ಮರ್ಕಂಜ : ಹೊಡೆದಾಟ – ಪೋಲೀಸ್ ದೂರು

0

ಮರ್ಕಂಜ ಗ್ರಾಮದ ಅಂಗಡಿಮಜಲು ಎಂಬಲ್ಲಿ ಇಬ್ಬರ ಮಧ್ಯೆ ಹೊಡೆದಾಟವಾಗಿ ಪೋಲೀಸ್ ಕೇಸು ದಾಖಲಾದ ಘಟನೆ ಫೆ.1ರಂದು ವರದಿಯಾಗಿದೆ.

ಮರ್ಕಂಜದ ಶಾಂತಪ್ಪ ರೈ ಎಂಬವರು ತನ್ನ ಮನೆಯ ಬಳಿ ನಿಂತುಕೊಂಡಿರುವಾಗ ಅದೇ ಗ್ರಾಮದ ನಿವಾಸಿ ನಯನಕುಮಾರ್ ರೈ ಎಂಬವರು ಅವ್ಯಾಚವಾಗಿ ಬೈಯುತ್ತಿದ್ದರೆನ್ನಲಾಗಿದೆ. ಈ ಬಗ್ಗೆ ಶಾಂತಪ್ಪ ರೈಯವರು ಪ್ರಶ್ನಿಸಿದರೆಂದೂ, ಆ ಸಂದರ್ಭ ಮಾತಿಗೆ ಮಾತು ಬೆಳೆದು ಹೊಡೆದಾಟವಾಯಿತೆನ್ನಲಾಗಿದೆ. ಆ ಸಂದರ್ಭ ನಯನಕುಮಾರ್ ರವರು ತನ್ನ ಕೈಯಲ್ಲಿದ್ದ ಬಿಯರ್ ಬಾಟಲಿಯಿಂದ ಹೊಡೆದರೆಂದೂ, ನಂತರ ಬಿಯರ್ ಬಾಟಲಿಯನ್ನು ಅಲ್ಲೇ ಬಿಸಾಡಿ ಆತನ ಮನೆಗೆ ಹೋಗಿ ಕತ್ತಿಯೊಂದನ್ನು ಹಿಡಿದುಕೊಂಡು ಬಂದು ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದರೆನ್ನಲಾಗಿದೆ. ಶಾಂತಪ್ಪರವರು ಸುಳ್ಯ ಸರ್ಕಾರಿ ಆಸ್ಪತ್ರೆ ಹಾಗೂ ಪುತ್ತೂರಿಗೆ ತೆರಳಿ ಚಿಕಿತ್ಸೆ ಪಡೆದು ಮರಳಿದ್ದಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.