ಡಿ.20 ರಿಂದ ಮೂರು ದಿನಗಳ ಕಾಲ ಆದಿಚುಂಚನಗಿರಿ ಮಠದ ಜಗದ್ಗುರು ಡಾ| ನಿರ್ಮಲಾನಂದ ಸ್ವಾಮೀಜಿ ಸುಳ್ಯ ತಾಲೂಕಿನಲ್ಲಿ ಗ್ರಾಮ ವಾಸ್ತವ್ಯ : ಸಮುದಾಯದ ಸಮ್ಮಿಲನ ಕಾರ್ಯಕ್ರಮ

0

ಆದಿಚುಂಚನಗಿರಿ ಕ್ಷೇತ್ರದ ಜಗದ್ಗುರು ಡಾ| ನಿರ್ಮಲಾನಂದನಾಥ ಸ್ವಾಮೀಜಿಯವರು ಡಿ.೨೦, ೨೧ ಮತ್ತು ೨೨ರಂದು ಮೂರು ದಿನಗಳ ಕಾಲ ಸುಳ್ಯ ತಾಲೂಕಿನಲ್ಲಿ ಗ್ರಾಮ ವಾಸ್ತವ್ಯ ನಡೆಸಲಿದ್ದು ಈ ಸಂದರ್ಭದಲ್ಲಿ ಸಮುದಾಯದ ಸಮ್ಮಿಲನ ಕಾರ್ಯಕ್ರಮಗಳು ನಡೆಯಲಿದೆ ಎಂದು ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್ ತಿಳಿಸಿದ್ದಾರೆ.


ಡಿ.೯ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕಾರ್ಯಕ್ರಮದ ಕುರಿತು ವಿವರ ನೀಡಿದ ಅವರು, ಗೌಡರ ಯುವ ಸೇವಾ ಸಂಘ ಸುಳ್ಯ, ತರುಣ ಘಟಕ, ಮಹಿಳಾ ಘಟಕ, ಹಾಗೂ ಸುಳ್ಯ ತಾಲೂಕಿನ ಎಲ್ಲಾ ಗ್ರಾಮ ಸಮಿತಿಗಳ ಜಂಟಿ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಡಿ.೨೦ರಂದು ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರು ೯.೩೦ಕ್ಕೆ ಸುಳ್ಯ ಪ್ರವೇಶ ಮಾಡಲಿದ್ದಾರೆ. ಅವರನ್ನು ಅದ್ದೂರಿ ಸ್ವಾಗತದೊಂದಿಗೆ ಬರ ಮಾಡಿಕೊಳ್ಳಲಾಗುವುದು. ಅಂದು ಬೆಳಗ್ಗೆ ೧೦.೩೦ಕ್ಕೆ ಕಿಶೋರ್ ಕುಮಾರ್ ಕೂಜುಗೋಡು ಇವರ ಮನೆಯಲ್ಲಿ ಆಶೀರ್ವಚನ ನಡೆಯಲಿದೆ. ಹರಿಹರ ಪಲ್ಲತಡ್ಕ, ಐನೆಕಿದು, ಸುಬ್ರಹ್ಮಣ್ಯ, ಏನೆಕಲ್ಲು ಬಾಳುಗೋಡು, ಕಲ್ಮಕಾರು, ಕೊಲ್ಲಮೊಗ್ರು ಗ್ರಾಮದ ಗೌಡ ಸಮಿತಿಯವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿಂದ ಅಪರಾಹ್ನ ೧ ಗಂಟೆಗೆ ನಿತ್ಯಾನಂದ ಮುಂಡೋಡಿಯವರ ಮನೆಗೆ ಆಗಮಿಸುವ ಸ್ವಾಮೀಜಿಯವರು ಅಲ್ಲಿ ಆಶೀರ್ವಚನ ನೀಡಲಿದ್ದಾರೆ. ಮಡಪ್ಪಾಡಿ, ಗುತ್ತಿಗಾರು, ನಾಲ್ಕೂರು, ದೇವಚಳ್ಳ ಗ್ರಾಮದ ಗೌಡ ಸಮಿತಿಯವರು ಭಾಗವಹಿಸುತ್ತಾರೆ. ಸಂಜೆ ೫ ಗಂಟೆಗೆ ಸರಕಾರಿ ಪ್ರೌಢಶಾಲೆ ಎಲಿಮಲೆಯಲ್ಲಿ ಸಾರ್ವಜನಿಕ ಸಭಾ ಕಾರ್ಯಕ್ರಮ ನಡೆಯುವುದು. ಅಲ್ಲಿ ದೇವಚಳ್ಳ, ನೆಲ್ಲೂರು ಕೆಮ್ರಾಜೆ, ಅಮರಮುಡ್ನೂರು ಗ್ರಾಮ ಸಮಿತಿಯವರು ಭಾಗವಹಿಸುತ್ತಾರೆ. ಅಂದು ರಾತ್ರಿ ಎ.ವಿ. ತೀರ್ಥರಾಮರ ಮನೆಯಲ್ಲಿ ಸ್ವಾಮೀಜಿಯವರು ವಾಸ್ತವ್ಯ ಹೂಡಲಿದ್ದಾರೆ.


ಡಿ.೨೧ರಂದು ಪಂಜದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾ ಕಾರ್ಯಕ್ರಮದಲ್ಲಿ ಸಾರ್ವಜನಿಕ ಸಭೆ ನಡೆಯುವುದು. ಅಲ್ಲಿ ಐವತ್ತೊಕ್ಲು, ಪಂಬೆತ್ತಾಡಿ, ಬಳ್ಪ, ಕೂತ್ಕುಂಜ, ಕಲ್ಮಡ್ಕ ಭಾಗದವರು ಭಾಗವಹಿಸುತ್ತಾರೆ. ಮಧ್ಯಾಹ್ನ೧ ಗಂಟೆಗೆ ಚೆನ್ನಪ್ಪ ಗೌಡ ಕಜೆಮೂಲೆ ಕಳಂಜಕ್ಕೆ ಭೇಟಿ ನೀಡುವ ಸ್ವಾಮೀಜಿಯವರು ಆಶೀರ್ವಚನ ನೀಡುವರು. ಅಲ್ಲಿ ಬಾಳಿಲ, ಕಳಂಜ, ಮುಪ್ಪೇರಿಯ, ಅಮರಮುಡ್ನೂರು, ಮುರುಳ್ಯ ಗ್ರಾಮದವರು ಭಾಗವಹಿಸುವರು. ಸಂಜೆ ೫ಕ್ಕೆ ಬರೆಮೇಲು ಶ್ರೀ ಉದ್ಭವ ತ್ರಿಶಕ್ತಿ ಸ್ವರೂಪಿನಿ ಮಹಾಕಾಳಿ ಕ್ಷೇತ್ರ ದೇವರಕಾನದಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದೆ. ಐವರ್ನಾಡು, ಬೆಳ್ಳಾರೆ, ಪೆರುವಾಜೆ, ಕೊಡಿಯಾಲ ಗ್ರಾಮಸ್ಥರು ಭಾಗವಹಿಸುವರು. ರಾತ್ರಿ ಅರಂತೋಡಿಗೆ ಭೇಟಿ ನೀಡುವ ಸ್ವಾಮೀಜಿಯವರು ಅಲ್ಲಿ ಡಾ| ಲಕ್ಷ್ಮೀಶ್ ಬಿಳಿಯಾರುರವರ ಮನೆಯಲ್ಲಿ ವಾಸ್ತವ್ಯ ಹೂಡುವರು.
ಡಿ.೨೨ರಂದು ಬೆಳಗ್ಗೆ ಅರಂತೋಡು ನೆಹರೂ ಸ್ಮಾರಕ ಪ.ಪೂ. ವಿದ್ಯಾಲಯದಲ್ಲಿ ಸಾರ್ವಜನಿಕ ಸಭೆ ನಡೆಯುವುದು. ಅರಂತೋಡು, ತೊಡಿಕಾನ, ಪೆರಾಜೆ, ಸಂಪಾಜೆ, ಮರ್ಕಂಜ, ಕೊಡಗು ಸಂಪಾಜೆ, ಚೆಂಬು ಗ್ರಾಮ ಗೌಡ ಸಮಿತಿಯವರು ಭಾಗವಹಿಸುವರು.
ಅಪರಾಹ್ನ ೧೨ಕ್ಕೆ ಕೇರಳ ರಾಜ್ಯದ ಬಂದಡ್ಕ ಮುತ್ತಣ್ಣ ಮಾಸ್ತರ್ ಕಟ್ಟಕ್ಕೋಡಿಯವರ ಮನೆಗೆ ಭೇಟಿ ನೀಡಿ ಅಲ್ಲಿ ಆಶೀರ್ವಚನ ನೀಡಲಿದ್ದಾರೆ. ಬಂದಡ್ಕ, ಆಲೆಟ್ಟಿ, ಕಲ್ಲಪಳ್ಳಿ ಗ್ರಾಮ ಗೌಡ ಸಮಿತಿಯವರು ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಜೆ ೫ಕ್ಕೆ ಜಾಲ್ಸೂರು ಗ್ರಾಮದ ಅಡ್ಕಾರು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸುವ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಜಾಲ್ಸೂರು, ಕನಕಮಜಲು, ಮಂಡೆಕೋಲುಇ, ಅಜ್ಜಾವರ, ದೇಲಂಪಾಡಿ, ಸುಳ್ಯ ನಗರ, ಉಬರಡ್ಕ ಮಿತ್ತೂರು ಭಾಗದವರು ಭಾಗವಹಿಸಲಿದ್ದಾರೆ. ಅಲ್ಲಿಯ ಕಾರ್ಯಕ್ರಮದ ಬಳಿಕ ಸ್ವಾಮೀಜಿಯವರು ನಿರ್ಗಮಿಸಲಿದ್ದಾರೆ ಎಂದು ಅವರು ವಿವರ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಗೌಡ ಸಮಿತಿ ಪ್ರಮುಖರಾದ ಎ.ವಿ. ತೀರ್ಥರಾಮ, ಬೆಳ್ಯಪ್ಪ ಗೌಡ, ನಿತ್ಯಾನಂದ ಮುಂಡೋಡಿ, ದೊಡ್ಡಣ್ಣ ಬರೆಮೇಲು, ರಜತ್ ಗೌಡ ಅಡ್ಕಾರ್, ದಿನೇಶ್ ಮಡಪ್ಪಾಡಿ, ಚಂದ್ರಶೇಖರ ಪೇರಾಲು, ಡಾ| ಎನ್.ಎ. ಜ್ಞಾನೇಶ್, ಪಿ.ಎಸ್. ಗಂಗಾಧರ್, ವೀರಪ್ಪ ಗೌಡ ಕಣ್ಕಲ್ ಇದ್ದರು.