಪ್ಪ ಎಂ.ಪಿ. ಇವರು ಧನ್ಯವಾದ ಅರ್ಪಿಸಿದರು. ಶಿಕ್ಷಕರಾದ ಮುರಳೀಧರ ಪುನುಕುಟ್ಟಿ ಕಾರ್ಯಕ್ರಮ ನಿರೂಪಿಸಿದರು.