ನವ ವಿವಾಹಿತೆ ನಾಪತ್ತೆ : ಪತಿಯಿಂದ ದೂರು

0


ನವ ವಿವಾಹಿತೆಯೋರ್ವರು ನಾಪತ್ತೆಯಾಗಿದ್ದು, ಆಕೆಯನ್ನು ಹುಡುಕಿಕೊಡುವಂತೆ ಪತಿ ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆ ಮರ್ಕಂಜದಿಂದ ವರದಿಯಾಗಿದೆ.


ಮರ್ಕಂಜ ಗ್ರಾಮದ ರಾಜಶೇಖರ ಎಂಬವರ ಪತ್ನಿ ಕೀರ್ತಿಶ್ರೀ (26 ವರ್ಷ) ಜನವರಿ ೨೧ರಂದು ಎಲಿಮಲೆ ಕ್ಲಿನಿಕ್‌ಗೆ ಮದ್ದಿಗೆಂದು ಹೋದವರು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದಾರೆ ಎಂದು ಮತ್ತು ಆಕೆಯನ್ನು ಹುಡುಕಿ ಕೊಡುವಂತೆ ಪತಿ ರಾಜಶೇಖರರವರು ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನಲ್ಲಿ ಜನವರಿ ೨೧ರಂದು ನನ್ನ ಆರೋಗ್ಯ ಸರಿ ಇಲ್ಲವೆಂದು ನನ್ನ ಪತ್ನಿ ನನ್ನ ಬಳಿ ಹೇಳಿದ್ದು ನಾನು ಆಕೆಯನ್ನು ಆಸ್ಪತ್ರೆಗೆ ಹೋಗಲೆಂದು ನನ್ನ ಮನೆಯಿಂದ ನನ್ನ ಜೀಪಿನಲ್ಲಿ ಬೆಳಿಗ್ಗೆ ೧೦ ಗಂಟೆಗೆ ಆಕೆಯನ್ನು ಕರೆದುಕೊಂಡು ಹೋಗಿದ್ದು ಬಳಿಕ ಎಲಿಮಲೆಯ ಕ್ಲಿನಿಕ್ಕಿಗೆ ಹೋಗಲೆಂದು ಆಕೆಯನ್ನು ಬಸ್ಸಿನಲ್ಲಿ ಹತ್ತಿಸಿದ್ದು, ೧೦.೩೦ ಕ್ಕೆ ಅವಳ ದೂರವಾಣಿ ಸಂಖ್ಯೆಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಬಳಿಕ ನಾನು ಆಕೆಯ ತಾಯಿಯ ಮನೆಗೆ ಫೋನ್ ಮಾಡಿ ಕೇಳಿದಾಗ ಅಲ್ಲಿಗೂ ಕೂಡ ಆಕೆ ಬಂದಿರುವುದಿಲ್ಲ ಎಂಬ ವಿಷಯವನ್ನು ಅವರ ತಾಯಿ ತಿಳಿಸಿರುತ್ತಾರೆ. ನಂತರ ನಮಗೆ ತಿಳಿದಿರುವ ಎಲ್ಲಾ ಕಡೆಗಳಲ್ಲಿ ಆಕೆಯ ಸಂಬಂಧಿಕರ ಮನೆಗಳಲ್ಲಿಯೂ ಕೂಡ ವಿಚಾರಿಸಿದಾಗ ಯಾವುದೇ ಮಾಹಿತಿ ಲಭಿಸಿರುವುದಿಲ್ಲ. ಆದುದರಿಂದ ತಾವುಗಳು ಕಾಣೆಯಾಗಿರುವ ನನ್ನ ಪತ್ನಿ ಕೀರ್ತಿಶ್ರೀಯನ್ನು ಪತ್ತೆ ಹಚ್ಚಿ ಕೊಡಬೇಕೆಂದು ಉಲ್ಲೇಖಿಸಲಾಗಿದೆ.
ಆಕೆ ಕಾಣೆಯಾಗಿದ್ದ ಸಂದರ್ಭ ಹಸಿರು ಬಣ್ಣದ ಚೂಡಿದಾರ ಧರಿಸಿದ್ದು ಸುಮಾರು 5 ಅಡಿ 3 ಇಂಚು ಎತ್ತರವಿದ್ದು ಕನ್ನಡ, ಅರೆ ಗನ್ನಡ, ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ಮಾತನಾಡಬಲ್ಲವರಾಗಿದ್ದಾರೆ .
ಇವರನ್ನು ಕಂಡುಬಂದಲ್ಲಿ ಸುಳ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸುಳ್ಯ ಪೊಲೀಸರು ತಿಳಿಸಿದ್ದಾರೆ.