ರಂಗಮನೆ ಚಿಣ್ಣರಮೇಳ ಸಮಾರೋಪ

0

ರಂಗೇರಿದ 7 ನಾಟಕಗಳು, 140 ಕಲಾವಿದರು

‘ಅಭಿನಯ ಕಲೆ ಶೈಕ್ಷಣಿಕವಾಗಿ ಪೂರಕ’- ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ

” ಅಭಿನಯ ಕಲೆ ಪ್ರತಿಯೊಬ್ಬರ ಬದುಕಿನಲ್ಲೂ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಯಾವುದೇ ಸಂದರ್ಭದಲ್ಲೂ ಸಂವಹನಕ್ಕೆ ಪ್ರತಿಯೊಬ್ಬರಲ್ಲೂ ಅಭಿನಯ ಬೇಕೇ ಬೇಕು. ಇದು ಶೈಕ್ಷಣಿಕವಾಗಿಯೂ ಪೂರಕ. ರಂಗಮನೆಯ ಸಾಂಸ್ಕೃತಿಕ ಕಲಾ ವಾತಾವರಣ ಬೇರೆಲ್ಲೂ ನೋಡ ಸಿಗದು.
ಮನೆಯೇ ರಂಗಮಂದಿರವಾದ ರೀತಿ ನಿಜಕ್ಕೂ ಆಶ್ಚರ್ಯ , ಜೀವನ್ ರಾಂ ಅಪರೂಪದ ರಂಗ ಸಾಧಕ ” ಎಂದು ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿರುವ ಎಂ.ಕೃಷ್ಣಪ್ಪ ಹೇಳಿದರು.

ಅವರು ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ನಡೆದ ಡಾ| ಜೀವನ್ ರಾಂ ಸುಳ್ಯ ನಿರ್ದೇಶನದ 34 ನೇ ವರ್ಷದ ರಾಜ್ಯಮಟ್ಟದ ಅಭಿನಯ ಪ್ರಧಾನ ಚಿಣ್ಣರಮೇಳದ ಸಮಾರೋಪದಲ್ಲಿ ಮಕ್ಕಳ ಏಳೂ ನಾಟಕಗಳನ್ನು ವೀಕ್ಷಿಸಿ ಮಾತನಾಡಿದರು.

ಯೋಗ, ಯಕ್ಷಗಾನ, ನಾಟಕ, ಸಂಗೀತ, ಚಿತ್ರಕಲೆ ಇತ್ಯಾದಿಗಳಲ್ಲಿ ಸಾಧನೆಗೈಯ್ಯುತ್ತಿರುವ ಬಹುಮುಖ ಪ್ರತಿಭೆ
ಹಾರ್ದಿಕ ಕೆರೆಕ್ಕೋಡಿ ಇವಳಿಗೆ 2025 ನೇ ಸಾಲಿನ ರಂಗಮನೆಯ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ರಂಗಮನೆ ಅಧ್ಯಕ್ಷ ಡಾ| ಜೀವನ್ ರಾಂ ಸುಳ್ಯ ರವರು ಸ್ವಾಗತಿಸಿದರು.
ಸಮೂಹ ಸಂಪನ್ಮೂಲ ವ್ಯಕ್ತಿ ಮಮತಾ ಕೆ. ಹಾರ್ದಿಕಳನ್ನು ಪರಿಚಯಿಸಿದರು. ಶಿಬಿರದ ಸಂಚಾಲಕ ಪ್ರಸನ್ನ ಐವರ್ನಾಡು ಕಾರ್ಯಕ್ರಮ ನಿರೂಪಿಸಿದರು. ರವೀಶ್ ಪಡ್ಡಂಬೈಲು ವಂದಿಸಿದರು. ವೇದಿಕೆಯಲ್ಲಿ ರಂಗಮನೆ ಪದಾಧಿಕಾರಿಗಳಾದ
ಡಾ.ವಿದ್ಯಾಶಾರದ, ಲತಾ ಮಧುಸೂದನ್, ವಾಮನ ಕೊಯಿಂಗಾಜೆ, ಶ್ರೀಹರಿ ಪೈಂದೋಡಿ ಮತ್ತು ಶಿಬಿರದ ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತಿರಿದ್ದರು.
ಭಾಗವಹಿಸಿದ ಎಲ್ಲ ಮಕ್ಕಳಿಗೂ ಪ್ರಮಾಣ ಪತ್ರ ನೀಡಲಾಯಿತು.

ರಂಗೇರಿದ ಮಕ್ಕಳ ನಾಟಕೋತ್ಸವ

ಭಯಬಿಟ್ಟು ಅಭಿನಯಿಸಿದ 140 ಮಕ್ಕಳು

ರಂಗಮನೆ ಚಿಣ್ಣರಮೇಳದಲ್ಲಿ ಸಿದ್ಧಗೊಂಡ ಏಳು ನಾಟಕಗಳ ಪ್ರದರ್ಶನ ನೋಡುಗರ ಪ್ರಶಂಸೆಗೆ ಪಾತ್ರವಾಯಿತು. ರಾಜ್ಯದ ನಾನಾ ಕಡೆಗಳಿಂದ ಆಗಮಿಸಿದ 140 ಮಕ್ಕಳೂ ಭಯಬಿಟ್ಟು ರಂಗದಲ್ಲಿ ಲೀಲಾಜಾಲವಾಗಿ ಓಡಾಡುತ್ತಾ ಪ್ರದರ್ಶಿಸಿದ ನಾಟಕಗಳು ಒಂದಕ್ಕಿಂತ ಒಂದು ಭಿನ್ನವಾಗಿತ್ತು.
ಆಪರೇಶನ್ ಕುಕ್ಕುಟ, ಮೂರ್ಖ ಶಿಷ್ಯರು, ಬೊಮ್ಮನ ಹಳ್ಳಿಯ ಕಿಂದರಿ ಜೋಗಿ, ದಿ ಫಾರೆಸ್ಟ್ ಫ್ರೆಂಡ್ ಶಿಪ್, ಕೊಬ್ಬು ಕತ್ತೆ , ಡೆವಿಲ್ ಜೋಕರ್ಸ್, ಕಪ್ಪೆರಾಯ ನಾಟಕಗಳು ಪ್ರದರ್ಶನಗೊಂಡವು. ಮಧುಸೂಧನ ಮೈಸೂರು, ರಾಜೇಂದ್ರ ಪ್ರಸಾದ್ ಮಂಡ್ಯ, ಮಮತಾ ಕಲ್ಮಕಾರು, ಭಾವನಾ ಕೆರೆಮಠ, ಹಾರಂಬಿ ಯತಿನ್ ವೆಂಕಪ್ಪ , ಮನುಜ ನೇಹಿಗ, ಪ್ರೀತಮ್ ಎಸ್.ಹಾಸನ ಇವರು ನಾಟಕಗಳನ್ನು ನಿರ್ದೇಶಿಸಿದ್ದರು.
ವಿಜಯ್ ಹಕ್ಕಿ ಬೆಳಗಾಂ, ಕೃಪಾ ನಾಯಕ್ ತುಮಕೂರು, ತೇಜಸ್ವಿನಿ ತರೀಕೆರೆ ಮತ್ತು ನಿಶ್ಮಿತಾ ಬೆಂಗಳೂರು ಇವರು ಸಹ ನಿರ್ದೇಶನ ನೀಡಿದ್ದರು. ಶಿವಗಿರಿ ಕಲ್ಲಡ್ಕ, ಮನುಜ ನೇಹಿಗ, ಮಮತಾ ಕಲ್ಮಕಾರು ಏಳೂ ನಾಟಕಗಳಿಗೆ ಸಂಗೀತ ನೀಡಿದರು.
ಹಾರ್ಧಿಕಾ ಕೆರೆಕ್ಕೋಡಿ ಇವಳಿಂದ ಯೋಗ ಮತ್ತು ರಂಗಮನೆಯ ಮನುಜ ನೇಹಿಗ ಇವರಿಂದ ಮಣಿಪುರಿ ಸ್ಟಿಕ್ ಡ್ಯಾನ್ಸ್ ಪ್ರದರ್ಶನ ನಡೆಯಿತು.
ಕಾರ್ಯಕ್ರಮ ವೀಕ್ಷಣೆಗೆ ರಂಗಮನೆಯ ಪ್ರೇಕ್ಷಾಂಗಣ ಹೆತ್ತವರು ಮತ್ತು ಪೋಷಕರಿಂದ ತುಂಬಿ ತುಳುಕಿತ್ತು.

ಬದುಕಿನ ಅಮೂಲ್ಯ ವಿಚಾರಗಳು

ಶಿಬಿರದ ಮಧ್ಯೆ ಸುಳ್ಯ ಅಗ್ನಿಶಾಮಕ ಇಲಾಖೆಯಿಂದ ಅಗ್ನಿ ಶಮನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವು ಠಾಣಾಧಿಕಾರಿ ಸೋಮನಾಥರ ನೇತೃತ್ವದಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿದ್ದ ನಾಗರಾಜ್ ಪೂಜಾರಿ ಕೋಟ ಇವರು ಅಗ್ನಿ ಜಲ ಆಪತ್ತು- ಪ್ರಾಣರಕ್ಷಣೆಯ ಬಗ್ಗೆ ಉಪನ್ಯಾಸ ನೀಡಿದರು.
ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಯವರು ಮಕ್ಕಳಿಗೆ ರಕ್ತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಿದರು.
ರಂಗಕಲಾವಿದೆ ವಸಂತ ಲಕ್ಷ್ಮೀ ಪುತ್ತೂರು ಅಭಿನಯದ ಬಗೆಗಿನ ತನ್ನ ಅನುಭವವನ್ನು ಹಂಚಿಕೊಂಡರು.
ಸುಳ್ಯ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಮಮತಾ ಕೆ.ಇವರು ಶಿಕ್ಷಣ- ಅಭಿನಯದ ವಿಷಯ ಹಾಡು ಕುಣಿತಗಳ ಮೂಲಕ ಮಕ್ಕಳ ಆಸಕ್ತಿ ಮೂಡಿಸಿದರು.