ದ. ಕ. ಜಿಲ್ಲೆಯಲ್ಲಿ ಶಾಂತಿ ನೆಮ್ಮದಿಯಿಂದ ಬದುಕಬೇಕಾದರೆ ಈ ಬಾರಿಯ  ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ: ಬಿ ಕೆ ಹರಿಪ್ರಸಾದ್

0

ಸುಳ್ಯದಲ್ಲಿ ಕಾಂಗ್ರೆಸ್ ಕರಾವಳಿ ಪ್ರಜಾಧ್ವನಿ ಯಾತ್ರೆ, ಸಾರ್ವಜನಿಕ ಸಭೆ

ಶಿಕ್ಷಣ ಕ್ಷೇತ್ರದಲ್ಲಿ ದ್ವಿತೀಯ ಪಿಯುಸಿ ಮತ್ತು ಹತ್ತನೆಯ ತರಗತಿ ಫಲಿತಾಂಶಗಳಲ್ಲಿ ಕಳೆದ ಎರಡು ವರ್ಷಗಳ ಮೊದಲು ಪ್ರತಿ ಬಾರಿಯೂ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದುಕೊಳ್ಳುತ್ತಿದ್ದರು.


ಇದೀಗ ಕಳೆದು ಎರಡು ವರ್ಷಗಳಿಂದ ಈಚೆಗೆ ಈ ಎರಡು ಫಲಿತಾಂಶಗಳಲ್ಲಿ 13ನೇ ಸ್ಥಾನಕ್ಕೆ ಕುಸಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲ ಕಾರಣ ಬಿಜೆಪಿಯವರ ದ್ವೇಷಪೂರಿತ ರಾಜಕಾರಣದಿಂದಾಗಿ ಆಗಿದೆ.


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ನೆಮ್ಮದಿಯಿಂದ ಬದುಕಬೇಕಾದರೆ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ.
ಈ ಬಾರಿಯ ಚುನಾವಣೆಯಲ್ಲಿ ಧರ್ಮ ಜಾತಿ ಭಾಷೆ ಹಣ ಇವೆಲ್ಲವನ್ನು ಮೀರಿ ವೋಟ್ ಮಾಡಿ. ನಿಮ್ಮ ಮಕ್ಕಳ ಭವಿಷ್ಯ ಉಜ್ವಲವಾದರೆ ಇಡೀ ಜಿಲ್ಲೆಯ ಭವಿಷ್ಯವೇ ಉಜ್ವಲವಾಗುತ್ತದೆ ಎಂದು    ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಳ್ಳಲಾಗಿರುವ  ಕರಾವಳಿ ಪ್ರಜಾ ಧ್ವನಿಯಾತ್ರೆಯ ಸಭಾ ವೇದಿಕೆಯಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ. ಅವರು ಇಂದು ಸಂಜೆ ಸುಳ್ಯ ಖಾಸಗಿ ಬಸ್ಸು ನಿಲ್ದಾಣದ ಬಳಿ ಕಾಂಗ್ರೆಸ್ ಕರಾವಳಿ ಪ್ರಜಾಧ್ವನಿ ಯಾತ್ರೆಯಲ್ಲಿ ಆಗಮಿಸಿ ಬಿಜೆಪಿ ಪಕ್ಷದ ವಿರುದ್ಧ ತಮ್ಮದೇ ಶೈಲಿಯಲ್ಲಿ ಟೀಕಾ ಪ್ರಹಾರವನ್ನು ಮಾಡಿದರು.


ಈ ವೇಳೆ ಮಾತನಾಡಿದ ಅವರು ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಸ್ವಾಭಿಮಾನದಿಂದ ಬದುಕುವವರು. ಆದರೆ ಭಾರತೀಯ ಜನತಾ ಪಕ್ಷದವರು ದಕ್ಷಿಣ ಕನ್ನಡ ಜಿಲ್ಲೆಯ ಜನತೆಯ ಸ್ವಾಭಿಮಾನಕ್ಕೆ ಧಕ್ಕೆಯನ್ನು ತಂದಿದ್ದಾರೆ. ಆದ್ದರಿಂದ  ಈ ಬಾರಿ ಬಿಜೆಪಿಯವರನ್ನು ಸೋಲಿಸಿ ಮನೆಗೆ ಕಳುಹಿಸಿ ಕಾಂಗ್ರೆಸ್ ಪಕ್ಷದವರು ಅಧಿಕಾರಕ್ಕೆ ತನ್ನಿ ಎಂದು ಕರೆ ನೀಡಿದರು.

ಇದೇ ವೇದಿಕೆಯಲ್ಲಿ  ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ  ಹಾಗೂ ವಿಧಾನಪರಿಷತ್ ಸದಸ್ಯ ಸಲೀಂ ಅಹಮದ್ ಮಾತನಾಡಿ ಕಾಂಗ್ರೆಸ್ ಪಕ್ಷ ದೇಶದ ಮತ್ತು ರಾಜ್ಯದ ಅಭಿವೃದ್ಧಿಗಾಗಿ ಇರುವ ಪಕ್ಷವಾಗಿದೆ. ಕಾಂಗ್ರೆಸ್ಸಿನಲ್ಲಿ  ದ್ವೇಷ ರಾಜಕೀಯ ಎಂದು ಆಗಿಲ್ಲ. ಅದರ ಅವಶ್ಯಕತೆ ಕಾಂಗ್ರೆಸ್ಸಿಗಿಲ್ಲ. ಆದರೆ ಬಿಜೆಪಿಯವರು ದೇಶದ ಜನತೆಯ ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡಿ ಅದರಿಂದ ಲಾಭ ಪಡೆಯುವವರಾಗಿದ್ದಾರೆ.


ಈ ಬಾರಿ ಕಾಂಗ್ರೆಸ್ ಪಕ್ಷದ  ಪ್ರತಿಯೊಬ್ಬ ಕಾರ್ಯಕರ್ತರು ನಾವು ಈಗಾಗಲೇ ಘೋಷಿಸಿರುವಂತಹ ಎರಡು ಮಹಾಯೋಜನೆಗಳಾದ  ಗೃಹ ಜ್ಯೋತಿ ಮತ್ತು ಗೃಹಲಕ್ಷ್ಮಿ ಯೋಜನೆಗಳ ಬಗ್ಗೆ ಜನರ ಮನೆಯ ಬಾಗಿಲಿಗೆ ತೆರಳಿ ಇದರ ಹರಿವನ್ನು ನೀಡಬೇಕಾಗಿದೆ.
ಕಾಂಗ್ರೆಸ್ ಪಕ್ಷ ಸುಳ್ಳು ಭರವಸೆಯನ್ನು ನೀಡುವುದಿಲ್ಲ.  ಚುನಾವಣೆಯ ಪ್ರಣಾಳಿಕೆಯಲ್ಲಿ ನೀಡಿದ ಯೋಜನೆಗಳನ್ನು ಜಾರಿಗೆ ತರುವಂತಹ ಕೆಲಸ ಕಾರ್ಯಗಳನ್ನು ಮಾಡುವ ಪಕ್ಷವಾಗಿದೆ ಎಂದು ಹೇಳಿದರು.

ಮತ್ತೋರ್ವ ಮುಖಂಡ  ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಮಾತನಾಡಿ ಕಾಂಗ್ರೆಸ್ ಪಕ್ಷದಲ್ಲಿ  ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರು ರೈತರಿಗೆ ಮತ್ತು ಬಡ ಜನರಿಗೆ ಯಾವುದೆಲ್ಲ ಯೋಜನೆಗಳನ್ನು  ತಂದಿದ್ದರು ಎಂಬುವುದು ಎಲ್ಲರಿಗೂ ತಿಳಿದಿರುವಂತಹ ವಿಷಯವಾಗಿದೆ. ಕೃಷಿಕರಿಗೆ ವಿದ್ಯುತ್ ಯೋಜನೆಯನ್ನು ಜಾರಿಗೆ ತಂದು ರೈತರಿಗೆ ಜೀವನಕ್ಕೆ ಆಧಾರವಾದ ಕಾರ್ಯಗಳನ್ನು ಮಾಡಿದವರು.

ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯ ಕರಾವಳಿ ಪ್ರಜಾಧ್ವನಿ ಯಾತ್ರೆಯ ಉಸ್ತುವಾರಿ ಹಾಗೂ ವಿಧಾನಪರಿಷತ್ ಸದಸ್ಯ  ಮಂಜುನಾಥ್ ಭಂಡಾರಿ ಪ್ರಾಸ್ತಾವಿಕ ಮಾತನಾಡಿದರು.

ವೇದಿಕೆಯಲ್ಲಿ ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್, ಎಐಸಿಸಿ ಮಾಜಿ ಕಾರ್ಯದರ್ಶಿ ಮೋಹನ್ ಪಿ ವಿ, ಯೂತ್ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಲುಕ್ ಮಾನ್, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ್, ಮುಖಂಡರುಗಳಾದ ಭರತ್ ಮುಂಡೋಡಿ,  ಧನಂಜಯ  ಅಡ್ಪಂಗಾಯ, ಭರತ್ ಮುಂಡೋಡಿ, ಎಚ್.ಎಂ. ನಂದಕುಮಾರ್, ಜಿ ಕೃಷ್ಣಪ್ಪ, ಡಾl ರಘು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಟಿ ಎಂ ಶಹೀದ್, ಕೆ ಎಮ್ ಮುಸ್ತಫ, ಎಸ್ ಸಂಸುದ್ದಿನ್, ಸಾಹುಲ್ ಹಮೀದ್ ಕುತ್ತಮೋಟ್ಟೆ ಮೊದಲಾದವರು ಉಪಸ್ಥಿತರಿದ್ದರು.
ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ. ವೆಂಕಪ್ಪ ಗೌಡ ಸ್ವಾಗತಿಸಿ, ಕಾಂಗ್ರೆಸ್ ಸುಳ್ಯ ನಗರ ಅಧ್ಯಕ್ಷ ಎಂ ಜೆ ಶಶಿಧರ ಕಾರ್ಯಕ್ರಮ ನಿರೂಪಿಸಿದರು.
ಕರಾವಳಿ ಸುಜಾದ್ವನಿ ಯಾತ್ರೆಯಲ್ಲಿ ನೂರಾರು ಮಂದಿ ಕಾರ್ಯಕರ್ತರು, ಪಕ್ಷದ ಮುಖಂಡರುಗಳು ಭಾಗವಹಿಸಿದ್ದರು.