ಪಂಚಾಯತ್ ಸಭಾಭವನದ ಪಾಕ ಶಾಲೆ ನಿರ್ಮಾಣಕ್ಕೆ 5 ಲಕ್ಷದ ಅನುದಾನ
ಅರಂತೋಡು ಗ್ರಾಮಕ್ಕೆ ಭರಪೂರ ಅನುದಾನದ ಮಾಹಿತಿ

ಅರಂತೋಡು ಗ್ರಾಮ ಪಂಚಾಯತ್ ನ ಎನ್.ಆರ್. ಎಲ್. ಎಂ. ನೂತನ ಕಟ್ಟಡದ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗಿರಥಿ ಮುರುಳ್ಯರವರು ಮೇ. ೨೧ರಂದು ನೆರವೇರಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮವನ್ನು ಉದ್ದೇಶಿ ಮಾತನಾಡಿ, ಆರಂತೋಡು ಗ್ರಾಮ ಪಂಚಾಯತ್ನ ಸಭಾಂಗಣಕ್ಕೆ ಅವಶ್ಯಕತೆ ಇರುವ ಪಾಕಶಾಲೆ ನಿರ್ಮಾಣಕ್ಕೆ ರೂ. ೫ ಲಕ್ಷ ಅನುದಾನದ ಭರವಸೆಯೊಂದಿಗೆ ಅರಂತೋಡು ಗ್ರಾಮಕ್ಕೆ ಬಿಡುಗಡೆಯಾದ ಬರಪೂರ ಅನುದಾನಗಳ ಮಾಹಿತಿ ನೀಡಿದರು.

ಅರಮನೆಗಯದ ಬಳಿ ಬಲ್ನಾಡ್ ಹೊಳೆಗೆ ಸೇತುವೆ ನಿರ್ಮಾಣಕ್ಕೆ ೧.೭೫ಕೋಟಿ ಅನುದಾನ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಅಭಿವೃದ್ಧಿ ಹೊಂದಿದ ರೆಂಜಾಳ- ಬಿಳಿಯಾರು ರಸ್ತೆಯ ರೆಂಜಾಳ ದಿಂದ ಪಿಂಗಾರತೋಟದ ವರೆಗೆ ಮರು ಡಾಂಬರಲೀಕರಣಕ್ಕೆ ಅನುದಾನ ಮತ್ತು ದೇರಾಜೆ -ಕೆರೆಮೂಲೆ ರಸ್ತೆ ಕಾಂಕ್ರಿಟೀಕರಣಕ್ಕೆ ರೂ ೫ಲಕ್ಷ ಅನುದಾನ ಬಿಡುಗಡೆಯಾಗಿರುವುದಾಗಿ ತಿಳಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆಯವರು ಪ್ರಾಸ್ತಾವಿಕ ಮಾತಾಡಿ ಸ್ವಾಗತಿಸಿದರು.















ಮುಖ್ಯ ಅತಿಥಿಯಾಗಿ ಭಾಗವಹಿಸಿದ ಆರಂತೋಡು ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ ಕುತ್ತಮೊಟ್ಟೆ ಮಾತನಾಡಿ ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಂತೋಡು -ತೊಡಿಕಾನ ಅವಳಿ ಗ್ರಾಮದ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆಗೊಳಿಸಿದಕ್ಕೆ ಶಾಸಕರೀಗೆ ಕೃತಜ್ಞತೆ ಸಲ್ಲಿಸಿದರು.

ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಭವಾನಿ ಚಿಟ್ಟನೂರು, ಅರಂತೋಡು ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಪ್ರಮೀಳಾ ಉಳುವಾರು ಉಪಸ್ಥಿತರಿದ್ದರು. ಕಾರ್ಯಕ್ರಮ ದಲ್ಲಿ. ಎನ್. ಆರ್. ಎಲ್. ಎಂ. ತಾಲೂಕು ಅಧಿಕಾರಿಗಳು, ಅರಂತೋಡು ಪಂಚಾಯತ್ ಆಡಳಿತ ಸಮಿತಿ ಸದಸ್ಯರು, ಸಹಕಾರಿ ಸಂಘ ದ ನಿರ್ದೇಶಕರುಗಳು, ಗ್ರಾಮದ ಸಂಘ, ಸಂಸ್ಥೆಯ ಪದಾಧಿಕಾರಿಗಳು ಹಾಗೂ ಊರಿನ ನಾಗರೀಕರು ಹೆಚ್ಚಿನ ಸಂಖ್ಯೆ ಭಾಗವಹಿಸಿದ್ದರು.ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಜಯಪ್ರಕಾಶ್ ಎಂ.ಆರ್.ರವರು ಭಯೋತ್ಪಾದನಾ ವಿರೋಧಿ ದಿನಾಚರಣೆಯ ಪ್ರಮಾಣವಚನ ಬೋಧಿಸಿ ವಂದಿಸಿದರು. ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತ್ ಮತ್ತು ಸ್ವಚ್ಛತಾ ಘಟಕದ ಸಿಬ್ಬಂದಿಗಳು ಸಹಕರಿಸಿದರು.










