ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಕೆ- ಬಿಜೆಪಿ ಕಚೇರಿಗೆ ಮುತ್ತಿಗೆ ಪ್ರತಿಭಟನೆಗೆ ನಾಗರಿಕರ ನಿರ್ಧಾರ
ಆಲೆಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಂಬೂರು ಕುಕ್ಕಂಬಳ ಎಂಬಲ್ಲಿ ಕಳೆದ ಹಲವಾರು ವರ್ಷಗಳಿಂದ ಬಹು ಬೇಡಿಕೆಯ ಸೇತುವೆಯನ್ನು 20 ವರ್ಷ ಕಳೆದರೂ ನಿರ್ಮಿಸಿಲ್ಲ ಎಂಬ ಆರೋಪದಡಿಯಲ್ಲಿ ಈ ಭಾಗದ ನಾಗರಿಕರು ಸಭೆ ಸೇರಿ ಮುಂಬರುವ ಎಲ್ಲಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುವ ನಿರ್ಧಾರ ಕೈಗೆತ್ತಿಕೊಂಡು ಮತದಾನದ ಬಹಿಷ್ಕಾರ ಬ್ಯಾನರ್ ಅಳವಡಿಸಿರುತ್ತಾರೆ. ತಡೆಗೊಡೆ ಇಲ್ಲದ ಶಿಥಿಲಗೊಂಡ ಸೇತುವೆ ನಿರ್ಮಿಸಿಕೊಡುವಂತೆ 20 ವರ್ಷಗಳಿಂದ ಸ್ಥಳೀಯ ಶಾಸಕರಿಗೆ ಹಾಗೂ ಜನಪ್ರತಿನಿಧಿಗಳಿಗೆ ನಿರಂತರವಾಗಿ ಬೇಡಿಕೆಗಳನ್ನು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ಪ್ರತಿ ಚುನಾವಣೆಯಲ್ಲಿ ಆಶ್ವಾಸನೆಗಳನ್ನು ಅಸ್ತ್ರ ವಾಗಿರಿಸಿಕೊಂಡು ಮತದಾರನನ್ನು ವಂಚಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಯಾವುದೇ ಆಶ್ವಾಸನೆ ಗಳಿಗೆ ಮರುಳಾಗದೆ ನೂತನ ಸೇತುವೆ ನಿರ್ಮಾಣ ಆಗುವ ತನಕ ಮತದಾನ ಬಹಿಷ್ಕರಿಸಲು ಜನಪ್ರತಿನಿಧಿಗಳನ್ನು ನಂಬಿ ಮೋಸ ಹೋದ ಕುಕ್ಕಂಬಳ, ದೇವಮೂಲೆ,ಅಂಜಿಕ್ಕಾರ್,ನೆಡ್ಚಿಲು, ಪಾಲಡ್ಕ ಭಾಗದ ಮತದಾರರು. ಎಂಬ ಬರಹದ ಬ್ಯಾನರ್ ಅಳವಡಿಸಿರುತ್ತಾರೆ.
ಮಾ.29 ರಂದು ಬಿಜೆಪಿ ಕಚೇರಿಗೆ ಮುತ್ತಿಗೆ ಪ್ರತಿಭಟನೆಗೆ ನಿರ್ಧಾರ:
ಕುಕ್ಕಂಬಳ, ಅಂಜಿಕ್ಕಾರ್, ನೆಡ್ಚಿಲು, ಪಾಲಡ್ಕ, ದೇಮೂಲೆ ಭಾಗದ ನಾಗರಿಕರು ಒಟ್ಟು ಸೇರಿ
ಮಾ.29 ರಂದು ಸುಳ್ಯದ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುವ ನಿರ್ಧಾರ ಕೈಗೊಳ್ಳುವ ಮೂಲಕ ಈ ಭಾಗದ ನಾಗರಿಕರ ಸಹಿ ಇರುವ ಮನವಿ ಪತ್ರವನ್ನು ಶಾಸಕರಿಗೆ ಹಾಗೂ ಜಿಲ್ಲಾಧಿಕಾರಿಯವರಿಗೆ, ತಹಶಿಲ್ದಾರರಿಗೆ ಹಾಗೂ ಸಂಬಂಧ ಪಟ್ಟ ತಾಲೂಕಿನ ಇಲಾಖೆಯ ಅಧಿಕಾರಿಗಳಿಗೆ, ಆಲೆಟ್ಟಿ ಗ್ರಾಮ ಪಂಚಾಯತ್ ನವರಿಗೆ ಪತ್ರ ಬರೆದು ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.