ಹುಳಿಯಡ್ಕ ಶ್ರೀ ವೀರಭದ್ರ ದೇವರ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

0

ಭಂಡಾರ ಮನೆಯ ಗೃಹ ಪ್ರವೇಶ, ವಾರ್ಷಿಕ ಪೂಜೆ

ಧಾರ್ಮಿಕತೆ ಮತ್ತು ಭಕ್ತಿ ಭಾವದಿಂದ ಬದುಕು ಪಾವನ: ಮುಕ್ತಾನಂದ ಸ್ವಾಮೀಜಿ

ಧಾರ್ಮಿಕತೆ ಮತ್ತು ಭಕ್ತಿ ಭಾವಗಳಿಂದ ಬದುಕು ಪಾವನವಾಗುತ್ತದೆ, ಸುಂದರ ವಾಗುತ್ತದೆ . ಮಡಿವಾಳ ಸಮಾಜ ಎಲ್ಲರೊಂದಿಗೂ ಬಂಧುತ್ವ ಹೊಂದಿದ ಏಕಮಾಯ್ರ ಸಮಾಜ ಎಂದು ಮೂಡಬಿದ್ರೆ ಶ್ರೀ ಕ್ಷೇತ್ರ ಕರಿಂಜೆಯ ಶ್ರೀ ಶ್ರೀ ಶ್ರೀ ಮುಕ್ತಾನಂದ ಸ್ವಾಮೀಜಿಯವರು ಹೇಳಿದರು.

ಭಗವಂತನ ಕಾರ್ಯ ಕಷ್ಟ ಎಂದು ಮಾಡಬೇಡಿ. ಇಷ್ಟ ಪಟ್ಟು ಮಾಡಿ. ಹಾಗೆ ನೀವು ವೀರಭದ್ರ ದೇಗುಲ ಕಟ್ಟಿದ್ದೀರಿ. ಎಲ್ಲ ಸಮಾಜದವರೂ ಸಹಕಾರ ಮಾಡಿದ್ದಾರೆ. ವೀರಭದ್ರನ ವೀರಾವೇಶದ ಚೈತನ್ಯ ಶಕ್ತಿಯ ಜ್ವಾಲೆಯಿಂದ ಸಮುದಾಯ ಆಶೋತ್ತರಗಳನ್ನು ಈಡೇರಿಸಿಕೊಳ್ಳುವಂತಾಗಲಿ ಎಂದು ಸ್ವಾಮೀಜಿ ಹೇಳಿದರು.

ಉಬರಡ್ಕ ಮಿತ್ತೂರು ಶ್ರೀ ವೀರಭದ್ರ ದೇವರ ಭಂಡಾರದ ಮನೆ ಚಾರಿಟೇಬಲ್ ಟ್ರಸ್ಟ್ ಹುಳಿಯಡ್ಕ ಇದರ ವತಿಯಿಂದ ಶ್ರೀ ನಾಗಸಾನಿಧ್ಯ ಮತ್ತು ಶ್ರೀ ವೀರಭದ್ರ ದೇವರ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ವೀರಭದ್ರ ದೇವರ ಭಂಡಾರ ಮನೆ ಗೃಹ ಪ್ರವೇಶ ಮತ್ತು ವಾರ್ಷಿಕ ಪೂಜೆಯ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಧಾರ್ಮಿಕ ಉಪನ್ಯಾಸ ನೀಡಿದ
ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅವರು, ನಾವು ಒಗ್ಗಟ್ಟಾಗಿದ್ದರೆ ಯಾವ ಸಾಧನೆಯನ್ನೂ ಮಾಡಬಹುದು. ಒಗ್ಗಟ್ಟಿನ ಕೊರತೆಯಿದ್ದರೆ ನಮ್ಮನ್ನು ದಾರಿ ತಪ್ಪಿಸುವವರಿರುತ್ತಾರೆ. ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಒಗ್ಗಟ್ಟು ಸಾಧಿಸಬೇಕು ಎಂದರು.

ಮುಖ್ಯ ಅತಿಥಿಗಳಾಗಿದ್ದ ಶಾಸಕಿ ಕು. ಭಾಗೀರಥಿ ಮುರುಳ್ಯರವರು, ಹುಟ್ಟಿನಿಂದ ಸಾಯುವವರೆಗೂ ಎಲ್ಲರಿಗೂ ಬೇಕಾದವರು ಮಡಿವಾಳ ಸಮುದಾಯ. ವೀರ ಭದ್ರನ ಶಕ್ತಿ ಇರುವುದರಿಂದಲೇ ಇವರು ದೈವ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದರು.

ಈ ಸಮಾಜದ ಬಹುತೇಕರು ಬಡವರು. ಆದರೂ ಇವರು ನಿರ್ದಿಷ್ಟ ಪ್ರವರ್ಗಕ್ಕೆ ಸೇರಿಲ್ಲ. ಇಂತಹ ಬೇಡಿಕೆಗಾಗಿ ಹೋರಾಟ ನಡೆಯುವುದಿದ್ದರೆ ನಾನು ನಿಮ್ಮ ಜತೆಗಿರುತ್ತೇನೆ ಎಂದ ಶಾಸಕರು, ದೇಗುಲದ ರಸ್ತೆ ಕಾಂಕ್ರಿಟೀಕರಣಕ್ಕೆ ಅನುದಾನ ನೀಡುವುದಾಗಿ ಪ್ರಕಟಿಸಿದರು.

ಪ್ರತಿಷ್ಠೋತ್ಸವ ಸಮಿತಿ ಅಧ್ಯಕ್ಷ ಮುರಳೀಧರ ಅರಂತೋಡು ಅಧ್ಯಕ್ಷತೆ ವಹಿಸಿದ್ದರು. ಉಬರಡ್ಕ ಮಿತ್ತೂರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಸೂಂತೋಡು, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮಾಧವ ಗೌಡ ಕೆ,, ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ಪ್ರಕಾಶ್ ಬಿ.ಎನ್., ಬಂಟ್ವಾಳ ತಾಲೂಕು ಮಡಿವಾಳ ಸಂಘದ ಅಧ್ಯಕ್ಷ ಹರೀಶ್ ಮಂಕುಡೆ, ಪುತ್ತೂರು ತಾಲೂಕು ಮಡಿವಾಳ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಬಿ.ಎನ್., ಬೆಳ್ತಂಗಡಿ ತಾಲೂಕು ಮಡಿವಾಳ ಸಂಘದ ಅಧ್ಯಕ್ಷ ಶ್ರೀಧರ, ಮೂಡಬಿದ್ರೆ ತಾಲೂಕು ಮಡಿವಾಳ ಸಂಘದ ಅಧ್ಯಕ್ಷ ಗಣೇಶ್ ಕಡಂದಲೆ, ಕಾಸರಗೋಡು ಮಡಿವಾಳ ಸಂಘದ ಅಧ್ಯಕ್ಷ ಬಾಬು ನೀರ್ಚಾಲ್, ಪುತ್ತೂರಿನ ಉದ್ಯಮಿ ಉಮಾನಾಥ ಬಪ್ಪಳಿಗೆ, ಶ್ರೀಮತಿ ನಾಗವೇಣಿ ಉಮೇಶ್ ಗಬ್ಬಡ್ಕ ಮುಖ್ಯ ಅತಿಥಿಗಳಾಗಿದ್ದರು.

ಶ್ರೀ ವೀರಭದ್ರ ದೇವರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರೀಶ ಬೂಡುಪನ್ನೆ ಸ್ವಾಗತಿಸಿದರು. ಸುಳ್ಯ ತಾಲೂಕು ಮಡಿವಾಳರ ಸಂಘದ ಪ್ರಧಾನ ಕಾರ್ಯದರ್ಶಿ ಜನಾರ್ದನ ಚೊಕ್ಕಾಡಿ ಪ್ರಸ್ತಾವನೆಗೈದರು. ನಾಗರಾಜ್ ಜೇಡಿಗುಂಡಿ ವಂದಿಸಿದರು. ವೆಂಕಟ್ ಅನಂತಾಡಿ, ರಚನಾ ಕುಂದರ್, ಮಮತಾ ಚೊಕ್ಕಾಡಿ ಕಾರ್ಯಕ್ರಮ ನಿರೂಪಿಸಿದರು.

ಸುಳ್ಯ ತಾಲೂಕು ಮಡಿವಾಳ ಸಂಘದ ಅಧ್ಯಕ್ಷ ಲೋಕೇಶ್ ಮಡಿವಾಳ , ಶ್ರೀ ವೀರಭದ್ರ ದೇವರ ಭಂಡಾರ ಮನೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉಮೇಶ್ ಮಡಿವಾಳ, ಪ್ರಧಾನ ಕಾರ್ಯದರ್ಶಿ ಹಿಮಕರ ಮಂಡೆಕೋಲು, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಸಚಿನ್ ಪೆರಾಜೆ, ಪ್ರತಿಷ್ಟೋತ್ಸವ ಸಮಿತಿ ಕಾರ್ಯದರ್ಶಿ ಪದ್ಮನಾಭ ಗಬ್ಬಡ್ಕ ಮೊದಲಾದವರು ಉಪಸ್ಥಿತರಿದ್ದರು.

ಮಡಿವಾಳ ಸಮುದಾಯದ ವಿವಿಧ ಸಾಧಕರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.