ಬೃಹತ್ ಕಾಲ್ನಡಿಗೆ ಜಾಥಾದಲ್ಲಿ ನೂರಾರು ಮಂದಿ ಭಾಗಿ
ಪೈಗಂಬರ್ ಮೊಹಮ್ಮದ್ ರವರ ಜನ್ಮದಿನಾಚರಣೆಯ ಅಂಗವಾಗಿ ಆಚರಿಸಲ್ಪಡುವ ಈದ್ ಮಿಲಾದ್ ಹಬ್ಬದ ಅಂಗವಾಗಿ ಸುಳ್ಯ ತಾಲೂಕು ಮೀಲಾದ್ ಸಮಿತಿ ವತಿಯಿಂದ ಹುಬ್ಬುರಸೂಲ್- ಪ್ರವಾದಿ ಸಂದೇಶ ಕಾರ್ಯಕ್ರಮ ಗಾಂಧಿನಗರ ಪೆಟ್ರೋಲ್ ಬಂಕ್ ಮುಂಭಾಗದ ಸಭಾ ವೇದಿಕೆಯಲ್ಲಿ ಅಕ್ಟೋಬರ್ 9 ರಂದು ನಡೆಯಿತು.
ಸಂಜೆ 5 ಗಂಟೆಗೆ ಮೊಗರ್ಪಣೆ ಮಾಂಬ್ಳಿ ದರ್ಗಾ ವಠಾರದಲ್ಲಿ ಪ್ರಾರ್ಥನೆಯ ಮೂಲಕ ಬೃಹತ್ ಕಾಲ್ನಡಿಗೆ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸ್ಥಳೀಯ ಮಸ್ಜಿದ್ ಮುದರ್ರಿಸ್ ಹಾಫಿಲ್ ಸೌಕತ್ ಅಲಿ ಸಕಾಫಿ ಪ್ರಾರ್ಥನೆ ನೆರವೇರಿಸಿ ಪ್ರವಾದಿಯವರ ತತ್ವ ಆದರ್ಶ ಮತ್ತು ಸಿದ್ಧಾಂತಗಳನ್ನು ಅನುಸರಿಸಿಕೊಂಡು ಜೀವನ ನಡೆಸಲು ಕರೆ ನೀಡಿದರು.
ಸ್ಥಳೀಯ ಮಸೀದಿ ಕಮಿಟಿ ಅಧ್ಯಕ್ಷ ಹಾಜಿ ಜಿ ಇಬ್ರಾಹಿಂ ಸೀಫುಡ್ ಸಂಘಟಕರಿಗೆ ದ್ವಜವನ್ನು ಹಸ್ತಾಂತರಿಸಿದ ಬಳಿಕ ರ್ಯಾಲಿ ಪ್ರಾರಂಭಗೊಂಡಿತು.
ಜಾಥಾದಲ್ಲಿ ತಾಲೂಕಿನ ವಿವಿಧ ಭಾಗಗಳಿಂದ ಬಂದಿದ್ದ ನೂರಾರು ವಿದ್ಯಾರ್ಥಿಗಳ ಆಕರ್ಷಕ ದಫ್ ಪ್ರದರ್ಶನ, ಮತ್ತು ಸ್ಕೌಟ್ ವಿದ್ಯಾರ್ಥಿಗಳ ಪಥಸಂಚಲನ ಆಕರ್ಷಣೆಯಾಗಿತ್ತು.
ಯುವಕರ ತಂಡವು ಪೈಗಂಬರ್ ಕೀರ್ತನೆಗಳನ್ನು ಹಾಡಿ ಮೆರಗು ನೀಡಿದರು.
ನಂತರ ಗಾಂಧಿನಗರ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಖ್ಯಾತ ಕವ್ವಾಲಿ, ಬುರ್ದಾ , ನಾಥ್ ಗಾಯನ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ನಂತರ ನಡೆದ ಪ್ರವಾದಿ ಸಂದೇಶ ಪ್ರಭಾಷಣ ಕಾರ್ಯಕ್ರಮದಲ್ಲಿ ಖ್ಯಾತವಾಗ್ಮಿ ಸಿರಾಜುದ್ದೀನ್ ಸಕಾಫಿ ಕನ್ಯಾನ ಪೈಗಂಬರ್ ರವರ ಜೀವನ ಚರಿತ್ರೆಯ ಬಗ್ಗೆ ಮಾತನಾಡಿದರು.
ಹಿರಿಯ ಪಂಡಿತರು ಅಸ್ಸಯ್ಯದ್ ಜೈನುಲ್ ಆಬಿದೀನ್ ತಂಗಳ್ ದುಗ್ಗಲಡ್ಕ ಪ್ರಾರ್ಥನಾ ಕಾರ್ಯಕ್ರಮಕ್ಕೆ ನೇತೃತ್ವ ವಹಿಸಿ ಇಸ್ಲಾಮಿನ ಮಹತ್ವ ಮತ್ತು ತತ್ವಗಳನ್ನು ಯಾವ ರೀತಿ ಒಳಗೊಂಡು ಯುವ ಸಮುದಾಯವು ಜೀವನ ನಡೆಸಬೇಕೆಂಬುದರ ಬಗ್ಗೆ ಹಿತವಚನವನ್ನು ನೀಡಿದರು. ಶಾಂತಿದೂತ ಮಹಮ್ಮದ್ ಪೈಗಂಬರ ಹಾದಿಯನ್ನು ಅನುಸರಿಸಿದರೆ ಎಲ್ಲಿಯೂ ಕೂಡ ಅಶಾಂತಿ,ಹಿಂಸೆ ನಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಮುಖಂಡರುಗಳಾದ ಟಿ ಎಂ ಶಹೀದ್, ಹಾಜಿ ಮುಸ್ತಫ ಜನತಾ ಕೆ ಎಂ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.
ವೇದಿಕೆಯಲ್ಲಿ ಮುಖಂಡರುಗಳಾದ ಪಿ ಎ ಮೊಹಮ್ಮದ್, ಜಿ ಕೆ ಹಮೀದ್ ಕಲ್ಲುಗುಂಡಿ, ಎಸ್ ಸಂಶುದ್ದೀನ್ ಅರಂಬೂರು, ಅಡ್ವಕೇಟ್ ಪವಾಜ್ ಕನಕಮಜಲು, ಅಬೂಬಕ್ಕರ್ ಸಿದ್ದೀಕ್ ಕಟ್ಟೆಕಾರ್ಸ್, ಹನೀಫ್ ನಾವೂರು,
ಕಾರ್ಯಕ್ರಮದ ಸಂಚಾಲಕರಾದ ಮಸೂದ್ ಅಚ್ಚು, ಆರ್ ಕೆ ಮಹಮ್ಮದ್, ಶರೀಫ್ ಕಂಠಿ, ಸಿದ್ದಿಕ್ ಕೊಕ್ಕೋ, ನವಾಜ್ ಪಂಡಿತ್, ಜುನೈದ್ ಎನ್ ಎ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಮುಸಲ್ಮಾನ ಬಾಂಧವರು ಭಾಗವಹಿಸಿದ್ದರು.
ಸಂಚಾಲಕ ಆರ್ ಕೆ ಮಹಮ್ಮದ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕೊನೆಯಲ್ಲಿ ಸಾರ್ವಜನಿಕ ಅನ್ನದಾನ ಕಾರ್ಯಕ್ರಮ ನಡೆಯಿತು.