ಸ್ನೇಹದಲ್ಲಿ ಯುವ ದಿನಾಚರಣೆ, ಹುಡುಕುವ ಬುದ್ದಿ ಜ್ಞಾನವನ್ನು ಗಟ್ಟಿಗೊಳಿಸುತ್ತದೆ : ಡಾ. ದಾಮ್ಲೆ

0

ವಿವೇಕಾನಂದರಲ್ಲಿ ಪ್ರಶ್ನಿಸುವ ಗುಣವಿತ್ತು. ಅವರು ಪ್ರಖರವಾದ ತೇಜಸ್ಸನ್ನು ಹೊಂದಿದ್ದರು. ಅವರ ಜ್ಞಾನ ಮತ್ತು ಕಾರ್ಯಗಳು ಅಪಾರವಾಗಿದ್ದು ಹುಡುಕುವ ಅಂದರೆ ಜ್ಞಾನ ಸಂಗ್ರಹಿಸುವ ಗುಣ ಅವರನ್ನು ಶ್ರೇಷ್ಠರನ್ನಾಗಿಸಿತು. ಸತ್ಯ ಮತ್ತು ಜ್ಞಾನ ಸಂಗ್ರಹದ ಮೂಲಕ ಸಮಾಜಮುಖಿಯಾಗಿ ಬೆಳೆದಿದ್ದರು. ಧೈರ್ಯವಂತ ಸ್ವಭಾವ ಹೊಂದಿದ್ದರಲ್ಲದೆ ಆತ್ಮಸ್ಥೈರ್ಯ ಅವರಲ್ಲಿ ಮನೆಮಾಡಿತ್ತು. ಮಾತ್ರವಲ್ಲದೆ ಪರಿತ್ಯಾಗಿಯಾಗಿ, ಸಂತನಾಗಿ ಭಾರತದ ಆಧ್ಯಾತ್ಮಿಕ ಸಂಸ್ಕೃತಿಯನ್ನು ಚಿಕಾಗೋ ಸಮ್ಮೇಳನದ ಮೂಲಕ ವಿಶ್ವದೆಲ್ಲೆಡೆ ಪರಿಚಯಿಸಿದವರೇ ಸ್ವಾಮಿ ವಿವೇಕಾನಂದರು. ಸಣ್ಣ ಪ್ರಾಯದಲ್ಲೇ ದೊಡ್ಡ ಸಾಧನೆ ಮಾಡಿದ ಅವರು ಯುವ ಜನರಿಗೆ ಸ್ಫೂರ್ತಿ ದಾಯಕ ವ್ಯಕ್ತಿಯಾಗಿದ್ದಾರೆ” ಎಂದು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರು ಹೇಳಿದರು.

ಅವರು ಜ.12 ರಂದು ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಯುವ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯಿನಿ ಶೀಮತಿ ಜಯಲಕ್ಷ್ಮಿ ದಾಮ್ಲೆ ಯವರು ಮಾತನಾಡಿ ” ಸಂತನಂತಿದ್ದ ಸ್ವಾಮಿ ವಿವೇಕಾನಂದರು ಸರ್ವ ಮಾನ್ಯರು ಆಗಿದ್ದಾರೆ. ವಿಶ್ವ ಸರ್ವಧರ್ಮ ಸಮ್ಮೇಳನದ ಮೂಲಕ ಭಾರತದ ಹಿಂದೂ ಧರ್ಮದ ಪರಂಪರೆಯನ್ನು ಜಗತ್ತಿಗೆ ತಿಳಿಸಿಕೊಟ್ಟರು. ಅವರು ನಮಗೆಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ. ದೀನ ದಲಿತರ ಉನ್ನತಿಗಾಗಿ ರಾಮಕೃಷ್ಣ ಮಿಷನ್ ಸ್ಥಾಪಿಸಿದರು.ಆ ಮೂಲಕ ಸಾಮಾಜಿಕ ಜಾಗೃತಿ ಮತ್ತು ಉನ್ನತಿಗಾಗಿ ಶ್ರಮಿಸಿದ್ದಾರೆ” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಿಕ್ಷಕ ದೇವಿಪ್ರಸಾದ ಜಿ ಸಿ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಹರಿಣಾಕ್ಷಿ ಪಿ ಎ ವಂದಿಸಿದರು.ಶಿಕ್ಷಕಿ ಶ್ರೀಮತಿ ಸವಿತಾ ಎಂ ನಿರೂಪಿಸಿದರು.