ಸುಳ್ಯ ಗಾಂಧಿನಗರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಎಸ್ಡಿಎಂಸಿ ಸಮಿತಿ ಊರ್ಜಿತದಲ್ಲಿದೆ. ಈ ಸಮಿತಿ ರದ್ದಾಗಿದೆ ಎಂಬುದು ಸರಿಯಲ್ಲ. ಶಾಸಕ ಎಸ್. ಅಂಗಾರ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಯ ಅವಧಿ ಇನ್ನೂ ಮೂರು ತಿಂಗಳು ಇದೆ ಎಂದು ಕರ್ನಾಟಕ ಪಬ್ಲಿಕ್ ಸ್ಕೂಲ್ನ ಎಸ್ಡಿಎಂಸಿ ಉಪಾಧ್ಯಕ್ಷ ಹಾಗು ಕಾರ್ಯಾಧ್ಯಕ್ಷ ಪ್ರವೀಣ್ ನಾಯಕ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಾಥಮಿಕ ಹಾಗು ಪ್ರೌಢ ಶಾಲೆಗಳ ಮೇಲುಸ್ತುವಾರಿ ಸಮಿತಿ ರದ್ದಾಗಿದ್ದರೂ, ಪ್ರಾಥಮಿಕ, ಪ್ರೌಢ ಶಾಲೆ ಹಾಗು ಪದವಿಪೂರ್ವ ವಿಭಾಗ ಸೇರಿ ಇಡೀ ಶಾಲೆಗೆ ಶಾಸಕರ ಅಧ್ಯಕ್ಷತೆಯಲ್ಲಿರುವ ಸಮಿತಿ ಊರ್ಜಿತದಲ್ಲಿದೆ. ಇದೀಗ ಸಮಿತಿ ರದ್ದಾಗಿದೆ ಎಂದು ಪ್ರಚಾರ ಮಾಡಲಾಗುತಿದೆ. ಇದೀಗ ಶಾಲೆಯಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳಿಗೆ, ಸಭೆಗಳ ಬಗ್ಗೆ ಸಮಿತಿ ಸದಸ್ಯರಿಗೆ ಯಾವುದೇ ಮಾಹಿತಿ ನೀಡುವುದಿಲ್ಲ ಮತ್ತು ಒಂದು ವರ್ಷದಿಂದ ಎಸ್ಡಿಎಂಸಿ ಸಭೆ ಕರೆಯಲಿಲ್ಲ. ಹೊಸತಾಗಿ ಎಸ್ಡಿಎಂಸಿ ಸಮಿತಿ ರಚಿಸುವುದಿದ್ದರೆ ನಮ್ಮದು ಯಾವುದೇ ಆಕ್ಷೇಪ ಇಲ್ಲ. ಕೂಡಲೇ ಸಮಿತಿ ರಚನೆಯಾಗಲಿ, ಅಥವಾ ಇರುವ ಸಮಿತಿಯ ಸಭೆ ನಡೆಸಿ ಪಬ್ಲಿಕ್ ಸ್ಕೂಲ್ನ ಆಗು ಹೋಗುಗಳ ಬಗ್ಗೆ ಚರ್ಚೆ ನಡೆಸಬೇಕು. ಶಾಲೆಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಯೋಚನೆ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಗಾಂಧಿನಗರ ಶಾಲೆಯ ಭೂಮಿಯ ಫ್ಲೋಟಿಂಗ್ ಮಾಡಬೇಕಾಗಿದೆ ಎಂದು ಅವರು ಆಗ್ರಹಿಸಿದರು.
ಶಾಲಾಭಿವೃದ್ದಿ ಸಮಿತಿ ಸಭೆ ಕರೆಯಲು ಶಾಸಕರಿಗೆ ತಿಳಿಸಿದ್ದೇನೆ. ಶಾಸಕರು ಸಭೆ ನಡೆಸುವ ಭರವಸೆಯನ್ನು ನೀಡಿದ್ದಾರೆ.
ಇದೆಲ್ಲ ಬೆಳವಣಿಗೆ ಮಧ್ಯೆ ಶಾಲೆಯ ಉಪ ಪ್ರಾಂಶುಪಾಲ ಅರುಣ್ ರವರು ಹೊಸ ಕಮಿಟಿ ರಚನೆಗೆ ಶಾಸಕರಿಗೆ ಪದೇ ಪದೇ ಒತ್ತಡ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದವರು ತಿಳಿಸಿದ್ದರು