ಸುಬ್ರಹ್ಮಣ್ಯ : ಯುವಕನಿಗೆ ಥಳಿತ ಘಟನೆ – ಎರಡು ಕೇಸು ದಾಖಲು

0


ಯುವಕನ ಮೇಲೆ ಪೋಕ್ಸೋ ಪ್ರಕರಣ


ಥಳಿಸಿದ ಗುಂಪಿನ ವಿರುದ್ಧವೂ ಕೇಸು

ಸುಬ್ರಹ್ಮಣ್ಯದಲ್ಲಿ ನಿನ್ನೆ ಸಂಜೆ ಹಿಂದೂ ಹುಡುಗಿಯೊಂದಿಗೆ ಇದ್ದ ಎಂಬ ಕಾರಣಕ್ಕೆ ಮುಸ್ಲಿಂ ಯುವಕನಿಗೆ ಗುಂಪೊಂದು ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಇತ್ತಂಡದ ಮೇಲೂ ಸುಬ್ರಹ್ಮಣ್ಯ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಥಳಿತಕ್ಕೊಳಗಾದ ಕಲ್ಲುಗುಂಡಿ ಹನೀಫ್ ಎಂಬವರ ಪುತ್ರ ಅಪೀದ್ ನೀಡಿದ ದೂರಿನಂತೆ, ಒಂದು ವರ್ಷದ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ಕುಕ್ಕೆ ಸುಬ್ರಹ್ಮಣ್ಯದ ವಿದ್ಯಾರ್ಥಿ ಪರಿಚಿತಳಾಗಿದ್ದು, ಈ ಹಿಂದೆ ಎರಡು ಮೂರು ಬಾರಿ ಸುಬ್ರಹ್ಮಣ್ಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಹೋಗಿ ಅವಳನ್ನು ಮಾತನಾಡಿಸಿಕೊಂಡು ಬರುತ್ತಿದ್ದೆ. ಜ. ೫ರಂದು ಸಂಜೆ ಅಲ್ಲಿ ಆಕೆಯೊಂದಿಗೆ ಮಾತನಾಡುತ್ತಿದ್ದಾಗ ಯಾರೋ ಪರಿಚಯವಿಲ್ಲದ ಎರಡು ಮೂರು ಮಂದಿ ಬಂದು ನನ್ನನ್ನು ಎಳೆದುಕೊಂದು ಅಲ್ಲಿಯೇ ರಸ್ತೆ ಬದಿ ನಿಂತಿದ್ದ ಜೀಪೊಂದರಲ್ಲಿ ಹಾಕಿದರು. ಇತರ ಈದಾರು ಮಂದಿ ಜೀಪಿನಲ್ಲಿ ಕುಳಿತುಕೊಂಡು ಕುಮಾರಧಾರ ಜಂಕ್ಷನ್ ಬಳಿ ಇರುವ ಹಳೆಯ ಕಟ್ಟಡದ ಕೋಣೆಯೊಳಗೆ ನನ್ನನ್ನು ಕೂಡಿ ಹಾಕಿ ಕೊಲ್ಲುವ ಉದ್ಧೇಶದಿಂದ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಜೀವ ಬೆದರಿಕೆ ಒಡ್ಡಿದ್ದಾರೆ ಎಂಬ ದೂರು ನೀಡಿದ್ದಾನೆ.
ಹುಡುಗಿಯ ತಂದೆ ಕೂಡಾ ಪೊಲೀಸ್ ದೂರು ನೀಡಿದ್ದು, ಜ. ೫ರಂದು ಸಂಜೆ ನನ್ನ ಮಗಳು ಬಸ್‌ಗಾಗಿ ಕಾಯುತ್ತಿರುವ ಸಂದರ್ಭದಲ್ಲಿ ಅಪೀದ್ ಎಂಬಾತ ತನ್ನನ್ನು ಪ್ರೀತಿಸುವಂತೆ ಒತ್ತಡ ಹಾಕಿ ಮಗಳ ದೂರವಾಣಿ ಸಂಖ್ಯೆ ಕೇಳಿದಾಗ ಕೊಡಲು ನಿರಾಕರಿಸಿದ್ದು, ಆಗ ಅವಳ ಕೈ ಹಿಡಿದು ಎಳೆದು ಮಾನಭಂಗಕ್ಕೆ ಯತ್ನಿಸಿ ಬೆದರಿಕೆ ಹಾಕಿದ್ದಾನೆ. ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸುಬ್ರಹ್ಮಣ್ಯ ಪೊಲೀಸರು ಎರಡೂ ಕಡೆಯ ದೂರುಗಳನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿದ್ದು, ಅಪೀದ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿರುವುದಾಗಿ ತಿಳಿದು ಬಂದಿದೆ.