ಧರ್ಮಸ್ಥಳ ಯೋಜನೆಯ ಜ್ಞಾನ ವಿಕಾಸ ಕೇಂದ್ರದ ಆಯೋಜನೆ – ಮಹಿಳೆಯನ್ನೆ ಹೋಲುವ ದೀಪ ವಿಶೇಷ ಆಕರ್ಷಣೆ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಸುಳ್ಯ ತಾಲೂಕು ಜ್ಞಾನ ವಿಕಾಸ ಮಹಿಳಾ ಕೇಂದ್ರ ಇದರ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವು ಜ.17 ರಂದು ಕೇರ್ಪಳದ ಬಂಟರ ಸಮುದಾಯ ಭವನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಹಿಳೆಯರಿಗಾಗಿ “ಸಾಮಾಜಿಕ ಜಾಲತಾಣಗಳ ವ್ಯಸನದಿಂದಾಗುವ ಮಾನಸಿಕ ಕಾಯಿಲೆಗಳು” ಎಂಬ ವಿಷಯದ ಕುರಿತು ಮಹಿಳಾ ವಿಚಾರಗೋಷ್ಠಿಯು ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕೆ.ವಿ.ಜಿ.ಅಮರಜ್ಯೋತಿ ಪಿ.ಯು.ಕಾಲೇಜಿನ ಪ್ರಾಂಶುಪಾಲರಾದ ಡಾ| ಶ್ರೀಮತಿ ಯಶೋಧ ರಾಮಚಂದ್ರ ರವರು ಮಾತನಾಡಿ ಮಹಿಳೆಯರಿಗೆ ಉನ್ನತ ಸ್ಥಾನ ಮಾನ ಲಭಿಸಿದ ಪ್ರದೇಶದಲ್ಲಿ ಅಭಿವೃದ್ಧಿ ಕಂಡಿದೆ. ಜ್ಞಾನ ವಿಕಾಸ ಕೇಂದ್ರದ ಮೂಲಕ ಮಹಿಳೆಯರ ಜ್ಞಾನವನ್ನು ವೃದ್ದಿಸುವ ಪರಿಕಲ್ಪನೆ ಯೋಜನೆಯ ಮೂಲಕ ಸಾಕಾರಗೊಂಡಿದೆ ಎಂದು ಹೇಳಿದರು.
ಜಿಲ್ಲಾ ಮಹಿಳಾ ಮಂಡಲ ಒಕ್ಕೂಟದ ಗೌರವಾಧ್ಯಕ್ಷೆ ಶ್ರೀಮತಿ ಹರಿಣಿ ಸದಾಶಿವ ರವರು ದೀಪ ಬೆಳಗಿಸಿದರು.
ವಿಚಾರಗೋಷ್ಠಿಯ ಸಂಪನ್ಮೂಲ ವ್ಯಕ್ತಿಯಾಗಿ ಕೆ.ವಿ.ಜಿ.ಆಯುರ್ವೇದ ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾದ್ಯಾಪಕಿ ಡಾ| ಜಯಶ್ರೀ ಶ್ರೀಕಾಂತ್ ಭಟ್ ರವರು ಮಾತನಾಡಿ “ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿರುವ ಹೊಸ ಕಾಯಿಲೆಗಳು ಇತ್ತೀಚೆಗೆ ಉಲ್ಬಣಗೊಳ್ಳುತ್ತಿದೆ. ಸಾಮಾಜಿಕ ಜಾಲತಾಣದ ಬಳಕೆ ಮಿತಿ ಮೀರಿದಾಗಿ ಆರೋಗ್ಯ ಹದಗೆಡಲು ಕಾರಣವಾಗುವುದು. ಮನುಷ್ಯನ ಮೆದುಳಿನ ಪ್ರತಿಕ್ರಿಯೆಯಿಂದಾಗಿ ಸಾಮಾಜಿಕ ಜಾಲತಾಣದ ವ್ಯಸನಿಗಳಾಗುವ ಸಾಧ್ಯತೆ ಜಾಸ್ತಿ. ಹೆಚ್ಚು ಸಮಯದ ಬಳಕೆಯಿಂದ ಆತ್ಮ ವಿಶ್ವಾಸ ಕಡಿಮೆಯಾಗುವುದು. ಹದಿಹರೆಯದ ಮಕ್ಕಳ ಭಾವನೆಗಳ ಮೇಲೆ ಸಾಮಾಜಿಕ ಜಾಲತಾಣಗಳಿಂದ ವ್ಯತಿರಿಕ್ತ ಪರಿಣಾಮ ಉಂಟಾಗುವುದು. ಇದರ ವ್ಯಸನಿಗಳಾಗದೆ ಮಿತ ಬಳಕೆ ಮಾಡಿದರೆ ದುಷ್ಪರಿಣಾಮ ಬೀರಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಮುಖ್ಯಅಭ್ಯಾಗತರಾಗಿ ಧರ್ಮಸ್ಥಳ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ , ಸುಳ್ಯ ಬಂಟರ ಸಮುದಾಯ ಭವನದ ಅಧ್ಯಕ್ಷ ಜಯಪ್ರಕಾಶ್ ರೈ ಸುಳ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀದೇವಿ ಜ್ಞಾನ ವಿಕಾಸ ಕೇಂದ್ರ ಬಾಳುಗೋಡು ಸದಸ್ಯರು
ಪ್ರಾರ್ಥಿಸಿದರು. ಪ್ರಾಸ್ತಾವಿಕ ಮಾತಿನೊಂದಿಗೆ ಯೋಜನಾಧಿಕಾರಿ ನಾಗೇಶ್ ಪಿ ಯವರು ಸ್ವಾಗತಿಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಭಾರತಿ ವಂದಿಸಿದರು. ವಲಯ ಮೇಲ್ವಿಚಾರಕ ಸುಧೀರ್ ನೆಕ್ರಾಜೆ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಬಳಿಕ ಕೇಂದ್ರದ ಸದಸ್ಯರಿಗೆ ಸಾಂಸ್ಕೃತಿಕ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಆಗಮಿಸಿದ ಎಲ್ಲರಿಗೂ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ತಾಲೂಕಿನ ಸುಮಾರು 500 ಮಿಕ್ಕಿ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಯೋಜನೆಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ಹಾಗೂ ಸಂಘದ ಸದಸ್ಯರು ಸಹಕರಿಸಿದರು.