ಹಿಂದುಳಿದ ವರ್ಗಗಳ ಉಡುಪಿ ಜಿಲ್ಲಾ ಅಧಿಕಾರಿಯಾಗಿದ್ದ ದಯಾನಂದ ನಾಯಕ್ ವಿಧಿವಶ

0

ಸುಳ್ಯದಲ್ಲಿ 10 ವರ್ಷಕ್ಕಿಂತಲೂ ಹೆಚ್ಚು ಸಮಯ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಯಾಗಿದ್ದು, ಮುಂಭಡ್ತಿಗೊಂಡು ಉಡುಪಿ ಜಿಲ್ಲಾ ಹಿಂದುಳಿದ ವರ್ಗಗಳ ಅಧಿಕಾರಿಯಾಗಿ ನಿವೃತ್ತರಾಗಿದ್ದ ದಯಾನಂದ ನಾಯಕ್ ರವರು ಅಲ್ಪಕಾಲದ ಅಸೌಖ್ಯದಿಂದ ಇಂದು ಸಂಜೆ ಉಡುಪಿಯಲ್ಲಿ ನಿಧನರಾದರು. ಅವರಿಗೆ 62 ರಂದು ವರ್ಷ ವಯಸ್ಸಾಗಿತ್ತು.


ಬಂಟ್ವಾಳ ತಾಲೂಕು ಪುಣಚದವರಾದ ದಯಾನಂದ ನಾಯಕ್, ಕಾರ್ಕಳದಲ್ಲಿ ಹಾಸ್ಟೆಲ್ ವಾರ್ಡನ್ ಆಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೇರ್ಪಡೆಯಾಗಿದ್ದರು. ಬಳಿಕ ಸುಳ್ಯಕ್ಕೆ ವರ್ಗಾವಣೆಯಾಗಿ ಬಂದ ಅವರು ಇಲ್ಲೇ ಭಡ್ತಿಗೊಂಡು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಯಾಗಿದ್ದರು. ಸುಮಾರು 10 ವರ್ಷ ಸೇವೆ ಸಲ್ಲಿಸಿ ಬಳಿಕ ಪುತ್ತೂರಿಗೆ ವರ್ಗಾವಣೆಗೊಂಡಿದ್ದರು.

ಅಲ್ಲಿಂದ ಮಂಗಳೂರಿಗೆ ವರ್ಗಾವಣೆಗೊಂಡು , ಜಿಲ್ಲಾ ಅಧಿಕಾರಿಯಾಗಿ ವರ್ಗಾವಣೆಗೊಂಡು ಉಡುಪಿಗೆ ಹೋಗಿದ್ದರು. ನಿವೃತ್ತಿಗೊಂಡ ಬಳಿಕ ಉಡುಪಿಯಲ್ಲೆ ಮನೆ ಕಟ್ಟಿ ನೆಲೆಸಿದ್ದರು. ಸುಳ್ಯದಲ್ಲಿರುವಾಗ ಜೇಸೀ ಸಂಸ್ಥೆಯಲ್ಲಿ ಸಕ್ರಿಯರಾಗಿದ್ದ ಅವರು ಸ್ಟೇಟ್ ಟ್ರೈನರ್ ಆಗಿದ್ದರು.
ಮೃತರು ಪತ್ನಿ ರಜನಿ, ಪುತ್ರಿ ಸ್ವಾತಿ ಪಿ., ಅಳಿಯ, ತಂದೆ, ತಾಯಿಯನ್ನು ಅಗಲಿದ್ದಾರೆ.