ಹಿರಿಯ ಸಾಮಾಜಿಕ ಧುರೀಣ ಪಿ.ಬಿ.ದಿವಾಕರ ರೈಯವರಿಗೆ ಗಾಂಧಿಸ್ಮೃತಿ ಪ್ರಶಸ್ತಿ

0

 

ಸುಳ್ಯದ ಯುವಜನ ಸಂಯುಕ್ತ ಮಂಡಳಿ – ಯುವ ಜನ ಸೇವಾ ಸಂಸ್ಥೆ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಕೊಡಮಾಡುವ ಗಾಂಧಿಸ್ಮೃತಿ ಪ್ರಶಸ್ತಿಗೆ ಹಿರಿಯ ಸಾಮಾಜಿಕ ಧುರೀಣ ಪಿ.ಬಿ.ದಿವಾಕರ ರೈಯವರನ್ನು ಆಯ್ಕೆ ಮಾಡಲಾಗಿದ್ದು, ಅ.2 ರಂದು ಯುವಜನ ಸಂಯುಕ್ತ ಮಂಡಳಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಯುವಜನ ಸೇವಾ ಸಂಸ್ಥೆ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ ತಿಳಿಸಿದ್ದಾರೆ.

ಸೆ.24 ರಂದು ಯುವಜನ ಸಂಯುಕ್ತ ಮಂಡಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ವಿವರ ನೀಡಿದರು.

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಚಿಂತನೆ ಹಾಗೂ ದುಡಿಮೆ ಇಂದಿಗೂ ಪ್ರಸ್ತುತ. ನಮ್ಮ ಬದುಕಿಗೆ ಆದರ್ಶವಾಗಿದ್ದು, ಇದನ್ನು ಆಗಾಗ ನೆನಪಿಸುವುದು ಅರ್ಥಪೂರ್ಣವೆಂದೂ ತಿಳಿದು ನಮ್ಮ ಸಂಸ್ಥೆಗಳು 2020 ರಿಂದ ಈ ಕಾರ್ಯಕ್ರಮವನ್ನು ಏರ್ಪಡಿಸುತ್ತದೆ. ಗಾಂಧಿಚಿಂತನೆಯ ಒಂದಷ್ಟು ನೆನಪನ್ನು ಹಂಚಿಕೊಳ್ಳುತಾ ರಾಷ್ಟ್ರಪಿತನ ಹೆಸರಲ್ಲಿ ಅವರ ಜೀವನದ ಆದರ್ಶಗಳಲ್ಲಿ ತನ್ನ ಜೀವನ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ಸಾಧಕರಾದ ಪಿ.ಬಿ.ದಿವಾಕರ ರೈಯವರನ್ನು ಗೌರವಿಸುತ್ತೇವೆ.

ಈ ಬಾರಿಯ ಗಾಂಧಿಜಯಂತಿ ಆಚರಣೆಯನ್ನು ಪದ್ಮಶ್ರೀ ಪುರಸ್ಕೃತರಾದ ಡಾ.ಗಿರೀಶ್ ಭಾರದ್ವಾಜ್ ಉದ್ಘಾಟಿಸಿ, ಗಾಂಧಿ ಸ್ಮೃತಿ ಪ್ರಶಸ್ತಿ ಪ್ರದಾನ ಮಾಡುವರು. ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ.ಆರ್. ಗಂಗಾಧರ್ ಗಾಂಧಿ ಚಿಂತನೆಯ ಕುರಿತು ಮಾತನಾಡಲಿದ್ದಾರೆ. ಯುವಜನ ಸೇವಾ ಸಂಸ್ಥೆ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ ಅಧ್ಯಕ್ಷತೆ ವಹಿಸಲಿದ್ದು, ಮಂಡಳಿ ಅಧ್ಯಕ್ಷ ತೇಜಸ್ವಿ ‌ಕಡಪಳ ಶುಭಾಂಶನೆ ಗೈಯಲಿದ್ದಾರೆ.
ಸಭಾ ಕಾರ್ಯಕ್ರಮ ಆರಂಭಕ್ಕೂ ಮೊದಲು ಸುನಾದ ಸಂಗೀತ ಶಾಲೆಯ ವಿದ್ವಾನ್ ಕಾಂಚನ ಎ. ಈಶ್ವರ ಭಟ್ ಶಿಷ್ಟರಿಂದ ಭಕ್ತಿಗಾನ ಸುಧೆ ನಡೆಯುವುದು ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಯುವಜನ ಸೇವಾ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಆರ್.ಕೆ. ಮಹಮ್ಮದ್, ಕೋಶಾಧಿಕಾರಿ ಅನಿಲ್ ಪೂಜಾರಿಮನೆ, ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ತೇಜಸ್ವಿ ಕಡಪಳ, ಪ್ರಧಾನ ಕಾರ್ಯದರ್ಶಿ ಸಂಜಯ ನೆಟ್ಟಾರು, ಉಪಾಧ್ಯಕ್ಷ ಪ್ರವೀಣ್ ಕುಮಾರ್ ಜಯನಗರ, ವಿಜಯಕುಮಾರ್ ಉಬರಡ್ಕ, ಶ್ರೀಮತಿ ನಮಿತಾ, ದಿನೇಶ್ ಹಾಲೆಮಜಲು ಇದ್ದರು.